ವರಮಹಾಲಕ್ಷ್ಮಿ ದಿನವೇ ಬಾಗಿಲು ಮುರಿದು ಚಿನ್ನ ಕದ್ದಿದ್ದವರ ಸೆರೆ

By Suvarna NewsFirst Published Sep 1, 2022, 7:06 AM IST
Highlights

ವರಮಹಾಲಕ್ಷ್ಮಿ ದಿನವೇ ಬಾಗಿಲು ಮುರಿದು ಚಿನ್ನ ಕದ್ದಿದ್ದವರನ್ನು ಬಂಧಿಸಲಾಗಿದೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿ ಕೈಚಳಕ ತೋರಿದ್ದ ಖದೀಮರಿಂದ 40 ಲಕ್ಷ ಮೌಲ್ಯದ 800 ಗ್ರಾಂ ತೂಕದ ಚಿನ್ನಾಭರಣ ಹಾಗೂ 3.30 ಕೆ.ಜಿ. ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಬೆಂಗಳೂರು (ಸೆ.1): ಐಷಾರಾಮಿ ಜೀವನಕ್ಕಾಗಿ ಮನೆಗಳಿಗೆ ಕನ್ನ ಹಾಕುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೆ.ಪಿ.ನಗರ 7ನೇ ಹಂತದ ನಿವಾಸಿ ಶಂಕರ್‌ ಅಲಿಯಾಸ್‌ ಆಟೋ ಶಂಕರ್‌(44) ಮತ್ತು ಬಿಳೇಕಹಳ್ಳಿ ದೊರೆಸ್ವಾಮಿ ಪಾಳ್ಯದ ರವಿ(36) ಬಂಧಿತರು. ಆರೋಪಿಗಳಿಂದ .40 ಲಕ್ಷ ಮೌಲ್ಯದ 800 ಗ್ರಾಂ ತೂಕದ ಚಿನ್ನಾಭರಣ ಹಾಗೂ 3.30 ಕೆ.ಜಿ. ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ಬಂಧನದಿಂದ ಬೈಯಪ್ಪನಹಳ್ಳಿಯ ಠಾಣೆಯ ಎರಡು ಹಾಗೂ ಮಹಾಲಕ್ಷ್ಮಿ ಲೇಔಟ್‌ ಠಾಣೆಯಲ್ಲಿ ದಾಖಲಾಗಿದ್ದ ಮೂರು ಮನೆಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳಿಬ್ಬರು ವೃತ್ತಿಪರ ಕಳ್ಳರಾಗಿದ್ದು, ಕಳೆದ ಎರಡು ದಶಕಗಳಿಂದ ಅಪರಾಧ ಪ್ರಕರಣಗಳಲ್ಲಿ ತೊಡಗಿದ್ದಾರೆ. ಈ ಹಿಂದೆ ಇವರ ವಿರುದ್ಧ ಎಚ್‌ಎಎಲ್‌, ಕೋರಮಂಗಲ, ಕೆ.ಆರ್‌.ಪುರ, ರಾಮಮೂರ್ತಿ ನಗರ, ಮೈಕೋ ಲೇಔಟ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಬಂಧನಕ್ಕೂ ಒಳಗಾಗಿ ಜೈಲು ಸೇರಿದ್ದರು. ಜಾಮೀನು ಪಡೆದು ಹೊರಬಂದ ಬಳಿಕವೂ ಕಳವು ಕೃತ್ಯ ಮುಂದುವರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಬ್ಬದ ದಿನವೇ ಕಳ್ಳತನ: ಮಹಾಲಕ್ಷ್ಮಿ ಲೇಔಟ್‌ನ ಬಾಬು ಎಂಬುವವರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ದಿನ ಲಕ್ಷ್ಮಿ ವಿಗ್ರಹಕ್ಕೆ ಚಿನ್ನಾಭರಣ ಅಲಂಕಾರ ಮಾಡಿ ಪೂಜೆ ಮಾಡಲಾಗಿತ್ತು. ಅಂದು ಮನೆಯ ಸದಸ್ಯರು ಕಾರ್ಯ ನಿಮಿತ್ತ ಭುವನೇಶ್ವರಿ ನಗರಕ್ಕೆ ತೆರಳುವ ಮುನ್ನ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ತೆರಳಿದ್ದರು. ಅಂದೇ ರಾತ್ರಿ ದುಷ್ಕರ್ಮಿಗಳು ಕಿಟಿಕಿ ಹಾಗೂ ಹಿಂಬದಿ ಬಾಗಿಲ ಲಾಕ್‌ ಕಿತ್ತು ಮನೆ ಪ್ರವೇಶಿಸಿ, ಲಕ್ಷ್ಮಿ ವಿಗ್ರಹ ಸಹಿತ ಚಿನ್ನಾಭರಣ, ಬೆಳ್ಳಿ ಸಾಮಗ್ರಿಗಳನ್ನು ಕದ್ದು ಪರಾರಿಯಾಗಿದ್ದರು.

ಆ.8ರಂದು ಬಾಬು ಹಾಗೂ ಅವರ ಪತ್ನಿ ಮನೆಗೆ ಬಂದು ನೋಡಿದಾಗ ಕಳ್ಳತನ ಬೆಳಕಿಗೆ ಬಂದಿತ್ತು. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೈಯಪ್ಪನಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದ ಆರೋಪಿಗಳಾದ ಶಂಕರ್‌ ಹಾಗೂ ರವಿ ವಿಚಾರಣೆ ವೇಳೆ ವರಮಹಾಲಕ್ಷ್ಮಿ ಲೇಔಟ್‌ ಬಾಬು ಮನೆಯ ಕಳ್ಳತನದ ಬಗ್ಗೆ ಬಾಯ್ಬಿಟ್ಟಿದ್ದಾರೆ.

Vijayapura: ಗಣೇಶ ಚತುರ್ಥಿಯಂದೇ ಭೀಕರ ರಸ್ತೆ ಅಪಘಾತ: ಇಬ್ಬರು ಸಾವು

ಚಲಿಸುತ್ತಿದ್ದ ರೈಲಿನಲ್ಲಿ ನಗದು, ಚಿನ್ನಾಭರಣ ದರೋಡೆ: ಬೆಂಗಳೂರಿನಿಂದ ಕಾರವಾರಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಮಂಗಳವಾರ ನಸುಕಿನ ಜಾವ 2.30ರ ಸುಮಾರಿಗೆ ಮಹಿಳೆಯೊಬ್ಬರ 8 ಲಕ್ಷ ರು. ಮೌಲ್ಯದ ಚಿನ್ನಾಭರಣ ಮತ್ತು ನಗದು ಇದ್ದ ವ್ಯಾನಿಟಿ ಬ್ಯಾಗ್‌ನ್ನು ದರೋಡೆ ಮಾಡಿ ದುಷ್ಕರ್ಮಿ ಪರಾರಿಯಾದ ಘಟನೆ ಕಬಕ ಪುತ್ತೂರು ರೈಲ್ವೇ ನಿಲ್ದಾಣದ ಸಮೀಪ ನಡೆದಿದೆ. ಬೆಂಗಳೂರಿನಲ್ಲಿ ವಾಸವಿರುವ ಅಧ್ಯಾಪಕ ರಮೇಶ್‌ ಮತ್ತು ನಿರ್ಮಲಾ ದಂಪತಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.

MANGALURU: ಸುಳ್ಯದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ: 9 ವಿದ್ಯಾರ್ಥಿಗಳ ಬಂಧನ

ನಿರ್ಮಲಾ ತಮ್ಮ ತಲೆಯ ಅಡಿ ಚಿನ್ನಾಭರಣ ಮತ್ತು ನಗದು ಇದ್ದ ವ್ಯಾನಿಟಿ ಬ್ಯಾಗ್‌ ಇಟ್ಟುಕೊಂಡು ಮಲಗಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿ ವ್ಯಾನಿಟಿ ಬ್ಯಾಗ್‌ ಕಸಿದು ರೈಲಿನಿಂದ ಹಾರಲು ಯತ್ನಿಸಿದಾಗ, ಕೂಡಲೇ ಆತನನ್ನು ಹಿಡಿದು ರೈಲು ನಿಲ್ಲಿಸುವ ಚೈನ್‌ ಎಳೆದಿದ್ದಾರೆ. ರೈಲಿನ ವೇಗ ನಿಧಾನವಾಗುತ್ತಿದ್ದಂತೆ ಅಪರಿಚಿತ ವ್ಯಕ್ತಿ ರೈಲಿನಿಂದ ಹಾರಿ ಪರಾರಿಯಾಗಿದ್ದಾನೆ. ಆಗ ಮಹಿಳೆಯೂ ಆಯ ತಪ್ಪಿ ಬಿದ್ದಿದ್ದಾರೆ. ನಿರ್ಮಲಾರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

click me!