
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು(ಜ.10): ದೇವಾಲಯಗಳನ್ನೇ ಟಾರ್ಗೆಟ್ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಘಂಟೆಗಳನ್ನೇ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರಿನ ಕೆಸರೆಯ ವಿವಿಧ ಬಡಾವಣೆಗಳ ನಿವಾಸಿಗಳಾಗಿರುವ ಅಮ್ಜದ್ ಆಹಮದ್, ಸಮಿವುಲ್ಲಾ, ಜುಲ್ಪಿಕರ್ ಬಂಧಿತ ಆರೋಪಿಗಳು. ಜೊತೆಗೆ ಗುಜರಿ ವ್ಯಾಪಾರಿ ಹೈದರ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಖದೀಮರು ಕೊಡಗು ಜಿಲ್ಲೆಯ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕರಡ ಮಲೆತಿರಿಕೆ ಈಶ್ವರ ದೇವಸ್ಥಾನ, ಕೆದಮಳ್ಳೂರಿನ ಶ್ರೀ ಮಹದೇವ ದೇವಾಸ್ಥಾನ, ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಮಕ್ಕಿ ಶಾಸ್ತವು ದೇವಾಸ್ತಾನ, ಪೊನ್ನಂಪೇಟೆ ತಾಲ್ಲೂಕಿನ ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಿಟ್ಟೂರು ಕಾರ್ಮಾಡಿನ ಕಾಲಭೈರವೇಶ್ವ ದೇವಸ್ಥಾನ, ಬಿಳೂರಿನ ಕಲ್ಲುಗುಡಿ ಶ್ರೀ ಈಶ್ವರ ದೇವಸ್ಥಾನ ಹಾಗೂ ಹಳ್ಳಿಗಟ್ಟಿನ ಶ್ರೀ ಭದ್ರಕಾಳಿ ದೇವಸ್ಥಾನ ಅಷ್ಟೇ ಅಲ್ಲ, ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಮಾಯಮುಡಿ ಕಮಟೆ ಶ್ರೀ ಮಹದೇವ ದೇವಸ್ಥಾನಗಳಲ್ಲಿ 800 ಕೆ.ಜಿ.ಯ ಕಂಚು, ತಾಮ್ರ ಸೇರಿದಂತೆ ವಿವಿಧ ಅದಿರುಗಳ ಗಂಟೆಗಳನ್ನು ಕಳವು ಮಾಡಲಾಗಿತ್ತು.
2022 ರ ಫೆಬ್ರವರಿಯಿಂದ ಅಕ್ಟೋಬರ್ ತಿಂಗಳವರೆಗೆ ಗಂಟೆಗಳ ಕಳ್ಳತನ ಮಾಡಿದ್ದರು. ಕಳವು ಮಾಡಿದ್ದ ಗಂಟೆಗಳನ್ನು ಕರಗಿ ಅವುಗಳನ್ನು ಕಾರ್ಖಾನೆಗಳಿಗೆ ಮಾರಾಟ ಮಾಡುವ ಯೋಜನೆಯನ್ನು ಈ ಖದೀಮರು ರೂಪಿಸಿಕೊಂಡಿದ್ದರು ಎನ್ನುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಈ ಕುರಿತು ವಿವಿಧ ಪೊಲೀಸ್ ಠಾಣೆಗಳಲ್ಲಿ 8 ಪ್ರಕರಣಗಳು ದಾಖಲಾಗಿದ್ದವು. ಘಂಟೆಗಳನ್ನು ಕಳವು ಮಾಡುತ್ತಿದ್ದ ಪ್ರಕರಣದ ಬೆನ್ನುಬಿದ್ದಿದ್ದ ವಿರಾಜಪೇಟೆ ಡಿವೈಎಸ್ಪಿ ನಿರಂಜನ್ ರಾಜೇ ಅರಸ್ ಮತ್ತು ಮಡಿಕೇರಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ 46 ಕ್ಕೂ ಹೆಚ್ಚು ಪೊಲೀಸರು ತನಿಖೆ ಆರಂಭಿಸಿದ್ದರು.
ಖದೀಮರೆಲ್ಲೂ ಒಂದೇ ಕುಟುಂಬದವರಾಗಿದ್ದು, ಗುಜರಿ ವ್ಯಾಪಾರ ಮಾಡುವಾತನೂ ಇವರದೇ ಕುಟುಂಬದವನು. ಇವರೆಲ್ಲರೂ ಕೊಡಗು ಅಷ್ಟೇ ಅಲ್ಲ, ಮೈಸೂರು, ಚಾಮರಾಜನಗರ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹತ್ತಾರು ದೇವಾಲಯಗಳಲ್ಲಿ ಗಂಟೆಗಳನ್ನು ಕಳವು ಮಾಡುತ್ತಿದ್ದರು. ಪ್ರಕರಣವನ್ನು ಭೇದಿಸಿರುವ ಪೊಲೀಸರನ್ನು ಕೊಡಗು ಎಸ್.ಪಿ. ಎಂ.ಎ ಅಯ್ಯಪ್ಪ ಪ್ರಶಂಸಿದ್ದಾರೆ.
ಶಬರಿಮಲೆ ಯಾತ್ರಾರ್ಥಿಗಳು ರಾಜಕಾರಣಿಗಳು, ಸೆಲೆಬ್ರಿಟಿಗಳ ಪೋಸ್ಟರ್ ಕೊಂಡೊಯ್ಯಕೂಡದು; ಕೋರ್ಟ್ ಆದೇಶ
ಈ ಖದೀಮರು ಘಂಟೆಗಳನ್ನು ಕಳವು ಮಾಡುತ್ತಿದ್ದ ರೀತಿಯೇ ರೋಚಕವಾಗಿತ್ತು. ಮೊದಲಿಗೆ ಬೈಕಿನಲ್ಲಿ ದೇವಾಲಯಗಳ ಬಳಿಗೆ ಬರುತ್ತಿದ್ದ ಕಳ್ಳರು ದೇವಾಲಯಗಳ ಆವರಣ ಹೇಗಿದೆ, ಕಳವು ಮಾಡಲು ಸುಲಭವಾಗಿದೆಯೇ, ಇಲ್ಲ ಸನ್ನಿವೇಶ ಕ್ಲಿಷ್ಟಕರವಾಗಿದೆಯೇ ಎನ್ನುವುದನ್ನು ಪರಿಶೀಲಿಸುತ್ತಿದ್ದರು. ಬಳಿಕ ಮತ್ತೊಂದು ಬಾರಿ ಕಾರಿನಲ್ಲಿ ಬರುತ್ತಿದ್ದ ಇವರು ಸಿಸಿಟಿವಿಗಳಿದ್ದರೆ ಅವುಗಳಿಗೆ ತಾವು ಸೆರೆಯಾಗದಂತೆ ಸಿಸಿ ಕ್ಯಾಮೆರಾಗಳ ಹಿಂದಿನಿಂದ ಬಂದು ಅವುಗಳನ್ನು ಬೇರೆಡೆಗೆ ತಿರುಗಿಸುತ್ತಿದ್ದರು. ಸಾಧ್ಯವಾಗದಿದ್ದರೆ ಅವುಗಳ ಸಂಪರ್ಕ ಕಡಿತ ಮಾಡುತ್ತಿದ್ದರು. ನಂತರ ದೇವಾಲಯಗಳಲ್ಲಿ ಗಂಟೆಗಳನ್ನು ಕಳ್ಳತನ ಮಾಡುತ್ತಿದ್ದರು ಎಂದು ಕೊಡಗು ಎಸ್.ಪಿ. ಅಯ್ಯಪ್ಪ ತಿಳಿಸಿದ್ದಾರೆ.
ಈ ದೇವಾಲಯಕ್ಕೆ ಹೋಗ್ಬೇಕಂದ್ರೆ ಪುರುಷರು ಮಹಿಳೆಯರಂತೆ ವೇಷ ಧರಿಸ್ಲೇಬೇಕು!
ಇಷ್ಟೇ ಅಲ್ಲ ಕೊಡಗಿನ ದೇವಾಲಯಗಳು ಸಾಮಾನ್ಯವಾಗಿ ದೇವರ ಬನ ಅಥವಾ ಕಾಡಿನ ಪ್ರದೇಶದಂತಹ ಸ್ಥಳಗಳಲ್ಲಿ ಇರುವುದರಿಂದ ಬಹಳ ಸುಲಭವಾಗಿ ಘಂಟೆಗಳನ್ನು ಕದಿಯುತ್ತಿದ್ದರು ಎಂದು ಎಸ್ಪಿ ತಿಳಿಸಿದ್ದಾರೆ. ಪ್ರಕರಣವನ್ನು ಬೇಧಿಸಲು ಹೊರಟ ಪೊಲೀಸರು ಮುಖ್ಯವಾಗಿ ಪೊನ್ನಂಪೇಟೆ, ವಿರಾಜಪೇಟೆಯಿಂದ ಆರಂಭಿಸಿ ಮೈಸೂರು ವರೆಗೆ ಮುಖ್ಯ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನು ಸಂಗ್ರಹಿಸಿದ್ದಾರೆ. ಜೊತೆಗೆ ಫೋನ್ಗಳ ನೆಟ್ವರ್ಕ್ಗಳನ್ನು ಆಧರಿಸಿ ಮೂರು ತಿಂಗಳ ಕಾಲ ತನಿಖೆ ಮಾಡಿದ್ದಾರೆ. ಆ ಮೂಲಕ ಖದೀಮರನ್ನು ಹೆಡಮುರಿ ಕಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ