ಬಾಗಿಲ ಬಳಿ ನಿಲ್ಲಬೇಡ ಅಂದಿದ್ದಕ್ಕೆ ಕಂಡಕ್ಟರ್‌, ಡ್ರೈವರ್‌ಗೆ ಥಳಿಸಿದ ಕಿಡಿಗೇಡಿಗಳು

By Kannadaprabha NewsFirst Published Feb 1, 2023, 10:14 AM IST
Highlights

ಬಸ್‌ನಲ್ಲಿ ಬಾಗಿಲ ಬಳಿ ನಿಲ್ಲಬೇಡಿ ಎಂದು ಬುದ್ಧಿವಾದ ಹೇಳಿದ್ದಕ್ಕೆ ಕಿಡಿಗೇಡಿ ಹಾಗೂ ಆತನ ಸ್ನೇಹಿತರು ಸಾರಿಗೆ ಸಂಸ್ಥೆಯ ಕಂಡಕ್ಟರ್‌, ಡ್ರೈವರ್‌ಗೆ ಥಳಿಸಿರುವ ಘಟನೆ ಮಂಗಳವಾರ ತಾಲೂಕಿನ ಕುದರಿಮೋತಿ ಕ್ರಾಸ್‌ ಬಳಿ ನಡೆದಿದೆ.

ಕುಕನೂರು (ಫೆ.1) : ಬಸ್‌ನಲ್ಲಿ ಬಾಗಿಲ ಬಳಿ ನಿಲ್ಲಬೇಡಿ ಎಂದು ಬುದ್ಧಿವಾದ ಹೇಳಿದ್ದಕ್ಕೆ ಕಿಡಿಗೇಡಿ ಹಾಗೂ ಆತನ ಸ್ನೇಹಿತರು ಸಾರಿಗೆ ಸಂಸ್ಥೆಯ ಕಂಡಕ್ಟರ್‌, ಡ್ರೈವರ್‌ಗೆ ಥಳಿಸಿರುವ ಘಟನೆ ಮಂಗಳವಾರ ತಾಲೂಕಿನ ಕುದರಿಮೋತಿ ಕ್ರಾಸ್‌ ಬಳಿ ನಡೆದಿದೆ.

ಈ ಕುರಿತು 8 ಜನರÜ ವಿರುದ್ಧ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ. ಕುಷ್ಟಗಿಯಿಂದ ಕೊಪ್ಪಳಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಕುದರಿಮೋತಿ ಕ್ರಾಸ್‌ನಲ್ಲಿ ವಾಹನ ಏರಿದ ವಿದ್ಯಾರ್ಥಿ ಕುದರಿಮೋತಿಯ ಗಣೇಶ ಹನುಮಂತಪ್ಪ ಕೆಂಗಾರ ಎಂಬಾತನಿಗೆ ಕಂಡಕ್ಟರ್‌ ರಾಜಾಸಾಬ್‌ ಕಂಬಾರ ಅವರು, ಬಸ್ಸಿನ ಒಳಗಡೆ ಜಾಗ ಖಾಲಿ ಇದೆ. ಬಾಗಿಲ ಬಳಿ ನಿಲ್ಲಬೇಡ ಎಂದು ಬುದ್ಧಿವಾದ ಹೇಳಿದ್ದಾರೆ.

Union Budget 2023: ಅಂಜನಾದ್ರಿ ಅಭಿವೃದ್ಧಿಗೆ ಸಿಕ್ಕಿತೇ ಅನುದಾನ?

ಆದರೆ ಆ ವಿದ್ಯಾರ್ಥಿಯ ಅವಾಚ್ಯ ಪದ ಬಳಸಿ ಕಂಡಕ್ಟರ್‌ ಜತೆ ವಾಗ್ವಾದ ಮಾಡಿದ್ದಾನೆ. ಆದರೂ ಕಂಡಕ್ಟರ್‌ ರಾಜಾಸಾಬ್‌ ಹಾಗೂ ಡ್ರೈವರ್‌ ಹನುಮಗೌಡ ವಿದ್ಯಾರ್ಥಿಗೆ ಬುದ್ಧಿವಾದ ಹೇಳಿದ್ದಾರೆ. ಅವರ ಮಾತಿಗೆ ಬೆಲೆ ಕೊಡದ ವಿದ್ಯಾರ್ಥಿ ನಿಂದನೆ ಮುಂದುವರಿಸಿದ್ದಾರೆ. ಕೊಪ್ಪಳದಲ್ಲೂ ಬಸ್‌ ಇಳಿಯದೇ ಮತ್ತೆ ಅದೇ ಬಸ್‌ನಲ್ಲಿ ವಾಗ್ವಾದ ನಡೆಸಿದ್ದಾರೆ. ಈ ಬಸ್‌ ವಾಪಸ್‌ ಕುಷ್ಟಗಿಗೆ ಹೋಗುತ್ತಿದ್ದರೂ ಬಸ್‌ ಇಳಿದಿಲ್ಲ.

ಮಾರ್ಗದಲ್ಲಿನ ಕುದರಿಮೋತಿ ಕ್ರಾಸ್‌ ಬಂದಾಗ ವಾಹನದಲ್ಲಿದ್ದ ಅದೇ ವಿದ್ಯಾರ್ಥಿ ಕಂಡಕ್ಟರ್‌ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಸ್ನೇಹಿತರು ಹಾಗೂ ಸಂಬಂಧಿಕರನ್ನು ಮೊಬೈಲ್‌ನಲ್ಲಿ ಕರೆ ಮಾಡಿ ಕರೆಸಿಕೊಂಡು ಕಂಡಕ್ಟರ್‌ಗೆ ಹಲ್ಲೆ ಮಾಡಿದ್ದಾರೆ. ಚಾಲಕನಿಗೂ ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ.

ಕಂಡಕ್ಟರ್‌Ü ಎಡಗೈ, ಮುಖಕ್ಕೆ ಗಾಯಗಳಾಗಿದ್ದು, ಡ್ರೈವರ್‌ ಹನುಮಗೌಡ ಅವರಿಗೆ ಎಡಗೈಯ ಮೂಳೆ ಮುರಿದಿದೆ. ಅಲ್ಲದೆ ಮರ್ಮಾಂಗಕ್ಕೆ ಪೆಟ್ಟಾಗಿದೆ. ಘಟನೆಗೆ ಸಂಬಂಧಿಸಿದಂತೆ ಎಂಟು ಜನರ ಮೇಲೆ ಬೇವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿ ಗಣೇಶ ಹನುಮಂತಪ್ಪ ಕೆಂಗಾರ, ಆತನ ಸ್ನೇಹಿತರು ಹಾಗೂ ಸಂಬಂಧಿಕರಾದ ಹನುಮೇಶ ಹನುಮಂತಪ್ಪ ಕೆಂಗಾರ, ಶರಣಪ್ಪ ಹನುಮಪ್ಪ ಕಾಳಿ, ಹನುಮಪ್ಪ ನಿಂಗಪ್ಪ ನಡುವಲರ, ಶರಣಪ್ಪ ದೇವಪ್ಪ ಕೆಂಗಾರ, ಸಂತೋಷ ಹುಲಿಗೆಮ್ಮ ಕಾಳಿ, ಶಶಿಕುಮಾರ ಗೌರಮ್ಮ ಕಾಳಿ, ಮೈಲಪ್ಪ ದುರಗಮ್ಮ ಕೆಂಗಾರ ಎಂಬ ಆರೋಪಿಗಳು ಕಂಡಕ್ಟರ್‌ ಹಾಗೂ ಡ್ರೈವರ್‌ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಹೆಸರಿಸಲಾಗಿದೆ.

ಸಂಗಣ್ಣ ಕರಡಿಗೆ ಮರುಜೀವ ತುಂಬಿದ್ದೇ ಜೆಡಿಎಸ್‌: ಎಚ್‌ಡಿಕೆ

ವಿದ್ಯಾರ್ಥಿ ಗಣೇಶ ಹನುಮಂತಪ್ಪ ಕೆಂಗಾರ, ಹನುಮೇಶ ಹನುಮಂತಪ್ಪ ಕೆಂಗಾರ, ಶರಣಪ್ಪ ಹನುಮಪ್ಪ ಕಾಳಿ, ಹನುಮಪ್ಪ ನಡುವಲರ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.

click me!