
ಮೀರತ್ (ಉತ್ತರ ಪ್ರದೇಶ): ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಂದ ಶಾಕಿಂಗ್ ಎನ್ನುವಂಥ ಅಪರಾಧ ಘಟನೆಗಳು ಬೆಳಕಿಗೆ ಬರುತ್ತಿವೆ. ಇದಾಗಲೇ ಪತಿ, ಭಾವಿಪತಿಯನ್ನು ಕೊಂದಿರುವ ಹಂತಕಿಯರ ಹೈಪ್ರೊಫೈಲ್ ಕೇಸ್ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ನಡುವೆಯೇ, ಉತ್ತರ ಪ್ರದೇಶದ ಮೀರತ್ನಲ್ಲಿ ಇನ್ನೊಂದು ಭೀಕರ ಘಟನೆ ನಡೆದಿದೆ. ಹಾಸಿಗೆಯ ಮೇಲೆ ವಿಷಕಾರಿ ಹಾವನ್ನು ಬಿಟ್ಟು ಗಂಡನನ್ನು ಪ್ರಿಯಕರನ ಜೊತೆಗೂಡಿ ಸಾಯಿಸಿದ್ದಾಳೆ ಖತರ್ನಾಕ್ ಪತ್ನಿ. ಸಾವನ್ನು ಆಕಸ್ಮಿಕವೆಂದು ಬಿಂಬಿಸಲು ಹಾವನ್ನು ಬಳಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ, 20 ಲಕ್ಷ ರೂಪಾಯಿಗಳ ವಿಮಾ ಪಾವತಿಯನ್ನು ಪಡೆಯಲು ಮತ್ತು ತನ್ನ ಅಕ್ರಂ ಸಂಬಂಧವನ್ನು ಮುಂದುವರಿಸುವುದು ಆಕೆಯ ಉದ್ದೇಶವಾಗಿತ್ತು ಎನ್ನುವುದು ತಿಳಿದುಬಂದಿದೆ.
ಅತುಲ್ ಪನ್ವರ್ ಎಂಬುವವರು ಕಿರಾತಕಿ ಪತ್ನಿ ದಾಮಿನಿಯಿಂದಾಗಿ ಶವವಾಗಿದ್ದಾರೆ. ಹಸ್ತಿನಾಪುರದಲ್ಲಿ ಕೃಷ್ಣ ಕಿಡ್ಸ್ ಪ್ಲೇ ಸ್ಕೂಲ್ ಅನ್ನು ನಡೆಸುತ್ತಿದ್ದರು ಈ ದಂಪತಿ. ಅತುಲ್ ಪನ್ವರ್ ಮತ್ತು ದಾಮಿನಿ 2019 ರಲ್ಲಿ ವಿವಾಹವಾದರು ಮತ್ತು ಹಸ್ತಿನಾಪುರದಲ್ಲಿ ವಾಸಿಸುತ್ತಿದ್ದರು. ದಾಮಿನಿಗೆ ಶಾಲೆಯ ಬಸ್ ಚಾಲಕ ತುಷಾರ್ ಅಲಿಯಾಸ್ ನಿಕ್ಕಿ ಜೊತೆ ಸಂಬಂಧ ಬೆಳೆದಿತ್ತು. ಇವರಿಬ್ಬರೂ ಸೇರಿ ಅತುಲ್ ಅವರನ್ನು ಸಾಯಿಸುವ ಯೋಜನೆ ರೂಪಿಸಿದ್ದರು. ಇದನ್ನು ಸಹಜ ಸಾವು ಎಂದು ಮಾಡುವ ಉದ್ದೇಶದಿಂದ ಭಾರಿ ಯೋಜನೆ ರೂಪಿಸಿದ್ದರು. ಇಬ್ಬರೂ ಮೊದಲು ರಸ್ತೆ ಅಪಘಾತವನ್ನು ಸೃಷ್ಟಿಸುವ ಮೂಲಕ ಅತುಲ್ನನ್ನು ಕೊಲ್ಲಲು ಪ್ರಯತ್ನಿಸಿದರು, ಆದರೆ ಆ ಯೋಜನೆ ವಿಫಲವಾದ ನಂತರ, ಅವರು ಮತ್ತೊಂದು ಸಂಚು ರೂಪಿಸಿದರು ಎನ್ನುವ ಮಾಹಿತಿ ನೀಡಿದ್ದಾರೆ ಮೀರತ್ ಹಿರಿಯ ಪೊಲೀಸ್ ಅಧೀಕ್ಷಕರು.
ದಾಮಿನಿ ತನ್ನ ಗಂಡನ ಹಾಲಿಗೆ ನಿದ್ರೆ ಮಾತ್ರೆಗಳನ್ನು ಬೆರೆಸಿ ಪ್ರಜ್ಞೆ ತಪ್ಪಿಸಿ, ನಂತರ ಹಾಸಿಗೆಯ ಮೇಲೆ ವಿಷಪೂರಿತ ಹಾವನ್ನು ಬಿಟ್ಟಿದ್ದಾಳೆ. ಅದು ಕಚ್ಚಿದ್ದರಿಂದ ಪತಿ ಹಾಸಿಗೆಯಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಕೊನೆಗೆ ಪತಿಯನ್ನು ಕಳೆದುಕೊಂಡು ಗೋಳೋ ಎಂದು ನಾಟಕವಾಡಿದ್ದಾಳೆ ದಾಮಿನಿ. ಮೊದಲಿಗೆ ಇದು ಹಾವು ಕಚ್ಚಿದ ಸಾವು ಎಂದೇ ಪರಿಗಣನೆಯಾಗಿತ್ತು. ಆದರೆ ತೀವ್ರ ತನಿಖೆಯ ನಂತರ ತನ್ನ ಖತರ್ನಾಕ್ ಐಡಿಯಾ ಬಿಚ್ಚಿಟ್ಟಿದ್ದಾಳೆ ಹಂತಕಿ.
ಪೊಲೀಸರು ಈ ಪಿತೂರಿ ಎರಡು ಉದ್ದೇಶಗಳಿಂದ ನಡೆಸಲ್ಪಟ್ಟಿದೆ ಎಂದು ಹೇಳಿದ್ದಾರೆ. 20 ಲಕ್ಷ ರೂಪಾಯಿ ವಿಮೆಯನ್ನು ಪಡೆಯುವುದು ಮತ್ತು ಅಕ್ರಮ ಸಂಬಂಧವನ್ನು ಮುಂದುವರೆಸುವ ಉದ್ದೇಶವಿತ್ತು. ಅನುಮಾನವನ್ನು ತಪ್ಪಿಸಲು ಸಾವನ್ನು ನೈಸರ್ಗಿಕ ಹಾವು ಕಡಿತದ ಘಟನೆ ಎಂದು ಬಿಂಬಿಸಲು ಆರೋಪಿಗಳು ಈ ಸಂಚನ್ನು ಯೋಜಿಸಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ಸಾವು ಹಾವು ಕಡಿತದಿಂದ ಉಂಟಾಗಿದೆ ಎಂದು ಕಂಡುಬಂದರೂ, ತನಿಖಾಧಿಕಾರಿಗಳು ಸಂದರ್ಭಗಳನ್ನು ಹೆಚ್ಚು ಸೂಕ್ಷ್ಮವಾಗಿ ಪರಿಶೀಲಿಸಲು ಪ್ರಾರಂಭಿಸಿದರು. ಪೊಲೀಸರು ಮೊಬೈಲ್ ಫೋನ್ ದಾಖಲೆಗಳು ಮತ್ತು ಇತರ ಪುರಾವೆಗಳನ್ನು ವಿಶ್ಲೇಷಿಸಿದ್ದಾರೆ, ಇದು ಅಂತಿಮವಾಗಿ ದಾಮಿನಿ ಮತ್ತು ತುಷಾರ್ ನಡುವಿನ ಪಿತೂರಿಯನ್ನು ಬಹಿರಂಗಪಡಿಸಲು ಕಾರಣವಾಯಿತು ಎಂದು ಹೇಳಿದರು. ಇಬ್ಬರನ್ನೂ ಬಂಧಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ. ಪೊಲೀಸರ ಪ್ರಕಾರ, ತುಷಾರ್ ಕೂಡ ವಿವಾಹಿತನಾಗಿದ್ದು, ಕೊಲೆ ಸಂಚು ಬೆಳಕಿಗೆ ಬರುವ ಮೊದಲೇ ತನ್ನ ಹೆಂಡತಿಗೆ ವಿಚ್ಛೇದನ ನೀಡಲು ಯೋಜಿಸುತ್ತಿದ್ದ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ