ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ: ಮಂಗಳೂರಿನ ಮೂವರು ಸಾವು!

By Suvarna NewsFirst Published Feb 4, 2023, 1:27 PM IST
Highlights

ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರಿನ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ. ಸೌದಿ ಅರೇಬಿಯಾದ ರಿಯಾದ್ ಪ್ರಾಂತ್ಯದ ಖುರೈಸ್ ರಸ್ತೆಯ ಬಳಿ ಅಪಘಾತ ನಡೆದಿದೆ.‌ 

ಮಂಗಳೂರು (ಫೆ.04): ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರಿನ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ. ಸೌದಿ ಅರೇಬಿಯಾದ ರಿಯಾದ್ ಪ್ರಾಂತ್ಯದ ಖುರೈಸ್ ರಸ್ತೆಯ ಬಳಿ ಅಪಘಾತ ನಡೆದಿದೆ.‌ ಮಂಗಳೂರು ಮೂಲದ ಅಕೀಲ್, ನಾಸಿರ್, ರಿಝ್ವಾನ್ ಸಾವನ್ನಪ್ಪಿದ ಯುವಕರು. ನಾಲ್ವರು ಕಾರಿನಲ್ಲಿ ಹೋಗುತ್ತಿದ್ದಾಗ ಖುರೈಸ್ ರಸ್ತೆಯ ಬಳಿ ಒಂಟೆಗೆ ಡಿಕ್ಕಿಯಾಗಿ ದುರಂತ ಸಂಭವಿಸಿದೆ. 

ಕಾರಿನಲ್ಲಿದ್ದ ನಾಲ್ವರು ಕೂಡ SAQCO ಎಂಬ ಕಂಪನಿಯಲ್ಲಿ ನೌಕರರಾಗಿದ್ದರು ಎನ್ನಲಾಗಿದೆ. ಮಂಗಳೂರಿನ ಮೂವರ ಸಹಿತ ಕಾರಿನಲ್ಲಿದ್ದ ಓರ್ವ ಬಾಂಗ್ಲಾದೇಶದ ಯುವಕ ಕೂಡ ಮೃತಪಟ್ಟ ಮಾಹಿತಿ ಲಭ್ಯವಾಗಿದೆ. ಮೃತದೇಹಗಳನ್ನು ಸೌದಿಯ ಅಲ್ ಹಸ್ಸಾ ಆಸ್ಪತ್ರೆಗೆ ಸಾಗಿಸಲಾಗಿದೆ. ಸದ್ಯ ಮಂಗಳೂರಿನ ಸಂತ್ರಸ್ತ ಕುಟುಂಬವನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ. ಅಕೀಲ್ ಮಂಗಳೂರಿನ ಬೋಳಾರ್ ನಿವಾಸಿಯಾಗಿದ್ದು, ರಿಝ್ವಾನ್ ಹಳೆಯಂಗಡಿ ಕದಿಕೆ ನಿವಾಸಿ ಎಂದು ತಿಳಿದು ಬಂದಿದೆ.

ಹಿಟ್ ಅಂಡ್ ರನ್: ತುಳು ಸ್ಟ್ಯಾಂಡ್ ಅಪ್ ಕಾಮಿಡಿ ಯೂಟ್ಯೂಬರ್ ಬಂಧನ!

ರಾಯಲ್‌ ಎನ್‌ಫೀಲ್ಡ್‌ಗೆ ಬೈಕ್‌ ಡಿಕ್ಕಿ, ಯುವತಿ ಸಾವು: ನಿಯಂತ್ರಣ ತಪ್ಪಿದ ಒಂದು ಬೈಕ್‌ ಮತ್ತೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರಿಣಿ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೊಸೂರು ರಸ್ತೆಯ ಗಾರ್ವೆಬಾವಿ ಪಾಳ್ಯದಲ್ಲಿ ನಡೆದಿದೆ. ಎಲೆಕ್ಟ್ರಾನಿಕ್‌ ಸಿಟಿಯ ಗೊಲ್ಲಹಳ್ಲಿ ರಸ್ತೆ ಅಪಾರ್ಚ್‌ಮೆಂಟ್‌ ನಿವಾಸಿ ಶುಭಶ್ರೀ(28) ಮೃತ ದುರ್ದೈವಿ. ಈಕೆಯ ಸ್ನೇಹಿತ ಸವಾರ ವಿಮಲ್‌ ಚಂದ್ರ ಮೋಹನ್‌(30) ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬುಧವಾರ ತಡರಾತ್ರಿ 12.15ರ ಸುಮಾರಿಗೆ ಎಲೆಕ್ಟ್ರಾನಿಕ್‌ ಸಿಟಿ ಹೊಸೂರು ಕಡೆಯ ಮಾರ್ಗದ ಗಾರ್ವೆಬಾವಿಪಾಳ್ಯದ ಪೈ ಫರ್ನಿಚರ್‌ ಶೋ ರೂಮ್‌ ಬಳಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖಾಸಗಿ ಕಂಪನಿಯೊಂದರ ಮಾರ್ಕೆಟಿಂಗ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಶುಭಶ್ರೀ, ಬುಧವಾರ ರಾತ್ರಿ ತನ್ನ ಸ್ನೇಹಿತ ವಿಮಲ್‌ ಚಂದ್ರ ಮೋಹನ್‌ ಜತೆಗೆ ಕೆಟಿಎಂ ದ್ವಿಚಕ್ರ ವಾಹನದಲ್ಲಿ ಸಿಲ್‌್ಕ ಬೋರ್ಡ್‌ ಕಡೆಯಿಂದ ಎಲೆಕ್ಟ್ರಾನಿಕ್‌ ಸಿಟಿ ಕಡೆಗೆ ಬರುತ್ತಿದ್ದರು. ಈ ವೇಳೆ ಗಾರ್ವೆಬಾವಿಪಾಳ್ಯದ ಪೈ ಫರ್ನಿಚರ್‌ ಶೋ ರೂಮ್‌ ಬಳಿ ಬಂದಾಗ ಸವಾರ ವಿಮಲ್‌ ಚಂದ್ರ ಬಲಭಾಗದಲ್ಲಿ ಹೋಗುತ್ತಿದ್ದ ರಾಯಲ್‌ ಎನ್‌ಫೀಲ್ಡ್‌ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಬೈಕ್‌ ಸಹಿತ ವಿಮಲ್‌ ಚಂದ್ರ ಹಾಗೂ ಶುಭಶ್ರೀ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಶುಭಶ್ರೀ ತಲೆಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದೆ. 

Chikkamagaluru: ಕರ್ತವ್ಯಲೋಪದ ಆರೋಪ: ಗ್ರಾಮ ಪಂಚಾಯತಿ ಪಿಡಿಓ ಗೋಪಾಲಹಾಂಡ ಸಸ್ಪೆಂಡ್!

ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಪರೀಕ್ಷಿಸಿದ ವೈದ್ಯರು, ಶುಭಶ್ರೀ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಅಪಘಾತದಲ್ಲಿ ರಾಯಲ್‌ ಎನ್‌ಫೀಲ್ಡ್‌ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತಕ್ಕೆ ಕೆಟಿಎಂ ದ್ವಿಚಕ್ರ ವಾಹನ ಸವಾರ ವಿಮಲ್‌ ಚಂದ್ರ ಅತೀ ವೇಗ ಹಾಗೂ ಅಜಾಗರೂಕ ಚಾಲನೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಎಲೆಕ್ಟ್ರಾನಿಕ್‌ ಸಿಟಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!