
ಪೀಣ್ಯ ದಾಸರಹಳ್ಳಿ (ಫೆ.10): ಮಹಿಳೆಯೊಬ್ಬರು ಶೌಚಾಲಯದಿಂದ ಹೊರಗೆ ಬಂದು ಕುಸಿದು ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹುಸ್ಕೂರಿನಲ್ಲಿ ನಡೆದಿದೆ.
ಹುಸ್ಕೂರು ಗ್ರಾಮದ ಜ್ಯೋತಿ (45) ಮೃತಪಟ್ಟ ಮಹಿಳೆ. ಆದರೆ ಮಹಿಳೆ ಧರಿಸಿದ್ದ 70 ಗ್ರಾಂ ಚಿನ್ನದ ಸರ ನಾಪತ್ತೆಯಾಗಿದೆ.
ಜ್ಯೋತಿ ಅವರು ಸೋಮವಾರ ಬೆಳಗಿನ ಜಾವ 5.30ರಲ್ಲಿ ಮನೆ ಕಾಂಪೌಂಡ್ ಒಳಗಿರುವ ಶೌಚಾಲಯಕ್ಕೆ ಹೋಗಿ ಹೊರ ಬಂದಿದ್ದು ಅವರ ಮೂಗು ಹಾಗೂ ಕಿವಿಯಲ್ಲಿ ರಕ್ತ ಬಂದು ಬಿದ್ದು ಮೃತಪಟ್ಟಿದ್ದಾರೆ. ಸ್ಥಳೀಯರ ಪ್ರಕಾರ ಯಾರೋ ಬಂದು ಅವರ ಮುಖಕ್ಕೆ ಸ್ಪ್ರೇ ಮಾಡಿ ಹಲ್ಲೆ ನಡೆಸಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ.
ಡಿಸಿಪಿ ನಾಗೇಶ್ ಅವರು ಖುದ್ದು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದು, ಮಹಿಳೆ ಶೌಚಾಲಯದಿಂದ ಹೊರ ಬಂದು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಹಾಗೆ ಕತ್ತಿನಲ್ಲಿ ಮಾಂಗಲ್ಯ ಸರ ಮತ್ತು ಕಿವಿಯಲ್ಲಿ ಓಲೆ ಇರುವುದಿಲ್ಲ. ಆಕೆಗೆ ಸ್ಪ್ರೇ ಮಾಡಿರುವ ಬಗ್ಗೆ ಸುಳಿವಿಲ್ಲ, ಏನಾಗಿದೆ ಎಂದು ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಒಟ್ಟಾರೆ ಮಹಿಳೆ ಸಾವು ಅನುಮಾನಾಸ್ಪದವಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ. ಸರದ ಬಗ್ಗೆಯೂ ಮಾಹಿತಿ ಸಿಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ