
ಹುಬ್ಬಳ್ಳಿ(ಆ.10): ಆನ್ಲೈನ್ ಗೇಮ್ನಲ್ಲಿ ಹಣ ಗೆದ್ದಿದ್ದ ಹುಬ್ಬಳ್ಳಿಯ ಮಂಟೂರ ರಸ್ತೆಯ ನ್ಯಾಷನಲ್ ಟೌನ್ ನಿವಾಸಿ ಗರೀಬ್ ನವಾಜ್ ಮುಲ್ಲಾ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಗರೀಬ್ ನವಾಜ್ ಮುಲ್ಲಾ ಅವರನ್ನು ಆಗಸ್ಟ್ 6 ರಂದು ಅಪಹರಿಸಿ ಒಂದು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಏಳು ಮಂದಿ ಆರೋಪಿಗಳನ್ನು ಹುಬ್ಬಳ್ಳಿ ಪೊಲೀಸರು ಕಳೆದ ರಾತ್ರಿ ಬೆಳಗಾವಿಯ ಕಿತ್ತೂರು ಬಳಿ ಬಂಧಿಸಿ ಕರೆ ತಂದಿದ್ದಾರೆ. ಹುಬ್ಬಳ್ಳಿಯ ಮಹ್ಮದ್ ಆರಿಫ್, ಇಮ್ರಾನ್, ಅಬ್ದುಲ್ ಕರೀಮ್, ಹುಸೇನ್ ಸಾಬ್, ಇಮ್ರಾನ್ ಮದರಲಿ, ತೌಸಿಫ್ ಮತ್ತು ಮಹಮ್ಮದ್ ರಜಾಕ್ ಬಂಧಿತ ಆರೋಪಿಗಳು.
ಗರೀಬ್ ನವಾಜ್ ಅಪಹರಣ ಆಗಿರುವ ಕುರಿತು ಆಗಸ್ಟ್ 6ರಂದು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಅವರ ತಂದೆ ದೂರು ದಾಖಲಿಸಿದ್ದರು. ಅಪಹರಣಕಾರರು ಗರೀಬ್ ನವಾಜ್ ತಂದೆಗೆ ಕರೆ ಮಾಡಿ ಒಂದು ಕೋಟಿ ಬೇಡಿಕೆ ಇಟ್ಟಿದ್ದರು. ಇದಕ್ಕೆ ಒಪ್ಪದಿದ್ದಾಗ 15 ಲಕ್ಷ ನೀಡಬೇಕು, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಕಿಡ್ನಾಪ್ ಆದ ಹುಡ್ಗಿ 10 ವರ್ಷ ಬಳಿಕ ಮನೆ ಸೇರಿದ್ಲು, ಮನೆಯಿಂದ 500 ಮೀಟರ್ ದೂರದಲ್ಲಿ ವಾಸವಿದ್ಲು!
ನಗರದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಗರೀಬ್ ನವಾಜ್ ಹಾಗೂ ಆತನ ಸ್ನೇಹಿತ ದಿಲ್ವಾರ್, ಆನ್ಲೈನ್ ನಲ್ಲಿ ಕ್ಯಾಸಿನೋ ಗೇಮ್ ಆಡಿ, ಸುಮಾರು ಕೋಟ್ಯಾಂತರ ಹಣ ಸಂಪಾದಿಸಿದ್ದರು ಎನ್ನಲಾಗಿದೆ. ಸ್ನೇಹಿತರ ಜೊತೆ ಸೇರಿ ಬೇಕಾಬಿಟ್ಟಿಯಾಗಿ ಹಣ ವೆಚ್ಚ ಮಾಡುತ್ತಿದ್ದ. ಅಲ್ಲದೆ, ಅಷ್ಟೊಂದು ಹಣ ತನ್ನಲ್ಲಿ ಇಟ್ಟುಕೊಳ್ಳಲು ಸಮಸ್ಯೆಯಾಗುತ್ತಿದೆ ಎಂದು ಆತನ ಸ್ನೇಹಿತ ಸಹ ಗರೀಬ್ ನವಾಜ್ ಖಾತೆಗೆ ಒಂದಷ್ಟು ಹಣ ವರ್ಗಾಯಿಸಿದ್ದ. ಈ ವಿಷಯ ತಿಳಿದ ಆರೋಪಿತರು ಅವನ ಸ್ನೇಹಿತ, ಮಹ್ಮದ್ ಆರೀಫ್ ಎಂಬುವವನ ಸಹಾಯ ಪಡೆದು, ಗರೀಬ್ ನವಾಜ್ ನನ್ನು ಗೋಕುಲ ರಸ್ತೆಯ ಡೆಕ್ಲಥಾನ್ ಬಳಿ ಅಪಹರಿಸಿದ್ದರು.
ನಾಲ್ಕು ಪ್ರತ್ಯೇಕ ತನಿಖಾ ತಂಡ ರಚನೆ
ಕಮಿಷನರ್ ಲಾಭೂರಾಮ್ ನೇತೃತ್ವದಲ್ಲಿ ನಾಲ್ಕು ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಲಾಗಿತ್ತು. ಇನ್ ಸ್ಪೆಕ್ಟರ್ ಗಳಾದ ಶ್ಯಾಮರಾಜ ಸಜ್ಜನರ್, ಜಗದೀಶ ಹಂಚನಾಳ, ಜೆ.ಎಂ. ಕಾಲಿಮಿರ್ಚಿ ಮತ್ತು ರವಿಚಂದ್ರ ಬಡಾಫಕ್ಕೀರಪ್ಪನವರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ, ಆರೋಪಿಗಳ ಮೊಬೈಲ್ ನೆಟ್ವರ್ಕ್ ಜಾಡು ಹಿಡಿದು ಅಪಹರಣಕಾರರನ್ನು ಬಂಧಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ