Bengaluru Police: ನೀರು ಕೇಳಿದ ಯುವಕನಿಗೆ ಮೂತ್ರ ಕೊಟ್ಟ ಪೊಲೀಸರು?

Kannadaprabha News   | Asianet News
Published : Dec 05, 2021, 06:38 AM ISTUpdated : Dec 05, 2021, 06:42 AM IST
Bengaluru Police: ನೀರು ಕೇಳಿದ ಯುವಕನಿಗೆ ಮೂತ್ರ ಕೊಟ್ಟ ಪೊಲೀಸರು?

ಸಾರಾಂಶ

*  ನೆರೆ ಮನೆಯವರೊಂದಿಗೆ ಜಗಳವಾಡಿದ್ದ ಯುವಕ *  ಅನಧಿಕೃತವಾಗಿ ಠಾಣೆಗೆ ಕರೆದೊಯ್ದು ಹಿಂಸೆ *  ಮರ್ಮಾಂಗಕ್ಕೂ ಪೆಟ್ಟು: ಕುಟುಂಬಸ್ಥರ ಗಂಭೀರ ಆರೋಪ  

ಬೆಂಗಳೂರು(ಡಿ.05):  ಕ್ಷುಲ್ಲಕ ಕಾರಣಕ್ಕೆ ಎರಡು ದಿನಗಳು ಅಕ್ರಮವಾಗಿ ಬಂಧನದಲ್ಲಿಟ್ಟು ಮುಸ್ಲಿಂ(Muslim) ಸಮುದಾಯದ ಯುವಕನೊಬ್ಬನಿಗೆ ಬಲವಂತವಾಗಿ ಗಡ್ಡ ಕತ್ತರಿಸಿ ಬ್ಯಾಟರಾಯಪುರ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಹರೀಶ್‌ ಚಿತ್ರಹಿಂಸೆ(Torture) ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪಾದರಾಯನಪುರದ ತೌಸೀಫ್‌ ಪಾಷ (23) ಎಂಬಾತನೇ ದೌರ್ಜನ್ಯಕ್ಕೊಳಗಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಂತ್ರಸ್ತ ಚಿಕಿತ್ಸೆ(Treatment) ಪಡೆಯುತ್ತಿದ್ದಾನೆ. ತನ್ನ ನೆರೆಹೊರೆಯವರ ಜತೆ ಜಗಳದ ವಿಚಾರವಾಗಿ ತೌಸೀಫ್‌ನನ್ನು ವಶಕ್ಕೆ ಪಡೆದು ಸಬ್‌ ಇನ್‌ಸ್ಪೆಕ್ಟರ್‌ ಹರೀಶ್‌ ಮನಬಂದಂತೆ ಹೊಡೆದು ಥಳಿಸಿದ್ದಾರೆ(Assault) ಎಂದು ಸಂತ್ರಸ್ತನ ಕುಟುಂಬದವರು ಆರೋಪಿಸಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ಅವರಿಗೆ ಮಾನವ ಹಕ್ಕು ಕಾರ್ಯಕರ್ತರೊಬ್ಬರು ದೂರು ನೀಡಿದ್ದಾರೆ. ಹಲ್ಲೆ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಡಾ. ಸಂಜೀವ್‌ ಪಾಟೀಲ್‌ ಅವರು, ಈ ಘಟನೆ ಸಂಬಂಧ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಕೆಂಗೇರಿ ಉಪ ವಿಭಾಗದ ಎಸಿಪಿ ಕೋದಂಡರಾಮಯ್ಯ ಅವರಿಗೆ ಸೂಚಿಸಿದ್ದಾರೆ.

CCB Raid: ಪರಪ್ಪನ ಅಗ್ರಹಾರ ಜೈಲಲ್ಲಿ ಗಾಂಜಾ..!

ನೀರು ಕೇಳಿದರೆ ಮೂತ್ರ ಕೊಟ್ಟ ಪೊಲೀಸರು?

ಪಾದರಾಯಪುರದಲ್ಲಿ ತನ್ನ ಕುಟುಂಬದ ಜತೆ ತೌಸೀಫ್‌ ನೆಲೆಸಿದ್ದಾನೆ. ಇತ್ತೀಚೆಗೆ ಕ್ಷುಲ್ಲಕ ಕಾರಣಗಳಿಗೆ ನೆರೆಹೊರೆ ಮನೆಯವರ ಜತೆ ಆತನ ಮನಸ್ತಾಪವಾಗಿತ್ತು. ಸಣ್ಣ ಪುಟ್ಟ ವಿಚಾರಗಳಿಗೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು. ಕೊನೆಗೆ ತೌಸೀಫ್‌ ವಿರುದ್ಧ ಬ್ಯಾಟರಾಯನಪುರ ಪೊಲೀಸರಿಗೆ(Police) ನೆರೆಮನೆಯವರು ದೂರು(Complaint)ನೀಡಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಸಬ್‌ ಇನ್‌ಸ್ಪೆಕ್ಟರ್‌ ಹರೀಶ್‌, ಎಫ್‌ಐಆರ್‌ ದಾಖಲಿಸದೆ ಡಿ.1ರಂದು ತೌಸೀಫ್‌ನನ್ನು ವಶಕ್ಕೆ ಪಡೆದು ಬಲವಂತವಾಗಿ ಠಾಣೆ ಕರೆದೊಯ್ದಿದ್ದಾರೆ. ಬಳಿಕ ಠಾಣೆಯಲ್ಲಿ ಮನಸೋಇಚ್ಛೆ ಯುವಕನಿಗೆ ಪಿಎಸ್‌ಐ ಲಾಠಿಯಿಂದ ಬಡಿದಿದ್ದಾರೆ. ಒಂದು ಹಂತದಲ್ಲಿ ಕುಡಿಯಲು ನೀರು ಕೇಳಿದರೆ ಬಾಟಲ್‌ಗೆ ಮೂತ್ರ ತುಂಬಿ ಕುಡಿಯಲು ಪಿಎಸ್‌ಐ ನೀಡಿದ್ದರು. ಅಲ್ಲದೆ ಸಂತ್ರಸ್ತನಿಗೆ ಒತ್ತಾಯಪೂರ್ವಕವಾಗಿ ಪೊಲೀಸರು ಗಡ್ಡ ಬೋಳಿಸಿ ಅಮಾನವೀಯ ವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಎರಡು ದಿನಗಳ ಬಳಿಕ ತೌಸೀಫ್‌ನನ್ನು ಪಿಎಸ್‌ಐ ಮನೆಗೆ ಕಳುಹಿಸಿದ್ದಾರೆ. ನಿತ್ರಾಣ ಸ್ಥಿತಿಯಲ್ಲಿದ್ದ ಪುತ್ರನನ್ನು ತೌಸೀಫ್‌ ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರ ಹಲ್ಲೆಯಿಂದ ತೌಸೀಫ್‌ ಅವರ ಗುಪ್ತಾಂಗಕ್ಕೆ ಸಹ ಪೆಟ್ಟಾಗಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಟ್ವಿಟರ್‌ನಲ್ಲಿ ದೂರಿದ್ದಾರೆ.

ತೌಸೀಫ್‌ ಎಂಬಾತನ ಮೇಲೆ ಬ್ಯಾಟರಾಯನಪುರ ಠಾಣೆ ಪಿಎಸ್‌ಐ ಹರೀಶ್‌ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಸಂಬಂಧ ಕೆಂಗೇರಿ ಉಪ ವಿಭಾಗದ ಎಸಿಪಿ ಅವರಿಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದೇನೆ. ವರದಿ ಬಳಿಕ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆ ಅಂತ ಪಶ್ಚಿಮ ವಿಭಾಗ ಡಿಸಿಪಿ ಡಾ. ಸಂಜೀವ್‌ ಪಾಟೀಲ್‌ ತಿಳಿಸಿದ್ದಾರೆ.  

Robbery: ಆಟೋ ಚಾಲಕನ ಸೋಗಿನಲ್ಲಿ ದರೋಡೆ: ಕುಖ್ಯಾತ ಕಳ್ಳನ ಬಂಧನ

ಹಿಗ್ಗಾಮುಗ್ಗ ಥಳಿತಕ್ಕೆ ಆರೋಪಿಯ ಬಲಗೈ ಕಟ್‌: ಪೊಲೀಸರ ಅಮಾನತು

ವಾಹನಗಳ ಬ್ಯಾಟರಿ ಕಳವು ಪ್ರಕರಣ ಸಂಬಂಧ ವಿಚಾರಣೆ ವೇಳೆ ಮನಸೋ ಇಚ್ಛೆ ಹಲ್ಲೆಗೈದಿದ್ದರಿಂದ ಆರೋಪಿಯೊಬ್ಬ ಬಲಗೈ ಕಳೆದುಕೊಂಡಿದ್ದಾನೆ. ಈ ಸಂಬಂಧ ವರ್ತೂರು ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ ಸೇರಿ ಮೂವರು ಪೊಲೀಸರನ್ನು ಸೇವೆಯಿಂದ ಅಮಾನತುಗೊಳಿಸಿ(Suspend) ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ದೇವರಾಜ್‌ ಅವರು ಆದೇಶಿಸಿದ್ದಾರೆ.

ವರ್ತೂರಿನ ಸಲ್ಮಾನ್‌ ಖಾನ್‌ ಅವರ ಬಲಗೈಯನ್ನು ಆಪರೇಷನ್‌ ಮಾಡಿ ತೆಗೆಯಲಾಗಿದೆ. ಈ ಘಟನೆ ಸಂಬಂಧ ಎಸಿಸಿ ನೇತೃತ್ವದಲ್ಲಿ ತನಿಖೆಗೆ(Investigation) ಆದೇಶಿಸಲಾಗಿತ್ತು. ಎಸಿಪಿ ನೀಡಿದ ವರದಿ ಮೇರೆಗೆ ವರ್ತೂರು ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ ನಾಗಭೂಷಣ್‌, ಕಾನ್‌ಸ್ಟೇಬಲ್‌ಗಳಾದ ಬಿ.ಎನ್‌.ನಾಗರಾಜ್‌ ಮತ್ತು ಎಚ್‌.ಶಿವರಾಜ್‌ ಅವರನ್ನು ಅಮಾನತುಗೊಳಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ