ಬೀದರ್‌: ಬಾಲಕಿಯರೊಂದಿಗೆ ಅಸಭ್ಯ ವರ್ತನೆ, ಪ್ರಾಂಶುಪಾಲ ಸೆರೆ

Published : Jul 22, 2023, 10:00 PM IST
ಬೀದರ್‌: ಬಾಲಕಿಯರೊಂದಿಗೆ ಅಸಭ್ಯ ವರ್ತನೆ, ಪ್ರಾಂಶುಪಾಲ ಸೆರೆ

ಸಾರಾಂಶ

ಪ್ರಾಂಶುಪಾಲರು ನಮ್ಮ ಮೈ ಮುಟ್ಟುವುದು, ಮುತ್ತು ಕೊಡುವುದು, ಫೋಟೋ ತೆಗೆಸಿಕೊಳ್ಳುವುದು ಸೇರಿದಂತೆ ಮತ್ತಿತರ ಅಸಭ್ಯ ವರ್ತನೆ ತೋರಿದ್ದಾರೆ. ಹಲವು ವಿದ್ಯಾರ್ಥಿನಿಯರು ಇವರ ಕೆಟ್ಟದೃಷ್ಟಿಯಿಂದ ಬಳಲಿದ್ದಾರೆ. ಇವರ ವಿರುದ್ಧ ಶಿಸ್ತು ಕ್ರಮವಾಗಲಿ ಎಂದು ಆರೋಪಿಸಿ ಪತ್ರ ಬರೆದು ಆಗ್ರಹಿಸಿದ್ದ ವಿದ್ಯಾರ್ಥಿನಿಯರು. 

ಬೀದರ್‌(ಜು.22):  ಜಿಲ್ಲೆಯ ಸರ್ಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದರ ಬಾಲಕಿಯರಿಗೆ ಅಲ್ಲಿನ ಪ್ರಾಂಶುಪಾಲರು ಅಸಭ್ಯ ವರ್ತನೆ ತೋರಿದ್ದಾರೆ ಎಂಬ ಆರೋಪದ ಮೇರೆಗೆ ಪ್ರಾಥಮಿಕ ವರದಿಯನ್ವಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದೂರಿನ ಹಿನ್ನೆಲೆಯಲ್ಲಿ ಪ್ರಾಂಶುಪಾಲ ನಾಗಶೆಟ್ಟಿಕುಲಕರ್ಣಿ ಅವರನ್ನು ಗುರುವಾರ ರಾತ್ರಿ ಬಂಧಿಸಿರುವ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಪ್ರಾಂಶುಪಾಲರು ನಮ್ಮ ಮೈ ಮುಟ್ಟುವುದು, ಮುತ್ತು ಕೊಡುವುದು, ಫೋಟೋ ತೆಗೆಸಿಕೊಳ್ಳುವುದು ಸೇರಿದಂತೆ ಮತ್ತಿತರ ಅಸಭ್ಯ ವರ್ತನೆ ತೋರಿದ್ದಾರೆ. ಹಲವು ವಿದ್ಯಾರ್ಥಿನಿಯರು ಇವರ ಕೆಟ್ಟದೃಷ್ಟಿಯಿಂದ ಬಳಲಿದ್ದಾರೆ. ಇವರ ವಿರುದ್ಧ ಶಿಸ್ತು ಕ್ರಮವಾಗಲಿ ಎಂದು ವಿದ್ಯಾರ್ಥಿನಿಯರು ಆರೋಪಿಸಿ ಪತ್ರ ಬರೆದು ಆಗ್ರಹಿಸಿದ್ದರು.

ಬೀದರ್‌: ಮೊರಾರ್ಜಿ ಶಾಲೆ ಪ್ರಾಂಶುಪಾಲರಿಂದ ಅಸಭ್ಯ ವರ್ತನೆ: ವಿದ್ಯಾ​ರ್ಥಿ​ನಿ​ಯರ ದೂರು

ಈ ಕುರಿತಂತೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನೇತೃತ್ವದಲ್ಲಿ 5 ಜನ ಮಹಿಳಾ ಅಧಿಕಾರಿಗಳ ತಂಡ ರಚಿಸಿ ವಸತಿ ಶಾಲೆಗೆ ಕಳುಹಿಸಿದ್ದರು. ಈ ತಂಡ ನೀಡಿದ ಪರಿಶೀಲನಾ ವರದಿ ಆಧಾರದ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ನೀಡಿದ ದೂರಿನ ಹಿನ್ನೆಲೆ ಚಿಟಗುಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಾಂಶುಪಾಲನ ವಿರುದ್ಧ ಪ್ರಕರಣ ದಾಖಲಾಗಿದೆ. ಪೋಕ್ಸೋ ಕಾಯ್ದೆ ಅಡಿಯಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಬಂಧನದ ಹಿನ್ನೆಲೆ ಇಲಾಖೆ ಪ್ರಾಂಶುಪಾಲರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದೆ.

ಗುರುವಾರ ಅಧಿಕಾರಿಗಳು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದ್ದಾರಾದರೂ ಇದಕ್ಕೂ 10 ದಿನಗಳ ಮೊದಲು ವಸತಿ ಶಾಲೆಯ ಸ್ಟಾಫನರ್ಸ್‌, ಎಫ್‌ಡಿಸಿ ಹಾಗೂ ಶಿಕ್ಷಕರಿಗೆ ವಿದ್ಯಾರ್ಥಿನಿಯರು ತಮಗಾಗುತ್ತಿರುವ ಕಿರುಕುಳ ಕುರಿತಂತೆ ತಿಳಿಸಿದ್ದು, ಅದನ್ನು ಮರೆಮಾಚುವ ಯತ್ನ ನಡೆದಿರುವುದು ಪ್ರಾಂಶುಪಾಲನ ವಿರುದ್ಧ ದೂರು ದಾಖಲಾಗಲು ಆಗಿರುವ ವಿಳಂಬ ಸ್ಪಷ್ಟಪಡಿಸುತ್ತದೆ.

ಹೀಗಾಗಿ ಬಾಲಕಿಯರಿಗೆ ಕಿರುಕುಳ ನೀಡುತ್ತಿದ್ದ ಪ್ರಾಂಶುಪಾಲನ ವಿರುದ್ಧ 10 ದಿನಗಳಾದರೂ ಶಿಸ್ತು ಕ್ರಮವಹಿಸುವ ಜವಾಬ್ದಾರಿಯನ್ನ ಜಿಲ್ಲೆಯ ಹಿರಿಯ ಅಧಿಕಾರಿಗಳಿಂದ ನಡೆದಿಲ್ಲ ಎಂಬುವುದು ಅತ್ಯಂತ ವಿಷಾದಕರ ಸಂಗತಿ. ಅಲ್ಲದೆ ವಿದ್ಯಾರ್ಥಿನಿಯರ ಈ ಸಮಸ್ಯೆ ಕುರಿತಂತೆ ಅಲ್ಲಿನ ಇತರ ಜವಾಬ್ದಾರಿಯುತ ಸಿಬ್ಬಂದಿ ಕೂಡ ಬಾಯಿಬಿಡದಿರುವುದು ಬೇಸರದ ಸಂಗತಿ. ಹೀಗಾಗಿ ಆರೋಪಿ ಪ್ರಾಂಶುಪಾಲನಷ್ಟೇ ಅಲ್ಲ, ಸಂಬಂಧಿತ ಹಿರಿಯ ಅಧಿಕಾರಿಗಳೆಲ್ಲರೂ ತಪ್ಪಿನಲ್ಲಿ ಭಾಗಿದಾರರು ಎಂಬುವುದು ಸ್ಪಷ್ಟ. ಇವರ ವಿರುದ್ಧವೂ ಶಿಸ್ತು ಕ್ರಮವಾಗಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!