
ಗುರುಮಠಕಲ್ (ಜು.18) : ಸಮೀಪದ ಕಾಳೆಬೆಳ ಗುಂದಿ ಭದ್ರಕಾಳೇಶ್ವರಿ ದೇವಸ್ಥಾನದಲ್ಲಿ ಭಾನುವಾರ ತಡರಾತ್ರಿ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ. ಗರ್ಭಗುಡಿಯಲ್ಲಿರುವ ದೇವಿ ಕೊರಳಲ್ಲಿನ 5 ಗ್ರಾಂ. ತೂಕದ 1 ಬಂಗಾರದ ಮಾಂಗಲ್ಯ ಮತ್ತು 2 ಗ್ರಾಂ. ತೂಕದ ಮತ್ತೊಂದು ಮಾಂಗಲ್ಯ, 5 ಗ್ರಾಂ. ತೂಕದ ಬೊರಮಳ ಸರ ಸೇರಿದಂತೆ ಒಟ್ಟು 12 ಗ್ರಾಂ. ಬಂಗಾರ, ದೇವಿ ಮೂರ್ತಿಯ ಸೊಂಟದಲ್ಲಿರುವ 10 ತೊಲಿ ತೂಕದ ಬೆಳ್ಳಿಯ ಡಾಬ, ಆರತಿ ತಟ್ಟೆ, 20 ತೊಲಿ ತೂಕದ ತಂಬಿಗೆ ಸಹಿತ ಒಟ್ಟು 40 ತೊಲಿ ತೂಕದ ಬೆಳ್ಳಿ. ಸುಮಾರು 64 ಸಾವಿರ ರುಪಾಯಿ ಮೌಲ್ಯದ ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಬನದೇಶ್ವರ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿರುವ ಭದ್ರಕಾಳೇಶ್ವರಿ ದೇವಸ್ಥಾನದಲ್ಲಿ ಪ್ರತಿನಿತ್ಯ ರಾತ್ರಿಯ ಪೂಜಾ ಕೈಂಕರ್ಯಗಳು ಮುಗಿದ ನಂತರ ಅಲ್ಲಿ ಭಕ್ತರು, ಅರ್ಚಕರು ಯಾರು ಇರುವುದಿಲ್ಲ. ಅಲ್ಲದೆ ದೇವಸ್ಥಾನದಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾ ಕೂಡ ಕೆಲ ದಿನಗಳಿಂದ ತಾಂತ್ರಿಕ ಸಮಸ್ಯೆಯಿಂದಾಗಿ ಬಂದಾಗಿರುವುದು ಗಮನಿಸಿದ ಕಳ್ಳರು ಈ ಕೃತ್ಯವನ್ನು ಎಸಗಿದ್ದಾರೆ ಎಂದು ದೇವಸ್ಥಾನದ ಕಾರ್ಯದರ್ಶಿ ರಾಜಶೇಖರ ತಿಳಿಸಿದ್ದಾರೆ.
ದೇಗುಲ ಕಳವು ಪ್ರಕರಣ: ಖದೀಮರ ಬೆನ್ನುಬಿದ್ದ ಪೊಲೀಸರಿಗೆ ಒಂದಲ್ಲ, ಹನ್ನೆರಡು ದೇಗುಲ ಕಳ್ಳತನ ಪತ್ತೆ!
ಸೋಮವಾರ ಭೀಮನ ಅಮವಾಸೆ ಪ್ರಯುಕ್ತ ಬೆಳಗ್ಗೆ ದೇವರ ಪೂಜೆಗೆ ತೆರಳಿದ ಅರ್ಚಕರು ಕಳ್ಳತನದ ದೃಶ್ಯ ಕಂಡು ಸೈದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಠಾಣೆ ಪಿಐ ಕಾಳಪ್ಪ ಬಡಿಗೇರ್, ಅಪರಾಧ ವಿಭಾಗದ ಪಿಎಸ್ಐ ಹಣಮಂತರಾಯ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಮಾವಾಸ್ಯೆ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಹಾಗೂ ದೇವಸ್ಥಾನವನ್ನು ಬೆಳಗ್ಗೆಯೆ ಸ್ವಚ್ಛಗೊಳಿಸಿದ್ದರಿಂದ ಕಳ್ಳತನಕ್ಕೆ ಸಂಬಂಧಪಟ್ಟಯಾವುದೆ ಸಾಕ್ಷಾಧಾರದ ಕುರುಹುಗಳು ಪತ್ತೆಯಾಗಿಲ್ಲ. ಆದರೂ ಮೊಬೈಲ್ ಟವರ್ ಲೊಕೇಶನ್ ಮತ್ತು ದೇವಸ್ಥಾನದ ಸುತ್ತಮುತ್ತ ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿ ಕಳ್ಳರನ್ನು ಪತ್ತೆ ಹಚ್ಚುವ ಕಾರ್ಯವನ್ನು ಮಾಡುತ್ತೇವೆ ಎಂದು ಸೈದಾಪುರ ಪೊಲೀಸ್ ಠಾಣೆಯ ಪಿಐ ಕಾಳಪ್ಪ ಬಡಿಗೇರ್ ಅವರು ತಿಳಿಸಿದರು.
ರಾಯಚೂರು: ಅತ್ತನೂರಲ್ಲಿ ದೇವಸ್ಥಾನದ ಹುಂಡಿ ಒಡೆದು ಹಣ ಕಳವು
ಈ ಕುರಿತು ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ