
ಹುಬ್ಬಳ್ಳಿ(ಮೇ 31) ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಮಗಳನ್ನು ಹುಡುಕಿಕೊಡಿ ಎಂದು ಯುವತಿಯ ಪೋಷಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದರೆ ಹೇಬಿಯಸ್ ಕಾರ್ಪಸ್ ನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.
ಯುವತಿ ಅಕ್ರಮ ಬಂಧನದ ಆರೋಪ ನಿರಾಕರಿಸಿದ್ದಾರೆ. ತಂದೆಯೊಂದಿಗೆ ಸಮಾಲೋಚಿಸಲು ಯುವತಿ ಒಪ್ಪಿಗೆ ಕೊಟ್ಟಿಲ್ಲ. ಎಲ್ಲವೂ ಸರಿ ಹೋದಾಗ ಮಾತನಾಡುತ್ತೇನೆ. ತಂದೆಯೊಂದಿಗೆ ಸದ್ಯ ಮಾತನಾಡುವುದಿಲ್ಲವೆಂದು ಯುವತಿ ಹೇಳಿಕೆ ನೀಡಿದ್ದಾರೆ. ಯುವತಿ ಇರುವ ಸ್ಥಳಕ್ಕೆ ತೆರಳಲು ಹೈಕೋರ್ಟ್ ಸೂಚಿಸಿತ್ತು.
ಅದರಂತೆ ರಿಜಿಸ್ಟ್ರಾರ್ ಜನರಲ್ ಶಿವಶಂಕರೇಗೌಡ, ಜಂಟಿ ರಿಜಿಸ್ಟ್ರಾರ್ ವರಲಕ್ಷ್ಮಿಯೊಂದಿಗೆ ಯುವತಿ ನಿವಾಸಕ್ಕೆ ಭೇಟಿ ನೀಡಿದ್ದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಯುವತಿಯೊಂದಿಗೆ ನ್ಯಾಯಾಲಯ ಮಾತನಾಡಿದೆ. ಹೈಕೋರ್ಟ್ ನ ಧಾರವಾಡ ಪೀಠಕ್ಕೆ ಸಲ್ಲಿಕೆಯಾಗಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ಇತ್ಯರ್ಥಪಡಿಸಲಾಗಿದೆ.
ಧಾರವಾಡ ಹೈಕೋರ್ಟ್ ಪೀಠದಲ್ಲಿ ಯುವತಿ ಪೋಷಕರು ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದರು. ಈ ಹಿಂದೆ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯ ಮೊರೆ ಹೋಗಿದ್ದ ಪೋಷಕರು ಈಗ ನ್ಯಾಯಾಲಯಕ್ಕೆ ವಿನಂತಿ ಮಾಡಿಕೊಂಡಿದ್ದರು.
ನಾವು ಅಂದೇ ದೂರು ಕೊಟ್ಟಿದ್ದರೂ ಈವರೆಗೆ ಮಗಳನ್ನು ಹುಡುಕಿಕೊಟ್ಟಿಲ್ಲ ಎಂದು ಆರೋಪಿಸಿ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು.. ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು.
ಯುವತಿ ಸಹ ಎಸ್ಐಟಿ ಮುಂದೆ ಹಾಜರಾಗಿ ವಿಚಾರಣೆಗೆ ಒಳಪಟ್ಟಿದ್ದರು. ಬಳಿಕ ಮಗಳು ಪೋಷಕರ ಬಳಿ ಹೋಗಿರಲಿಲ್ಲ. ಅಜ್ಞಾತ ಸ್ಥಳದಿಂದ ವಿಚಾರಣೆಗೆ ಹಾಜರಾಗಿದ್ದರು.
ವರದಿ ಸಲ್ಲಿಕೆ: ಈ ನಡುವೆ ಎಸ್ಐಟಿ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಹೈಕೋರ್ಟ್ ಗೆ ಸಲ್ಲಿಸಿದೆ. ಎಸ್ಐಟಿ ಹೆಚ್ಚುವರಿ ಪೊಲೀಸ್ ಆಯುಕ್ತ ವರದಿ ಸಲ್ಲಿಕೆ ಮಾಡಿದ್ದಾರೆ. ಮೂರು ಎಫ್ಐಆರ್ ಗಳ ಬಗ್ಗೆ ರಿಪೋರ್ಟ್ ನೀಡಲಾಗಿದ್ದು ಆರ್ ಟಿ ನಗರ ಪ್ರಕರಣದಲ್ಲಿ ಮೇ 24 ರಂದು ಬಿ ರಿಪೋರ್ಟ್ ಸಲ್ಲಿಕೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ