Crime News: ತಾಯಿ ಕೊಂದು ಆತ್ಮಹತ್ಯೆಗೆ ಶರಣಾದ ಮಗ; ಶವದ ಬಳಿಯಿತ್ತು 77 ಪುಟಗಳ ಡೆತ್‌ನೋಟ್‌

By Sharath Sharma KalagaruFirst Published Sep 5, 2022, 5:28 PM IST
Highlights

Crime News Today: ತಾಯಿಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. ನಂತರ 77 ಪುಟಗಳ ಡೆತ್‌ ನೋಟ್‌ ಬರೆದಿಟ್ಟು ಯುವಕ ಕತ್ತು ಸೀಳಿಕೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ಧಾರೆ.

ನವದೆಹಲಿ: 25 ವರ್ಷದ ಯುವಕನೊಬ್ಬ ತಾಯಿಯನ್ನೇ ಕೊಲೆ ಮಾಡಿ ದಿನಗಳು ಕಳೆದ ನಂತರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನವದೆಹಲಿಯ ರೋಹಿಣಿ ಪ್ರದೇಶದಲ್ಲಿ ನಡೆದಿದೆ. ಯುವಕನನ್ನು ಕ್ಷಿತಿಜ್‌ ಎಂದು ಗುರುತಿಸಲಾಗಿದ್ದು, ಆತನ ಮೃತ ತಾಯಿ ಮಿಥಿಲೇಶ್‌ ಎಂದು ಗುರುತಿಸಲಾಗಿದೆ. ಮನೆಯಿಂದ ದುರ್ಗಂಧ ಬರಲು ಆರಂಭಿಸಿದಾಗ ಅನುಮಾನದಿಂದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಮನೆಗೆ ಬಂದ ಪೊಲೀಸರು ಬಾಗಿಲು ತಟ್ಟಿದ್ದಾರೆ. ಯಾರೂ ತೆಗೆಯದಿದ್ದಾಗ ಬಾಲ್ಕನಿ ಮೂಲಕ ಮನೆಯನ್ನು ಪ್ರವೇಶಿಸಿದ ಪೊಲೀಸರಿಗೆ ಹಾಲ್‌ನಲ್ಲಿ ಕ್ಷಿತಿಜ್‌ ಶವ ಕಂಡುಬಂದಿದೆ. ರಕ್ತದ ಮಡುವಿನಲ್ಲಿ ಕ್ಷಿತಿಜ್‌ ಶವ ಬಿದ್ದಿತ್ತು. ನಂತರ ಕೋಣೆಯಲ್ಲಿ ಹೋಗಿ ನೋಡಿದಾಗ ತಾಯಿಯ ಶವವೂ ಸಿಕ್ಕಿತ್ತು ಎನ್ನಲಾಗಿದೆ. 

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ ಗುರುವಾರವೇ ತಾಯಿಯನ್ನು ಕ್ಷಿತಿಜ್‌ ಕೊಲೆ ಮಾಡಿದ್ದಾನೆ. ಅದಾದ ನಾಲ್ಕು ದಿನಗಳ ನಂತರ ಅಂದರೆ ಭಾನುವಾರ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಾಕುವಿನಿಂದ ಕತ್ತನ್ನು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೃತ್ಯಕ್ಕೆ ಬಳಸಿದ ಚಾಕು ದೇಹದ ಪಕ್ಕದಲ್ಲೇ ಇತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರಿಗೆ ಮೃತ ಕ್ಷಿತಿಜ್‌ನ ಡೆತ್‌ನೋಟ್‌ ಸಿಕ್ಕಿದೆ. ಆಶ್ಚರ್ಯವೆಂದರೆ ಬರೋಬ್ಬರಿ 77 ಪುಟಗಳ ಡೆತ್‌ನೋಟ್‌ ಇದಾಗಿದ್ದು, ಸಾಮಾನ್ಯ ಯಾವ ಪ್ರಕರಣದಲ್ಲೂ ಇಷ್ಟು ಪುಟಗಳ ಡೆತ್‌ ನೋಟ್‌ ಇರುವುದಿಲ್ಲ. ಆದರೆ ಕ್ಷಿತಿಜ್‌ ತಾಯಿಯನ್ನು ಕೊಲೆ ಮಾಡಿದ ನಂತರ ಕೇವಲ ಡೆತ್‌ ನೋಟ್‌ ಬರೆಯುತ್ತಿದ್ದನೇ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 

ಸಾವಿಗೆ ಕಾರಣವೇನು ಎಂಬ ಬಗ್ಗೆ ಕ್ಷಿತಿಜ್‌ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ಆದರೆ ಅದರಲ್ಲಿ ಏನು ಬರೆದಿದ್ದಾನೆ ಎಂಬ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಪ್ರಕರಣದ ತನಿಖೆ ಮುಂದುವರೆದಿದ್ದು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ನಿವಾಸದಲ್ಲಿ ತನಿಖೆ ನಡೆಸುತ್ತಿದ್ದಾರೆ. 

ಇದನ್ನೂ ಓದಿ: Illicit Relationship ಶಂಕೆ, ಸೊಸೆಯನ್ನೇ ಕೊಂದ ಮಾವ!

ಸೊಸೆಯನ್ನೇ ಕೊಂದ ಮಾವ:

ಪಂಜಾಬ್‌ನ (Punjab) ಲುಧಿಯಾನಾದ (Ludhiana) ಪ್ರತಾಪ್‌ ನಗರದಲ್ಲಿ ಶುಕ್ರವಾರ ಸೊಸೆ (Daughter in Law) ಅಕ್ರಮ ಸಂಬಂಧ ಹೊಂದಿದ್ದಾರೆಂದು ಶಂಕಿಸಿ ಮಾವ ಮಹಿಳೆಯನ್ನು ಕೊಲೆ ಮಾಡಿದ್ದಾರೆ. ಇನ್ನು, ಕತ್ತು ಹಿಸುಕಿ ಕೊಲೆ ಮಾಡಿದ ಆರೋಪದ ಮೇಲೆ ಲುಧಿಯಾನಾದ ಪೊಲೀಸ್‌ ವಿಭಾಗ 6 (Division 6 ) ಶನಿವಾರ ಅದೇ ಪ್ರದೇಶದ ನಿವಾಸಿ ಗೋಭಿ ಲಾಲ್ ಎಂಬುವರನ್ನು ಬಂಧಿಸಿದೆ. ಶಂಕಿತ ಆರೋಪಿ ಮತ್ತು ಆತನ ಪುತ್ರ ಮೋನು ಪ್ರತಾಪ್‌ ನಗರದಲ್ಲೇ ಪ್ರತ್ಯೇಕ ಮನೆಗಳಲ್ಲಿ ವಾಸ ಮಾಡುತ್ತಿದ್ದರು ಎಂದು ಎಸಿಪಿ (Assistant Commissioner of Police) ಜ್ಯೋತಿ ಯಾದವ್ ಮಾಹಿತಿ ನೀಡಿದ್ದಾರೆ. ಹಾಗೂ, ನಿನ್ನೆ ಮಗನ ಮನೆಗೆ ಹೋಗಿದ್ದ ಅವರು ಸೊಸೆ ಲಕ್ಷ್ಮೀ ಒಬ್ಬಳೇ ಇರುವುದನ್ನು ಕಂಡು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಮಹಿಳೆಗೆ ಬೇರೊಬ್ಬ ಪುರುಷನ ಜತೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿ ತಾನು ಕೊಲೆ (Murder) ಮಾಡಿರುವುದಾಗಿ ಮಾವ ಒಪ್ಪಿಕೊಂಡಿದ್ದಾರೆ ಎಂದೂ ತಿಳಿದುಬಂದಿದೆ. ಅಲ್ಲದೆ, ಈ ಕೃತ್ಯಕ್ಕೆ ಬೇರೊಬ್ಬರು ಸಹಾಯ ಮಾಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಕ್ರಮ ಸಂಬಂಧ (Illict Relationship) ಹೊಂದುವುದನ್ನು ನಿಲ್ಲಿಸುವಂತೆ ತಾಕೀತು ಮಾಡಿದರೂ ಸೊಸೆ ಅದಕ್ಕೆ ಕ್ಯಾರೇ ಎನ್ನಲಿಲ್ಲ. ಹಾಗಾಗಿ ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದಾಗಿ ಆರೋಪಿ ಗೋಭಿ ಲಾಲ್‌ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: Sonali Phogat: ಗೋವಾದಲ್ಲಿ ಯಾವುದೇ ಶೂಟಿಂಗ್‌ ಇರಲಿಲ್ಲ, ನಾನೇ ಕೊಲೆ ಮಾಡಿದೆ: ಪಿಎ ಸುಧೀರ್‌ ತಪ್ಪೊಪ್ಪಿಗೆ?

ಸಂಪೂರ್ಣ ತನಿಖೆಯ (Investigation) ನಂತರ ಮೃತ ಮಹಿಳೆಯ ಮಾವನೇ ಕೊಲೆ ಮಾಡಿರುವುದು ದೃಢಪಟ್ಟಿದೆ ಎಂದೂ ಎಸಿಪಿ ತಿಳಿಸಿದ್ದಾರೆ. ಸ್ಥಳೀಯ ಸಿಸಿಟಿವಿ ಫೂಟೇಜ್‌ನಲ್ಲಿ ಶಂಕಿತ ವ್ಯಕ್ತಿ ತನ್ನ ಮಗನ ಮನೆಯ ಬಳಿ ತಿರುಗಾಡುತ್ತಿದ್ದ ದೃಶ್ಯಾವಳಿ ಸೆರೆಯಾಗಿದೆ. ಹಾಗೂ, ಸೊಸೆ ಹಾಗೂ ಮಾವನ ನಡುವಿನ ಸಂಬಂಧ ಚೆನ್ನಾಗಿರಲಿಲ್ಲವೆಂಬುದು ತನಿಖೆಯ ವೇಳೆ ಬಯಲಾಗಿದೆ. ನಂತರ, ತಾನು ಅಪರಾಧ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದೂ ತಿಳಿದುಬಂದಿದೆ. ಇನ್ನೊಂದೆಡೆ, ಸೊಸೆ ಅಕ್ರಮ ಸಂಬಂಧ ಹೊಂದಿದ್ದ ಬಗ್ಗೆ ಹಾಗೂ ಆಕೆಯ ನಡತೆಯ ಬಗ್ಗೆ ಮಗನ ಬಳಿ ಮಾತನಾಡಿದ್ದ, ಆದರೆ ಮೋನು ಮಾತ್ರ ತನ್ನ ಹೆಂಡತಿಯನ್ನು ನಂಬಿದ್ದ ಎಂದು ಮೂಲಗಳು ತಿಳಿಸಿವೆ.
 
ಘಟನೆ ಬೆಳಕಿಗೆ ಬಂದಿದ್ದು ಹೀಗೆ.. 
ಮೃತ ಲಕ್ಷ್ಮೀ ಮಧ್ಯಾಹ್ನ ತನ್ನ ಮಗುವನ್ನು ತನ್ನ ಮನೆಯ ಸಮೀಪವಿರುವ ಪ್ಲೇ ಸ್ಕೂಲ್‌ನಿಂದ ಕರೆದುಕೊಂಡು ಹೋಗಲು ವಿಫಲವಾದ ಕಾರಣ, ಆಕೆಯನ್ನು ಪರೀಕ್ಷಿಸಲು ಹೋದಾಗ ಲಕ್ಷ್ಮೀ ಶವವಾಗಿದ್ದಳು ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಶುಕ್ರವಾರ ಆಕೆ ಮಗುವನ್ನು ಕರೆದುಕೊಂಡು ಹೋಗಲು ಬಾರದೆ ಇದ್ದಾಗ ಶಾಲೆಯ ಅಧಿಕಾರಿಗಳು ಪತಿ ಮೋನು ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ, ಮೋನು ತನ್ನ ಹೆಂಡತಿ ಮನೆಯಲ್ಲಿ ಇದ್ದಾಳೋ ಇಲ್ಲವೋ ಎಂದು ತಿಳಿದುಕೊಳ್ಳಲು ಹಾಗೂ ಮಗುವನ್ನು ಪ್ಲೇ ಸ್ಕೂಲ್‌ನಿಂದ /Play School) ಏಕೆ ಕರೆದುಕೊಂಡು ಬಂದಿಲ್ಲ ಎಂಬುದನ್ನು ಪತ್ತೆಹಚ್ಚಲು ಅವರ ನೆರೆಯವರಿಗೆ ಕರೆ ಮಾಡಿದರು. ಬಳಿಕ ಅಕ್ಕಪಕ್ಕದ ಮನೆಯವರು ಮನೆಗೆ ಹೋಗಿ ನೋಡಿದಾಗ ಲಕ್ಷ್ಮೀ ಶವವಾಗಿ ಕಂಡಿದ್ದಾಳೆ. 

ಇದನ್ನೂ ಓದಿ: ಮಗನಿಗಿಂತ ಹೆಚ್ಚು ಮಾರ್ಕ್ಸ್‌ ಯಾಕೆ ತೆಗ್ದೆ, ಬಾಲಕನಿಗೆ ವಿಷ ನೀಡಿ ಸಾಯಿಸಿದ ಮಹಿಳೆ !

ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳೀಯ ಪೊಲೀಸರು ಸ್ಥಳಕ್ಕಾಗಮಿಸಿ ಲಕ್ಷ್ಮೀ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ತನಿಖೆ ಆರಂಭಿಸಿದ್ದಾರೆ. ಸಂತ್ರಸ್ತೆ ಮತ್ತು ಆರೋಪಿಗಳ ನಡುವಿನ ಸಂಘರ್ಷದ ಹಿಂದಿನ ಕಾರಣವನ್ನು ಅವರು ಪತ್ತೆಹಚ್ಚಲು ಪ್ರಯತ್ನಿಸಿದ್ದಾರೆ ಎಂದೂ ತಿಳಿದುಬಂದಿದೆ. ಸದ್ಯ, ಆರೋಪಿಯನ್ನು ಬಂಧಿಸಲಾಗಿದ್ದು, ಆತ ಪೊಲೀಸರ ವಶದಲ್ಲಿದ್ದಾನೆ ಎಂದು ತಿಳಿದುಬಂದಿದೆ. 

click me!