* ಬಾಗಲಕೋಟೆ ನವನಗರದ ಎಸ್ಬಿಐ ಶಾಖೆಯಲ್ಲಿ ನಡೆದ ಘಟನೆ
* ಸಂತೋಷ ಕಬಾಡೆ ಬ್ಯಾಂಕಿಗೆ ವಂಚನೆ ಮಾಡಿದ ಕ್ಯಾಶಿಯರ್
* ಈ ಕುರಿತು ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ಬ್ಯಾಂಕಿನ ಶಾಖಾ ವ್ಯವಸ್ಥಾಪಕ
ಬಾಗಲಕೋಟೆ(ಜೂ.09): ಬ್ಯಾಂಕ್ ಕ್ಯಾಶಿಯರ್ನಿಂದಲೇ 1.60 ಕೋಟಿ ಹಣ ಲಪಟಾಯಿಸಿರುವ ಘಟನೆ ಬಾಗಲಕೋಟೆ ನವನಗರ ವ್ಯಾಪ್ತಿಯ ಎಸ್ಬಿಐ ಶಾಖೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಕ್ಯಾಶಿಯರ್ ಸಂತೋಷ ಕಬಾಡೆ ವಿರುದ್ಧ ನವನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನವನಗರದ ಎಸ್ಬಿಐ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂತೋಷ ಕಬಾಡೆ ಬ್ಯಾಂಕಿಗೆ ವಂಚನೆ ಮಾಡಿದ್ದು ಬ್ಯಾಂಕಿನ ಚೆಸ್ಟ್ನಲ್ಲಿರುವ ಹಣವನ್ನು ಯಾರಿಗೂ ಗೊತ್ತಾಗದಂತೆ ಪತ್ನಿ ಪೂಜಾ ಹಾಗೂ ತಾಯಿ ಜಾನಾಬಾಯಿ ಶಂಕರ ಕಬಾಡೆ ಅವರ ಖಾತೆಗೆ ಕಳೆದ ಮೂರು ತಿಂಗಳಿನಿಂದ ಜೂನ್ 4ರವರೆಗೆ ಟೇಲರ್ ಐಡಿಯಿಂದ ಬರುವ ನಂಬರ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡಿರುವುದು ಬ್ಯಾಂಕಿನ ಹಿರಿಯ ವ್ಯವಸ್ಥಾಪಕರ ಗಮನಕ್ಕೆ ಬಂದ ನಂತರ ದೂರು ದಾಖಲಿಸಲಾಗಿದೆ.
ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾದ ಅಲ್ಲಪ್ಪ ಲಕ್ಷಟ್ಟಿ ಎಂಬುವರು ಈ ಕುರಿತು ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.