ಬೆಳಗಾವಿ: ಯೋಧನ ಪತ್ನಿಕಣ್ಣಿಗೆ ಕಾರದ ಪುಡಿ ಎರಚಿ ಮಾರಣಾಂತಿಕ ಹಲ್ಲೆ

By Manjunath NayakFirst Published Oct 28, 2022, 3:54 PM IST
Highlights

Belagavi News: ಯೋಧನ ಪತ್ನಿ ಕಣ್ಣಿಗೆ ಕಾರದ ಪುಡಿ ಎರಚಿ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. 

ಬೆಳಗಾವಿ (ಅ. 28): ಯೋಧನ ಪತ್ನಿ ಕಣ್ಣಿಗೆ ಕಾರದ ಪುಡಿ ಎರಚಿ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆ ಮೂಡಲಗಿ ತಾಲೂಕಿನ ಲಕ್ಷ್ಮೇಶ್ವರ ಗ್ರಾಮದಲ್ಲಿ ನಡೆದಿದೆ.  ನಾಲ್ಕು ದಿನಗಳ ಹಿಂದೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಸಂಗೀತಾ ಅಶೋಕ ಮೂಲಿಮನಿ ಮತ್ತು ಅವರ ಚಿಕ್ಕಮ್ಮ ಮಲ್ಲವ್ವ ಮಾಳಿಗೆ ಗಾಯಗಳಾಗಿವೆ. ಗೋಕಾಕ (Gokak) ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಂಗೀತಾ ಹಾಗೂ ಮಲ್ಲವ್ವ ಚಿಕಿತ್ಸೆ ಪಡೆಯುತ್ತಿದ್ದಾರೆ.  ವಾಸಿಸಲು ನೀಡಿದ್ದ ಮನೆ ಬಿಟ್ಟುಕೊಡು ಅಂದಿದಕ್ಕೆ ಯೋಧನ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.  ಸಂತೋಷ ಮಾಳಿ, ಈರಯ್ಯ ಮಠದ, ಭಾರತಿ ಮಾಳಿ ವಿರುದ್ಧ ಹಲ್ಲೆ ಆರೋಪ ಮಾಡಲಾಗಿದೆ. 

ಗ್ವಾಲಿಯರ್‌ನಲ್ಲಿ (Gwalior) ಭಾರತೀಯ ಸೇನೆಯಲ್ಲಿ (Indian Army) ಅಶೋಕ ಮೂಲಿಮನಿ ಸೇವೆ ಸಲ್ಲಿಸುತ್ತಿದ್ದಾರೆ.  ಕುಟುಂಬ ಸಮೇತ ಗ್ವಾಲಿಯರ್ ಆರ್ಮಿ ಕ್ವಾಟರ್ಸ್‌ನಲ್ಲಿ ಅಶೋಕ ಮೂಲಿಮನಿ ವಾಸವಿದ್ದರು. ಈ ವೇಳೆ ಲಕ್ಷ್ಮೇಶ್ವರ ಗ್ರಾಮದಲ್ಲಿದ್ದ ಮನೆಯನ್ನು ಅಶೋಕ ಮೂಲಿಮನಿ ಬಾಡಿಗೆ ಕೊಟ್ಟು ಹೋಗಿದ್ದರು.  ಅಶೋಕ ಮೂಲಿಮನಿ  ಮುಂದಿನ ವರ್ಷ ಸ್ವಯಂ ನಿವೃತ್ತಿ (Retirement) ಹೊಂದಲಿದ್ದು  ನಾವು ಗ್ರಾಮಕ್ಕೆ ಮರಳಲಿದ್ದೇವೆ, ಮನೆ ಬಿಡುವಂತೆ ಪತ್ನಿ ಸಂಗೀತ ಮೂಲಿಮನಿ ಕೋರಿದ್ದಾರೆ.  ಮನೆ ಬಿಡು ಅಂದಿದಕ್ಕೆ ಕಣ್ಣಿಗೆ ಕಾರದ ಪುಡಿ ಎರಚಿ ಮಾರಣಾಂತಿಕ ಹಲ್ಲೆಗೈದು ಪುಂಡಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 

Latest Videos

ಇದನ್ನೂ ಓದಿ: ಸೈನಿಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ನಾಲ್ವರು ಕೇರಳ ಪೊಲೀಸರ ಅಮಾನತು!

ಬೈಲಹೊಂಗಲ: ವಿದ್ಯಾರ್ಥಿಗಳ ಮೇಲೆ ಹಲ್ಲೆ: ಕೇಂದ್ರ ಬಸ್‌ನಿಲ್ದಾಣಕ್ಕೆ ಮುತ್ತಿಗೆ: ಪಟ್ಟಣದ ಕೆಎಸ್‌ಆರ್‌ಟಿಸಿ ಚಾಲಕರು, ನಿರ್ವಾಹಕರು ಕಾಲೇಜು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದರಿಂದ ಎಬಿವಿಪಿ ಸಂಘಟನೆಯಿಂದ ಕೇಂದ್ರ ಬಸ್‌ನಿಲ್ದಾಣಕ್ಕೆ ವಿದ್ಯಾರ್ಥಿಗಳು ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಈಚೆಗೆ ನಡೆದಿದೆ. ಬೆಳಗಾವಿಯಿಂದ ಬೈಲಹೊಂಗಲಕ್ಕೆ ಬರುವ ಬಸ್‌ ನಿರ್ವಾಹಕರು ಮತ್ತು ಚಾಲಕರು ಸಾಣಿಕೊಪ್ಪ ಗ್ರಾಮದಲ್ಲಿ ಬಸ್‌ ನಿಲ್ಲಿಸದೆ ವಾಹನ ಚಲಾಯಿಸಿದಾಗ, ವಿದ್ಯಾರ್ಥಿಗಳು ಪಾಲಕರ ಸಹಾಯದಿಂದ ಬೈಕ್‌ ಮೂಲಕ ಆಗಮಿಸಿ ಬಸ್‌ ತಡೆದು ಬಸ್‌ ಏರಿ ಪ್ರಯಾಣಿಸಿದ್ದಾರೆ. ಡಿಪೋಗೆ ಬಸ್‌ ಬಂದಾಗ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೊಂದಿಗೆ ವಾದ ವಿವಾದ ನಡೆದು ಸಿಬ್ಬಂದಿ ಮೂರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ, ಪೊಲೀಸ್‌ ಠಾಣೆಗೆ ಒಪ್ಪಿಸಿದ್ದರು. 

ಎಬಿವಿಪಿ ಪದಾಧಿಕಾರಿಗಳು ವಿದ್ಯಾರ್ಥಿಗಳನ್ನು ಪೊಲೀಸ್‌ ಠಾಣೆಯಿಂದ ಕರೆ ತಂದು ಬಸ್‌ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಒಂದು ಗಂಟೆಗೂ ಹೆಚ್ಚು ಕಾಲ ಬಸ್‌ ಸಂಚಾರ ತಡೆದು ಧರಣಿ ನಡೆಸಿದರು. ಇದರಿಂದ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಸಿಪಿಐ ಉಳವಪ್ಪ ಸಾತೆನಹಳ್ಳಿ, ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಕೊಳ್ಳಲು ಡಿಪೋ ಮ್ಯಾನೇಜರ್‌ ಅವರಿಗೆ ತಿಳಿಸಿ ಪರಿಸ್ಥಿತಿ ಶಾಂತಗೊಳಿಸಿದರು. ಎಬಿವಿಪಿ ಜಿಲ್ಲಾ ಸಂಚಾಲಕ ಅಪ್ಪಣ್ಣ ಹಡಪದ ಮಾತನಾಡಿ, ಸಿಬ್ಬಂದಿ ಮೇಲೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು. ವಿದ್ಯಾರ್ಥಿ ಪ್ರಮುಖರಾದ ನಾಗರಾಜ ಸಾಣಿಕೊಪ್ಪ, ಸುನಿಲ ಕಿತ್ತೂರ, ಕಿರಣ ದೊರೆಗೌಡ್ರ, ದಯಾನಂದ ಗುಳ್ಳೆಗಡ್ಡಿ, ಅರುಣ ಡೊಳ್ಳಿನ ಹಾಗೂ ನೂರಾರು ವಿದ್ಯಾರ್ಥಿಗಳು ಇದ್ದರು

click me!