
ಬೆಳಗಾವಿ (ಸೆ.2): ನವಜಾತ ಶಿಶುವೊಂದನ್ನು ಮರಕ್ಕೆ ನೇತು ಹಾಕಿದ ಚೀಲದಲ್ಲಿ ಪತ್ತೆಯಾದ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಅಶೋಕನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ನೇರಸಾ ಗ್ರಾಮದ ಅಂಗನವಾಡಿ ಕೇಂದ್ರದ ಬಳಿ ನಡೆದಿತ್ತು. ಇದೀಗ ಈ ಪ್ರಕರಣ ತಿರುವು ಪಡೆದಿದೆ. ಪೊಲೀಸರ ತನಿಖೆ ವೇಳೆ ಅಪ್ರಾಪ್ತರ ಪ್ರೇಮ ಪ್ರಕರಣ ಹೊರಬಂದಿದೆ. 19 ವರ್ಷದ ಯುವಕ ಮತ್ತು 16 ವರ್ಷದ ಬಾಲಕಿ ಈ ಗಂಡು ಮಗುವಿಗೆ ಜನ್ಮದಾತರು ಎಂಬುದು ಈಗ ಬಯಲಾಗಿದೆ. ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದ ಆರೋಪ ಈಗ ಯುವಕನ ವಿರುದ್ಧ ಕೇಳಿಬಂದಿದೆ. ಘಟನೆ ನಡೆದು ವಾರದ ಬಳಿಕ ಖಾನಾಪುರ ಠಾಣೆ ಪೊಲೀಸರು ಈ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಸದ್ಯ ಯುವಕನನ್ನು ಬಂಧಿಸಿರುವ ಪೊಲೀಸರು ಅಪ್ರಾಪ್ತೆ ಯುವತಿಯನ್ನು ರಕ್ಷಿಸಿದ್ದಾರೆ. ಬಂಧಿತ ಯುವಕನನ್ನು ನೆರಸಾ ಗೌಳಿವಾಡ ಗ್ರಾಮದ ಮಲ್ಲು ಅಪ್ಪು ಪಿಂಗಳೆ (19) ಎಂದು ಗುರುತಿಸಲಾಗಿದೆ. ಯುವಕನ ವಿರುದ್ಧ ಪೋಕ್ಸೋಅಡಿ ಪ್ರಕರಣ ದಾಖಲು ಮಾಡಲಾಗಿದೆ. ಖಾನಾಪುರ ತಾಲೂಕಿನ ನೆರಸಾ ಗೌಳಿವಾಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆಗಸ್ಟ್ 25 ರಂದು ನವಜಾತ ಗಂಡು ಶಿಶುವನ್ನು ಚೀಲದಲ್ಲಿಟ್ಟು ಅಂಗನವಾಡಿ ಬಳಿಯ ಮರಕ್ಕೆ ನೇತುಹಾಕಿ ತೆರಳಿದ್ದರು. ದನಕರುಗಳಿಗೆ ಮೇವು ತರಲು ಹೊರಟಿದ್ದ ಸ್ಥಳೀಯರು ಗಿಡದ ಮೇಲೆ ನೇತಾಡುತ್ತಿದ್ದ ಚೀಲವನ್ನು ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿತ್ತು.
Mandya Crime: ಹೇಮಾವತಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ
ಬಳಿಕ ಆಶಾ ಕಾರ್ಯಕರ್ತೆ ಸತ್ಯವತಿ ದೇಸಾಯಿ ತಕ್ಷಣ ಆ್ಯಂಬುಲೆನ್ಸ್ ಕರೆಯಿಸಿ ತಾಲೂಕು ಆಸ್ಪತ್ರೆಗೆ ರವಾನಿಸಿದ್ದರು. ಮಕ್ಕಳ ತಜ್ಞ ಡಾ.ಪವನ್ ಪೂಜಾರಿ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಗುವನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಸದ್ಯ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಗಂಡು ಶಿಶುಗೆ ಚಿಕಿತ್ಸೆ ಮುಂದುವರೆದಿದೆ.
ಹೆಂಡತಿಗೆ ಮೆಸೇಜ್ ಮಾಡಿದ್ದೇ ತಪ್ಪಾಯ್ತು! ಅಂಗಡಿಯಲ್ಲಿ ಕೂತಿದ್ದವನಿಗೆ 2ನೇ ಗಂಡ ಕೊಟ್ಟ ಶಾಕ್!
ಆರು ತಿಂಗಳಲ್ಲಿ ಎರಡನೇ ಘಟನೆ:
ಇದೇ ರೀತಿಯ ಘಟನೆ ಕಳೆದ ಆರು ತಿಂಗಳ ಹಿಂದೆ ಖಾನಾಪುರ ಪಟ್ಟಣದಲ್ಲಿ ಸಂಭವಿಸಿತ್ತು. ಪಟ್ಟಣದ ತಹಸೀಲ್ದಾರ್ ಕಚೇರಿ ಬಳಿ ನವಜಾತ ಗಂಡು ಶಿಶುವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಇಟ್ಟು ಹೋಗಿದ್ದರು. ಬೆಳಗ್ಗೆ ಕರ್ತವ್ಯ ನಿರತ ಪಟ್ಟಣ ಪಂಚಾಯ್ತಿಯ ಸ್ವಚ್ಛತಾ ಕಾರ್ಮಿಕರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆಗಲೂ ಕೂಡ ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದುವರೆಗೂ ಮಗುವಿನ ಪೋಷಕರ ಪತ್ತೆ ಸಿಕ್ಕಿಲ್ಲ. ಈಗ ತಾಲೂಕಿನಲ್ಲಿ ವರದಿಯಾದ ಎರಡನೇ ಘಟನೆ ತಾಲೂಕಿನಲ್ಲಿ ಬಾಲ್ಯವಿವಾಹ ಮತ್ತು ಅನೈತಿಕ ಸಂಬಂಧಗಳಿಂದ ಗರ್ಭಧರಿಸುತ್ತಿರುವ ಪ್ರಕರಣಗಳಿಗೆ ಪುಷ್ಟಿನೀಡುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ