ಮಂಗಳೂರು ವಿವಿ ಕಾಲೇಜಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Published : Jun 11, 2022, 11:54 AM IST
ಮಂಗಳೂರು ವಿವಿ ಕಾಲೇಜಲ್ಲಿ ವಿದ್ಯಾರ್ಥಿಗಳ ಹೊಡೆದಾಟ

ಸಾರಾಂಶ

*  ಕಾಲೇಜಲ್ಲಿ ಹಿಜಾಬ್‌, ಸಾವರ್ಕರ್‌ ಫೋಟೋ ವಿವಾದ *  2 ಗುಂಪು ನಡುವೆ ನಡೆದ ಹೊಡೆದಾಟ, ಐವರಿಗೆ ಗಾಯ *  ಕಾಲೇಜಲ್ಲಿ ಸಂಘರ್ಷದ ವಾತಾವರಣ, ರಜೆ ಘೋಷಣೆ  

ಮಂಗಳೂರು(ಜೂ.11): ಕೆಲ ದಿನಗಳಿಂದ ಹಿಜಾಬ್‌, ಸಾವರ್ಕರ್‌ ಫೋಟೋ ವಿಚಾರದಿಂದ ವಿವಾದಕ್ಕೆ ಈಡಾಗಿರುವ ಮಂಗಳೂರು ವಿವಿ ಕಾಲೇಜಿನಲ್ಲಿ ಶುಕ್ರವಾರ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದಿದ್ದು, ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ.

ಮಧ್ಯಾಹ್ನ ಸುಮಾರು 12.45ರ ವೇಳೆಗೆ ಈ ಘಟನೆ ನಡೆದಿದೆ. ಘಟನೆಯಲ್ಲಿ ನಾಲ್ಕೈದು ವಿದ್ಯಾರ್ಥಿಗಳಿಗೆ ಅಲ್ಪ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಪರಿಸ್ಥಿತಿ ತಿಳಿಗೊಳಿಸಲು ಪ್ರಾಂಶುಪಾಲರು ಮಧ್ಯಾಹ್ನ ಬಳಿಕ ಕಾಲೇಜಿಗೆ ರಜೆ ಘೋಷಣೆ ಮಾಡಿದ್ದಾರೆ. ಇತ್ತೀಚೆಗೆ ಕಾಲೇಜಿನ ತರಗತಿಯೊಂದರಲ್ಲಿ ಸಾವರ್ಕರ್‌ ಫೋಟೋ ಹಾಕಿದ ವಿಚಾರದ ಹಿನ್ನೆಲೆಯಲ್ಲಿ ಈ ಮಾರಾಮಾರಿ ನಡೆದಿದೆ.

ಮಂಗ್ಳೂರು ವಿವಿ ಕಾಲೇಜು ವಿವಾದ: ನೋಟಿಸ್‌ಗೆ ಉತ್ತರಿಸದ ಹಿಜಾಬ್‌ ವಿದ್ಯಾರ್ಥಿನಿಯರು

ಸೋಮವಾರ ಸಂಜೆ ಇಬ್ಬರು ವಿದ್ಯಾರ್ಥಿಗಳು ಸಾವರ್ಕರ್‌ ಫೋಟೋವನ್ನು ಕರಿಹಲಗೆ ಮೇಲ್ಭಾಗದಲ್ಲಿ ಹಾಕಿದ್ದು, ಇದನ್ನು ಕಂಡ ಇನ್ನೊಂದು ಗುಂಪಿನ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ದೂರು ನೀಡಿದ್ದರು. ಅದರಂತೆ ಮರುದಿನ ಬೆಳಗ್ಗೆ ಅನಧಿಕೃತವಾಗಿ ಹಾಕಿದ್ದ ಫೋಟೋವನ್ನು ಪ್ರಾಂಶುಪಾಲರು ತೆಗೆಸಿದ್ದರು. ಹೀಗಾಗಿ ಪ್ರಾಂಶುಪಾಲರಿಗೆ ದೂರು ನೀಡಿದ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಈ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ.

ಊಟದ ವೇಳೆ ಗಲಾಟೆ: ವಿವಿ ಕಾಲೇಜಿನಲ್ಲಿ ಮಧ್ಯಾಹ್ನ ಬಿಸಿಯೂಟ ವ್ಯವಸ್ಥೆಯಿದ್ದು, ಅದರಂತೆ ವಿದ್ಯಾರ್ಥಿಗಳು ಊಟ ಮಾಡಿ ಹೊರಗೆ ತಟ್ಟೆತೊಳೆಯುವ ವೇಳೆ ಪ್ರಾಂಶುಪಾಲರಿಗೆ ದೂರು ನೀಡಿದ ವಿಚಾರದ ಕುರಿತು ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದು, ಸುಮಾರು ಏಳೆಂಟು ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಹೊರಗಿನಿಂದಲೂ ಕೆಲವರು ಬಂದು ಹೊಡೆದಾಟದಲ್ಲಿ ಭಾಗಿಯಾದರು ಎಂದು ಆರೋಪಿಸಲಾಗಿದೆ.

ಹೊಡೆದಾಟದಲ್ಲಿ ಒಂದು ಗುಂಪಿನ ಮೂವರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಪಾಂಡೇಶ್ವರ ಠಾಣೆಗೆ ದೂರು ಕೂಡ ನೀಡಲಾಗಿದೆ. ಈ ಮಧ್ಯೆ, ಇನ್ನೊಂದು ಗುಂಪಿನ ಇಬ್ಬರು ಗಾಯಗೊಂಡಿರುವುದಾಗಿ ಪ್ರತಿದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರ ತನಿಖೆ ಮುಂದುವರಿದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!