ಇವಳನ್ನ ಮನೆಗ್ ಕರ್ಕೊಂಡ್ ಹೋಗಿ: 8 ತಿಂಗಳ ಗರ್ಭಿಣಿ ಕೊಂದು ಅತ್ತೆಗೆ ಪತಿ ಫೋನ್‌

By Manjunath NayakFirst Published Aug 16, 2022, 8:00 PM IST
Highlights

Crime News: ವ್ಯಕ್ತಿಯೊಬ್ಬ ತನ್ನ 8 ತಿಂಗಳ ಗರ್ಭಿಣಿ ಪತ್ನಿಯನ್ನು ಚಾಕುವಿನಿಂದ ಕತ್ತು ಸೀಳಿ ಕೊಂದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. 

ಉತ್ತರಪ್ರದೇಶ (ಆ. 16): ವ್ಯಕ್ತಿಯೊಬ್ಬ ತನ್ನ 8 ತಿಂಗಳ ಗರ್ಭಿಣಿ ಪತ್ನಿಯನ್ನು ಚಾಕುವಿನಿಂದ ಕತ್ತು ಸೀಳಿ ಕೊಂದ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‌ನ ನಂದಗ್ರಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಮೋರ್ತಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಈ ಹಿನ್ನೆಲೆಯಲ್ಲಿ ಆರೋಪಿಯೇ ತನ್ನ ಅತ್ತೆ-ಮಾವಂದಿರಿಗೆ ಕೊಲೆಯ ಬಗ್ಗೆ ಮಾಹಿತಿ ನೀಡಿ ಶವವನ್ನು ತೆಗೆದುಕೊಂಡು ಹೋಗುವಂತೆ ಹೇಳಿದ್ದಾನೆ. ಕೊಲೆ ಬಳಿಕ ಆರೋಪಿ ತನ್ನ ಅತ್ತಗೆ ಕರೆ ಮಾಡಿದ್ದು  "ನಾನು ಅವಳನ್ನು ಕೊಂದಿದ್ದೇನೆ, ಬಂದು ಅವಳನ್ನು ಕರೆದುಕೊಂಡು ಹೋಗಿ" ಎಂದು ಹೇಳಿದ್ದಾನೆ. ಮಾಹಿತಿ ಪಡೆದ ಸಂತ್ರಸ್ತೆಯ ಕುಟುಂಬದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ವರದಕ್ಷಿಣೆ ಕಿರುಕುಳ ಆರೋಪ: ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಂಕಿತ್ ಎಂದು ಗುರುತಿಸಲಾದ ಆರೋಪಿ, ಜುಲೈ 10, 2016 ರಂದು ತನುವನ್ನು ಮದುವೆಯಾಗಿದ್ದ. ಮೃತ ಮಹಿಳೆ ಕುಟುಂಬ ಸದಸ್ಯರ ಪ್ರಕಾರ, ದಂಪತಿಗಳ ನಡುವೆ ಕೆಲವು ದಿನಗಳಿಂದ ಸಂಬಂಧ ಚೆನ್ನಾಗಿರಲಿಲ್ಲ. 

ಅಂಕಿತ್ ಮತ್ತು ಆತನ ಪೋಷಕರು ವರದಕ್ಷಿಣೆಗಾಗಿ ತನುಗೆ ಕಿರುಕುಳ ನೀಡುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.  ತನುವಿಗೆ ಮೊಬೈಲ್ ಬಳಸಲೂ ಬಿಡುತ್ತಿರಲಿಲ್ಲ, ಮನೆಯ ಖರ್ಚಿಗೆ ಮಾತ್ರ ಹಣ ನೀಡುತ್ತಿದ್ದರು ಎಂದು ಮನೆಯವರು ಹೇಳಿದ್ದಾರೆ.

ನಿದ್ರೆ ಹಾಳು ಮಾಡಿದ್ದಕ್ಕೆ 1.5 ವರ್ಷದ ಕಂದಮ್ಮನನ್ನು ಕತ್ತು ಹಿಸುಕಿ ಕೊಂದ ಪಾಪಿ ತಂದೆ..!

ಆರೋಪಿ ಬಂಧಿನ: ಸಂತ್ರಸ್ತೆಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಅಂಕಿತ್ ನನ್ನು ಬಂಧಿಸಲಾಗಿದ್ದು, ಕೊಲೆಗೆ ಬಳಸಿದ ಚಾಕುವನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೋರ್ಟ್  ಆವರಣದಲ್ಲೇ ಪತ್ನಿಯ ಕತ್ತು ಸೀಳಿ ಹತ್ಯೆ:  ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನಕ್ಕೆ ಬಂದಿದ್ದ ವೇಳೆ ಪತಿ ಕೋರ್ಚ್‌ ಆವರಣದಲ್ಲೇ ಪತ್ನಿಯ ಕತ್ತು ಸೀಳಿ ಕೊಲೆಗೈದ ಘಟನೆ ಹಾಸನದ ಹೊಳೆನರಸೀಪುರದಲ್ಲಿ ಶನಿವಾರ ನಡೆದಿದೆ. ಹೊಳೆನರಸೀಪುರ ತಾಲೂಕಿನ ತಟ್ಟೆಕೆರೆ ಗ್ರಾಮದ ಶಿವಕುಮಾರ್‌(38) ಚನ್ನರಾಯಪಟ್ಟಣದ ಚೈತ್ರಾ(30) ಎಂಬುವರನ್ನು ಏಳು ವರ್ಷದ ಹಿಂದೆ ಮದುವೆಯಾಗಿದ್ದ. 

ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸಂಸಾರದಲ್ಲಿ ಬಿರುಕು ಮೂಡಿದ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಶನಿವಾರ ಲೋಕ ಅದಾಲತ್‌ ಇದ್ದ ಕಾರಣ ರಾಜಿ ಸಂಧಾನಕ್ಕೆ ಬಂದಿದ್ದರು. ದಂಪತಿ ಒಂದುಗೂಡಿಸಲು ನ್ಯಾಯಾಧೀಶರು ಕೌನ್ಸೆಲಿಂಗ್‌ ಮಾಡಿದ್ದರು. ಆದರೆ ಪತ್ನಿಯ ಮೇಲೆ ಸಿಟ್ಟಾಗಿದ್ದ ಪತಿ, ಚೈತ್ರಾ ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ ಹಿಂಬಾಲಿಸಿ ಕತ್ತು ಸೀಳಿದ್ದಾನೆ. 

ಅತ್ತೆಯೊಂದಿಗೇ ಅಕ್ರಮ ಸಂಬಂಧ ಬೆಳೆಸಿದ ಅಳಿಯ ! ಚಾಕುವಿನಿಂದ ಇರಿದು ಕೊಲೆ

ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಚೈತ್ರಾಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸಾಗಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲಾಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಆರೋಪಿ ಶಿವಕುಮಾರ್‌ನನ್ನು ಸ್ಥಳೀಯರೇ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದು ಹೊಳೆನರಸೀಪುರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!