
ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ
ಮಂಡ್ಯ (ಸೆ. 22): ಯಾರಿಗಾದರೂ ಕಾರು (Car) ಬಾಡಿಗೆ ಕೊಡ್ತಿದ್ದೀರಾ? ಹಾಗಾದರೆ ಬಾಡಿಗೆ ನೀಡುವ ಮುನ್ನ ಎಚ್ಚರವಿರಲಿ. ನಿಮ್ಮ ಬಳಿ ಬಾಡಿಗೆ ಪಡೆದು ಕಾರನ್ನು ಅಡಮಾನವಿಡುವ ಜಾಲವೊಂದು ಪತ್ತೆಯಾಗಿದೆ. ಕಾರುಗಳನ್ನು ಬಾಡಿಗೆ ಪಡೆದು ಅದರ ನಂಬರ್ ಪ್ಲೇಟ್ (Number Plate) ಬದಲಾಯಿಸಿ ಅಡಮಾನ ಇಡ್ತಿದ್ದ ಖತರ್ನಾಕ್ ಆಸಾಮಿ ಮಂಡ್ಯ ಪೊಲೀಸರ (Mandya Police) ಅತಿಥಿಯಾಗಿದ್ದಾನೆ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಕೆಂಡನಹಳ್ಳಿ ನಿವಾಸಿ ಕುಮಾರಸ್ವಾಮಿ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಮೈಬಗ್ಗಿಸಿ ದುಡಿಯಲು ಆಗದೇ ಇದ್ರೂ ಮೈತುಂಬ ಕೆಟ್ಟ ಚಟ ಜೊತೆಗೆ ಶೋಕಿವಾಲ ಆಗಿದ್ದ ಕುಮಾರಸ್ವಾಮಿ ಸುಲಭವಾಗಿ ಹಣ ಮಾಡೋದಕ್ಕೆ ಇನ್ನೊಬ್ಬರ ಬಳಿ ಬಾಡಿಗೆಗೆ ಕಾರು ಪಡೆದು ಮತ್ತೊಬ್ಬರಿಗೆ ಅಡಮಾನವಿಟ್ಟು ವಂಚಿಸುವ ದಾರಿ ಹಿಡಿದಿದ್ದನು.
ಶೋಕಿವಾಲ ವಂಚಕನಿಗೆ ಅಮಾಯಕ ಕಾರು ಮಾಲೀಕರೇ ಟಾರ್ಗೆಟ್: ಹೆಚ್ಚಾಗಿ ಅಮಾಯಕ ಕಾರು ಮಾಲೀಕರನ್ನೇ ಟಾರ್ಗೆಟ್ ಮಾಡಿದ್ದ ಈತ. ಕಾರು ಮಾಲೀಕರನ್ನ ಮೊದಲಿಗೆ ಪರಿಚಯ ಮಾಡಿಕೊಂಡು ನಯವಾಗಿ ಮಾತನಾಡುತ್ತಿದ್ದ. ನಿಮ್ಮ ಕಾರನ್ನ ಸರ್ಕಾರಿ ಕಚೇರಿಗೋ ಅಥವಾ ಬೆಂಗಳೂರಿನ ಕಂಪನಿಯೊಂದಕ್ಕೆ ಬಾಡಿಗೆಗೆ (Rent) ಬಿಡುತ್ತೇನೆಂದು ನಂಬಿಸುತ್ತಿದ್ದ.
Mumbai: ನಿಮ್ಮ ಮನೆಯಲ್ಲಿ ದೆವ್ವ ಇದೆ ಎಂದು ಹೇಳಿ 15 ಲಕ್ಷ ಲೂಟಿ ಮಾಡಿದ ಮನೆಗೆಲಸದಾಕೆ, ಮಹಿಳಾ ಮಾಂತ್ರಿಕ
ಬಳಿಕ ತಿಂಗಳ ಬಾಡಿಗೆಗೆ ಆಧಾರದ ಮೇಲೆ ಈ ಸ್ಟ್ಯಾಂಪ್ ಪೇಪರ್ನಲ್ಲಿ (Stamp Paper) ಅಗ್ರಿಮೆಂಟ್ ಮಾಡಿಕೊಂಡು ಕಾರು ತೆಗೆದುಕೊಂಡು ಹೋದ್ರೆ ಮತ್ತೆ ಮಾಲೀಕರ ಕೈಗೆ ಸಿಗುತ್ತಲೇ ಇರಲಿಲ್ಲ. ಆ ಕಾರಿನ ಎಲ್ಲೋ ನಂಬರ್ ಪ್ಲೇಟ್ ಕಿತ್ತು ವೈಟ್ ಬೋರ್ಡ್ ಹಾಕಿ ಪರಿಚಯಸ್ಥರ ಬಳಿ ಲಕ್ಷ ಲಕ್ಷಕ್ಕೆ ಅಡವಿಡುತ್ತಿದ್ದ.
ಬಂದ ಹಣದಲ್ಲಿ ಗಾಂಜಾ ಎಣ್ಣೆ ಅಂತ ಶೋಕಿ ಮಾಡೋದಲ್ಲದೆ ಅದೇ ಹಣದಲ್ಲಿ ಇಸ್ಪೀಟ್ ಆಡುತ್ತಿದ್ದ. ಹಣ ಖಾಲಿಯಾಗುತ್ತಿದ್ದಂತೆ ಮತ್ತೊಬ್ಬ ಅಮಾಯಕನನ್ನ ಹುಡುಕಿ ವಂಚಿಸುವುದೇ ಈತನ ಕಾಯಕವಾಗಿತ್ತು. ಅದೇ ರೀತಿ ಕಳೆದ ಜುಲೈನಲ್ಲಿ ಮಳವಳ್ಳಿಯ ಪುನೀತ್ ಗೌಡ ಎಂಬುವವರಿಂದ ಕಾರು ಬಾಡಿಗೆಗೆ ಪಡೆದು ಮತ್ತೊಬ್ಬರ ಬಳಿ ಅಡವಿಟ್ಟಿದ್ದ.
ಈ ವಿಚಾರ ಹೇಗೋ ಪುನೀತ್ಗೆ ತಿಳಿದಿತ್ತು. ಆ ವೇಳೆ ಕುಮಾರಸ್ವಾಮಿಗೆ ಫೋನ್ ಮಾಡಿದ ಪುನೀತ್, ತನ್ನ ಸ್ನೇಹಿತನ ಬಳಿ ಇನೋವಾ ಕ್ರಿಸ್ಟಾ ಕಾರಿದೆ. ಬಾಡಿಗೆಗೆ ನೀಡುತ್ತಾನೆಂದು ಕರೆಸಿಕೊಂಡು ಬಳಿಕ ತನ್ನ ಸೋದರ ಹಾಗೂ ಸ್ನೇಹಿತರ ಸಹಾಯದಿಂದ ಹಲಗೂರು ಪೊಲೀಸರಿಗೆ (Halaguru Police) ಹಿಡಿದು ಕೊಟ್ಟು, ಕಂಪ್ಲೇಂಟ್ ಕೂಡ ನೀಡಿದ್ದರು.
ಉದ್ಯೋಗ, ಹಣದ ಆಮಿಷೆ ತೋರಿಸಿ ನಿರುದ್ಯೋಗಿ ಯುವಕ-ಯುವತಿಯರಿಗೆ ಮೋಸ
ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈತನ ಅಸಲಿಯತ್ತು ಬಯಲಾಗಿದೆ, ಬರೋಬ್ಬರಿ 19 ಜನರಿಗೆ ವಂಚಿಸಿರೋದು ಬೆಳಕಿಗೆ ಬಂದಿದೆ. ಬಂಧಿತ ಕುಮಾರಸ್ವಾಮಿ ಅಡವಿಟ್ಟಿದ್ದ ಸುಮಾರು ಒಂದು ಕೋಟಿ ಮೌಲ್ಯದ 9 ಸ್ವೀಫ್ಟ್ ಡಿಸೈರ್, 2 ಇಂಡಿಕಾ, ತಲಾ ಒಂದೊಂದು ಇನೋವಾ, ರಿಟ್ಜ್, ತವೇರಾ, ಕ್ವಿಡ್, ಮಹೇಂದ್ರ ಕೆಯುವಿ, ಸೆಲೇರಿಯೋ, ಮಾರುತಿ ಆಲ್ಟೋ ಹಾಗೂ 1 ಅಶೋಕ್ ಲೈಲಾಂಡ್ ಮಿನಿ ಗೂಡ್ಸ್ ವಾಹನಗಳನ್ನು (Vehicles) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ವಶದಲ್ಲಿರುವ ವಾಹನಗಳನ್ನು ಪೊಲೀಸರು ಮಾಲೀಕರಿಗೆ ಹಿಂದಿರುಗಿಸುವ ಕೆಲಸ ಮಾಡ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ