
ಫ್ರಿಜ್ ನಲ್ಲಿಟ್ಟ ಐಸ್ ಕ್ರೀಮ್ ಅಥವಾ ಚಾಕೋಲೇಟ್ ಬೇರೆಯವರು ತಿಂದ್ರೆ ಮಕ್ಕಳು ಅತ್ತು ಗಲಾಟೆ ಮಾಡ್ತಾರೆ. ಆದ್ರೆ ಇಲ್ಲೊಂದು ಕುಟುಂಬ ರಸ್ಮಲೈಗೆ ಗಲಾಟೆ ಮಾಡ್ಕೊಂಡಿದೆ. ಮಕ್ಕಳಲ್ಲ, ದೊಡ್ಡವರು ಕಿತ್ತಾಡಿಕೊಂಡು ಆಸ್ಪತ್ರೆ ಸೇರುವಂತಾಗಿದೆ.
ಘಟನೆ ಉತ್ತರ ಪ್ರದೇಶದ ಉನ್ನಾವ್ನಲ್ಲಿ ನಡೆದಿದೆ. ಫ್ರಿಜ್ನಲ್ಲಿದ್ದ ರಸ್ಮಲೈ ತಿಂದಿದ್ದಕ್ಕೆ ಎರಡು ಸಹೋದರರ ಕುಟುಂಬದ ನಡುವೆ ಜಗಳ ಶುರುವಾಗಿದೆ. ಇದು ವಿಕೋಪಕ್ಕೆ ತಿರುಗಿ ಆಸ್ಪತ್ರೆ ಸೇರುವಂತಾಗಿದೆ. ಉನ್ನಾವ್ ಜಿಲ್ಲೆಯ ಬಂಗಾರಮೌ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಭಾನುವಾರ ರಾತ್ರಿ ಶಾನು ಅವರ ಪತ್ನಿ ಸಾಬ್ರೀನ್, ಫ್ರಿಜ್ನಲ್ಲಿದ್ದ ರಸ್ಮಲೈಯನ್ನು ಮಕ್ಕಳಿಗೆ ಹಂಚಿ, ತಾವೂ ತಿಂದಿದ್ದಾರೆ. ಸಾಬ್ರೀನ್ ಅವರ ಸಹೋದರಿ ಮಕ್ಕಳಿಗೆ ರಸ್ಮಲೈ ತಿನ್ನಿಸುವಂತೆ ಫೋನ್ನಲ್ಲಿ ಹೇಳಿದ್ದರಿಂದ, ಅವರು ಮಕ್ಕಳಿಗೆ ಸಿಹಿ ಹಂಚಿದ್ದರು ಎನ್ನಲಾಗಿದೆ.
ಆದರೆ ರಸ್ಮಲೈ ತಿಂದ ವಿಚಾರ ತಿಳಿದ ಶಾನು ಅವರ ತಮ್ಮ ನೂರ್ ಮತ್ತು ಅವರ ಪತ್ನಿ ಫಾತ್ಮಾ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರಕ್ಕೆ ಸಾಬ್ರೀನ್ ಜೊತೆ ಮಾತಿನ ಚಕಮಕಿ ಆರಂಭವಾಗಿದೆ. ಆರಂಭದಲ್ಲಿ ಸಣ್ಣದಾಗಿ ಶುರುವಾದ ವಾಗ್ವಾದ, ಕೆಲವೇ ಕ್ಷಣಗಳಲ್ಲಿ ದೊಡ್ಡ ಜಗಳವಾಗಿ ಮಾರ್ಪಟ್ಟಿದೆ.
ಆರೋಪದ ಪ್ರಕಾರ, ಜಗಳ ತೀವ್ರಗೊಂಡ ಬಳಿಕ ನೂರ್ ಮತ್ತು ಫಾತ್ಮಾ ಕತ್ತರಿಯಿಂದ ಶಾನು ಹಾಗೂ ಸಾಬ್ರೀನ್ ಮೇಲೆ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ದಂಪತಿಗೆ ಗಂಭೀರ ಗಾಯಗಳಾಗಿವೆ. ಘಟನೆ ಬಳಿಕ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರು ಗಾಯಗೊಂಡ ಶಾನು ಮತ್ತು ಸಾಬ್ರೀನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಇಬ್ಬರಿಗೂ ಚಿಕಿತ್ಸೆ ಮುಂದುವರಿದಿದೆ.
ಇತ್ತ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ದೂರಿನ ಆಧಾರದ ಮೇಲೆ ಪೊಲೀಸರು ನೂರ್ ಮತ್ತು ಫಾತ್ಮಾ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಣ್ಣದೊಂದು ರಸ್ಮಲೈ ವಿಚಾರ ಇಷ್ಟೊಂದು ದೊಡ್ಡ ಸಂಘರ್ಷಕ್ಕೆ ಕಾರಣವಾಗಿದ್ದು, ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ