
ಜಬಲ್ಪುರ: ದೇವಸ್ಥಾನಕ್ಕೆ ಬಂದ ಕಳ್ಳನೋರ್ವ ವಿನಮ್ರವಾಗಿ ದೇವಿಗೆ ಕೈ ಮುಗಿದು ಬಳಿಕ ಹುಂಡಿಯನ್ನು ಎತ್ತಿಕೊಂಡು ಪರಾರಿಯಾದ ವಿಚಿತ್ರ ಘಟನೆ ಮಧ್ಯಪ್ರದೇಶದ ಜಬಲ್ಪುರದ ಸುಖಾ ಗ್ರಾಮದಲ್ಲಿ ನಡೆದಿದೆ. ಕಳ್ಳನ ಕೈ ಚಳಕದ ವಿಡಿಯೋ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಕಳ್ಳತನದ ಅನೇಕ ವಿಡಿಯೋಗಳನ್ನು ನಾವು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೇವೆ. ಕಳ್ಳರು ಕಳ್ಳತನಕ್ಕೆ ಬಳಸಿದ ಹಲವು ಚಾಣಾಕ್ಷತನಗಳು ಸಿಸಿಟಿವಿ ದೃಶ್ಯಗಳಲ್ಲಿ ಸೆರೆ ಆಗಿವೆ. ಆದರೂ ದೇಗುಲಗಳಲ್ಲಿ ಕಳ್ಳರು ಕೈ ಚಳಕ ಮೆರೆಯುವುದು ತೀರಾ ಕಡಿಮೆ. ದೇವರ ಮೇಲಿನ ನಂಬಿಕೆ ಇದಕ್ಕೆ ಕಾರಣ. ಆದರೆ ಈ ಕಳ್ಳ ಮಾತ್ರ ನಂಬಿಕೆಯ ಜೊತೆ ಜೊತೆಗೆ ಕಳ್ಳತನ ಮಾಡಿದ್ದಾನೆ.
ದೇವರಿಗೆ ಕೈ ಮಗಿಯುತ್ತಾ ಕ್ಷಮಿಸುವಂತೆ ಕೇಳಿ ನಂತರ ಮೆಲ್ಲನೆ ಅಲ್ಲಿದ್ದ ದೇವಿಯ ಹುಂಡಿಯನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಆಗಸ್ಟ್ 5ರಂದು ಈ ಘಟನೆ ನಡೆದಿದೆ. ಪೊಲೀಸರು ಈಗ ಸಿಸಿಟಿವಿ ದೃಶ್ಯವನ್ನು ಪರಿಶೀಲನೆ ನಡೆಸುತ್ತಿದ್ದು, ಕಳ್ಳನ ಸೆರೆಗೆ ಬಲೆ ಬೀಸಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಶರ್ಟ್ ಧರಿಸದೇ ಬರೀ ಚಡ್ಡಿಯೊಂದನ್ನು ಧರಿಸಿಕೊಂಡು ಸಣ್ಣದೊಂದು ಟವೆಲ್ ಮುಖಕ್ಕೆ ಸುತ್ತಿಕೊಂಡು ದೇಗುಲಕ್ಕೆ ಬಂದ ಭಕ್ತ, ಮೊದಲಿಗೆ ದೇವಿಗೆ ಕೈ ಮಗಿಯುತ್ತಾನೆ. ನಂತರ ಹುಂಡಿಯನ್ನು ಎತ್ತಿಕೊಂಡು ಪರಾರಿಯಾಗುತ್ತಾನೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಇನ್ನು ಈ ವಿಡಿಯೋಗೆ ಸಾಕಷ್ಟು ಸ್ವಾರಸ್ಯಕರ ಕಾಮೆಂಟ್ಗಳು ಬಂದಿವೆ. ದೇವಿಯ ಬಳಿ ಬೇಡಿಕೊಂಡು ಕಳ್ಳತನ ಮಾಡಿದ್ದರಿಂದ ಇದು ಕಳ್ಳತನ ಅಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಭಕ್ತನೋರ್ವ ತನ್ನ ಕಷ್ಟದ ಸಮಯದಲ್ಲಿ ದೇವಿಯ ಸಹಾಯವನ್ನು ಕೇಳಿದ್ದಾನೆ ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಕಳ್ಳ ಒಂದೇ ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆದಿದ್ದಾನೆ. ಒಂದೆಡೆ ಹೀಗೆ ಕೈ ಮುಗಿಯುವ ಮೂಲಕ ದೇವರ ಮೇಲಿನ ತನ್ನ ನಂಬಿಕೆಯನ್ನು ಜೀವಂತವಾಗಿರಿಸಿದ್ದಾನೆ. ಜೊತೆಗೆ ಕಳವು ಮಾಡುವ ಮೂಲಕ ತನ್ನ ಕೆಲಸ ಮಾಡಿದ್ದಾನೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಸಕ್ರೆ ಕದ್ದು ಸಿಕ್ರೆ ಡೈಮಂಡ್ ಕದ್ರಾಯ್ತು: ಚತುರ ಇರುವೆಯ ವಿಡಿಯೋ!
ಕೆಲವು ತಿಂಗಳ ಹಿಂದೆ ಇಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಾರ್ಡ್ವೇರ್ ಶಾಪೊಂದರಲ್ಲಿ ಕಳ್ಳತನವೆಸಗಿದ್ದ ಕಳ್ಳ ನಂತರ ಅಲ್ಲೇ ಖುಷಿಯಿಂದ ಕುಣಿದಾಡಿದ್ದ. ಉತ್ತರಪ್ರದೇಶದ ಚಾಂದುಲಿಯಲ್ಲಿ ಈ ಘಟನೆ ನಡೆದಿತ್ತು. ಪೊಲೀಸ್ ವರಿಷ್ಠಾಧಿಕಾರಿಯ ನಿವಾಸಕ್ಕೆ ಸಮೀಪದಲ್ಲೇ ಈ ಘಟನೆ ನಡೆದಿತ್ತು. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.
ನಡುರಾತ್ರಿಯಲ್ಲಿ ಸೈಕಲ್ ತುಳಿದ ದೆವ್ವ, ಇಲ್ಲಿದೇ ರಿಯಲ್ ಸಿಸಿಟಿವಿ ವಿಡಿಯೋ....!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ