Belagavi: ತಾಯಿಗೆ ಚಿಕಿತ್ಸೆ ಕೊಡಿಸಲು ಅಡ್ಡಿ ಮಾಡಿದ ತಂದೆಯನ್ನೇ ಕೊಲೆ ಮಾಡಿದ ಮಗ

By Kannadaprabha NewsFirst Published Sep 8, 2022, 10:30 PM IST
Highlights

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಶಿವಾನಂದ ಭಾರತಿ ನಗರದ ಸತ್ಯ ಮಾರ್ಗದಲ್ಲಿ ನಡೆದ ಘಟನೆ

ಬೈಲಹೊಂಗಲ(ಸೆ.08):  ಮಗನೇ ತಂದೆಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಪಟ್ಟಣದ ಶಿವಾನಂದ ಭಾರತಿ ನಗರದ ಸತ್ಯ ಮಾರ್ಗದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಬೆಂಗಳೂರಿನ ಬಿಎಂಟಿಸಿ ಚಾಲಕನಾಗಿದ್ದ ರುದ್ರಪ್ಪ ತಳವಾರ (55) ಕೊಲೆಯಾದ ಅಪ್ಪ, ಸಂತೋಷ ತಳವಾರ(30) ಕೊಲೆ ಮಾಡಿದ ಮಗ.

ಘಟನೆ ವಿವರ:

ಬೆಂಗಳೂರಿನ ಬಿಎಂಟಿಸಿ ಚಾಲಕನಾಗಿದ್ದ ರುದ್ರಪ್ಪ ತಳವಾರ (55) ಹಾಗೂ ಪತ್ನಿ, ಮಲ್ಲೂರ ಗ್ರಾಮದ ಖಾಸಗಿ ಶಾಲೆ ಶಿಕ್ಷಕಿ ಮಹಾದೇವಿ (50) ಮಧ್ಯೆ ಜಗಳ ನಡೆದು ಮಹಾದೇವಿಗೆ ಬಲವಾಗಿ ಹೊಡೆದಿದ್ದರಿಂದ ಕಣ್ಣಿನ ಭಾಗದಲ್ಲಿ ಬಲವಾದ ಗಾಯವಾಗಿತ್ತು. ಮಗ ಸಂತೋಷ ಇಬ್ಬರ ಜಗಳ ಬಿಡಿಸಿ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ. ತನ್ನ ಬಳಿಯ ಹಣದಲ್ಲಿ ಔಷಧೋಪಚಾರ ಮಾಡಿಸಿ, ಸ್ಕ್ಯಾ‌ನಿಂಗ್‌ಗಾಗಿ ಮನೆಗೆ ಹಣ ತರಲು ಬಂದಾಗ, ಕುಡಿದ ಅಮಲಿನಲ್ಲಿದ್ದ ತಂದೆ ಅವಳಿಗೆ ಚಿಕಿತ್ಸೆ ಕೊಡಿಸಬೇಡ ಎಂದು ಜಗಳವಾಡಿದಾಗ, ಮಾತಿಗೆ ಮಾತು ಬೆಳೆದು ಇಬ್ಬರು ಕೈ, ಕೈ ಮಿಲಾಯಿಸಿ ಜಗಳವಾಡಿದ್ದಾರೆ. 

Dharwad: ಕುಡಗೊಲಿನಿಂದ ಅತ್ತಿಗೆಯ ಕತ್ತು ಸೀಳಿದ ಮೈದುನ..!

ಸಂತೋಷ ಸಿಟ್ಟಿನ ಭರದಲ್ಲಿ ಮಾರಕಾಸ್ತ್ರಗಳಿಂದ ತಂದೆ ರುದ್ರಪ್ಪನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಂತೋಷನನ್ನು ಬಂಧಿಸಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಉಳವಪ್ಪ ಸಾತೆನಹಳ್ಳಿ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಈ ಕುರಿತು ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!