ಮುಂದಿನ ಚುನಾವಣೆಗೂ ಪರೇಶ ಮೇಸ್ತ ಹೆಸರು ಮುನ್ನೆಲೆಗೆ?

By Kannadaprabha NewsFirst Published Oct 6, 2022, 1:00 PM IST
Highlights
  • ಮುಂದಿನ ಚುನಾವಣೆಗೂ ಪರೇಶ ಮೇಸ್ತ ಹೆಸರು ಮುನ್ನೆಲೆಗೆ?
  • ಪರೇಶ ಮೇಸ್ತ ಸಾವು ಪ್ರಕರಣ ಸಿಬಿಐ ‘ಬಿ’ ವರದಿಯ ಬಗ್ಗೆ ಕೆಸರೆರಚಾಟ
  • ಸಿಬಿಐ ಮೇಲೆ ಕಾಂಗ್ರೆಸ್‌ಗೆ ಹಠಾತ್‌ ಒಲವು, ಬಿಜೆಪಿ ಅಸಮಾಧಾನ

ವಸಂತಕುಮಾರ ಕತಗಾಲ

 ಕಾರವಾರ (ಅ.6) : ಪರೇಶ ಮೇಸ್ತ ಸಾವು ಆಕಸ್ಮಿಕ ಎಂದು ಸಿಬಿಐ ‘ಬಿ’ ರಿಪೋರ್ಚ್‌ ಸಲ್ಲಿಸುತ್ತಿದ್ದಂತೆ ಮತ್ತೆ ರಾಜಕೀಯ ಪಕ್ಷಗಳ ನಡುವೆ ಕೆಸರು ಎರಚಾಟ ಜೋರಾಗಿದೆ. ಆದರೆ ರಾಜಕೀಯ ಫಲಾನುಭವಿಗಳ ಪಾತ್ರ ಅದಲು ಬದಲಾಗಿದೆ. ಸದ್ಯದ ಮಟ್ಟಿಗೆ ನೋಡಿದರೆ ಜಿಲ್ಲೆಯ ಕರಾವಳಿಯಲ್ಲಿ ಈ ಚುನಾವಣೆಯಲ್ಲೂ ಪರೇಶ ಮೇಸ್ತ ಪ್ರಕರಣ ಮುನ್ನೆಲೆಗೆ ಬರುವ ನಿರೀಕ್ಷೆ ಇದೆ.

ಕಳೆದ ಚುನಾವಣೆಯಲ್ಲಿ ಪರೇಶ ಮೇಸ್ತ ಸಾವನ್ನೇ ಹತ್ಯೆ ಎಂದು ಬಿಂಬಿಸಿ ಅದನ್ನೇ ಬಂಡವಾಳವನ್ನಾಗಿಸಿಕೊಂಡು ಬಿಜೆಪಿ ಚುನಾವಣೆ ಗೆದ್ದಿದೆ. ಈಗ ಬಿಜೆಪಿ ಜನತೆಯ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್‌ನವರು ಹರಿಹಾಯುತ್ತಿದ್ದಾರೆ.

ಕಾರವಾರ: ಪರೇಶ್ ಮೇಸ್ತಾ ಪ್ರಕರಣದಲ್ಲಿ ರಾಜಕೀಯ ಮಾಡ್ತಿದ್ದ ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ

ಕಳೆದ ಚುನಾವಣೆಯಲ್ಲಿ ಪರೇಶ ಮೇಸ್ತ ಸಾವು ಬಿಜೆಪಿಗೆ ಮತಗಳನ್ನು ತಂದಿದ್ದಂತೂ ಹೌದು. ಆದರೆ ಈಗ ಸಿಬಿಐ ಬಿ ರಿಪೋರ್ಚ್‌ ಸಲ್ಲಿಸಿದ ಮೇಲೆ ಕಾಂಗ್ರೆಸ್‌ ಏಕಾಏಕಿ ಮುಗಿಬಿದ್ದಿರುವುದನ್ನು ನೋಡಿದರೆ ಈ ಚುನಾವಣೆಯಲ್ಲಿ ಇದನ್ನೇ ಅಸ್ತ್ರವನ್ನಾಗಿಸಿಕೊಂಡು ಮತಬುಟ್ಟಿಗೆ ಕೈಹಾಕಲು ಕಾಂಗ್ರೆಸ್‌ ಲೆಕ್ಕಾಚಾರ ಹಾಕಿದಂತಿದೆ. ಆಗ ಬಿಜೆಪಿ, ಈಗ ಕಾಂಗ್ರೆಸ್‌. ಸಾವು ಒಂದು ಪಕ್ಷಕ್ಕೆ, ತನಿಖಾ ವರದಿ ಇನ್ನೊಂದು ಪಕ್ಷಕ್ಕೆ ಎಂಬ ಮಾತುಗಳು ಕೇಳಿಬರುತ್ತಿವೆ.

ತನಿಖಾ ಸಂಸ್ಥೆಗಳನ್ನು ಬಿಜೆಪಿ ಕೈಗೊಂಬೆನ್ನಾಗಿಸಿಕೊಂಡು ಆಟವಾಡುತ್ತಿದೆ ಎಂಬ ಆರೋಪ ಕಾಂಗ್ರೆಸ್‌ನಿಂದ ನಿರಂತರವಾಗಿ ಕೇಳಿಬರುತ್ತಿತ್ತು. ಎನ್‌ಐಎ, ಸಿಬಿಐ, ಇಡಿ ಹೀಗೆ ಎಲ್ಲ ತನಿಖಾ ಸಂಸ್ಥೆಗಳ ಬಗ್ಗೆಯೂ ಅಪಸ್ವರ ಜೋರಾಗಿತ್ತು. ಆದರೆ ಈಗ ಪರೇಶ ಮೇಸ್ತ ಸಾವಿನ ತನಿಖೆ ಹೊಣೆ ಹೊತ್ತಿದ್ದ ಸಿಬಿಐ ಪರೇಶ ಮೇಸ್ತಾ ಸಾವು ಆಕಸ್ಮಿಕ ಎಂದು ಬಿ ರಿಪೋರ್ಚ್‌ ಸಲ್ಲಿಸುತ್ತಿದ್ದಂತೆ ಸಿಬಿಐ ಮೇಲೆ ಕಾಂಗ್ರೆಸ್‌ಗೆ ಹಠಾತ್ತಾಗಿ ಒಲವು ಮೂಡಿದೆ.

ಆದರೆ ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲಿ ತಮ್ಮ ಹಸ್ತಕ್ಷೇಪ ಇಲ್ಲ ಎಂದು ಹೇಳಿಕೆ ನೀಡುತ್ತಿದ್ದ ಬಿಜೆಪಿಯ ಮುಖಂಡರು ಈಗ ಪರೇಶ ಮೇಸ್ತ ಕುರಿತಾದ ಸಿಬಿಐ ತನಿಖೆಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್‌ಗೆ ಕಡಿವಾಣ ಹಾಕಲು ಬಿಜೆಪಿಯವರು ಪ್ರತಿದಾಳಿ ನಡೆಸಿದ್ದು, ಪರೇಶ ಸಾವಿನ ಸಂದರ್ಭದಲ್ಲಿ ಕಾಂಗ್ರೆಸ್‌ ಅಡಳಿತದಲ್ಲಿತ್ತು. ಆಗ ಸಾಕ್ಷ್ಯವನ್ನು ಸಂಪೂರ್ಣವಾಗಿ ನಾಶ ಪಡಿಸಲಾಗಿತ್ತು ಎಂದು ಬಿಜೆಪಿ ತಿರುರೇಟು ನೀಡಿದೆ.

ಕಾಂಗ್ರೆಸ್‌ನಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರ್‌.ವಿ. ದೇಶಪಾಂಡೆ ಮತ್ತಿತರರು ಬಿಜೆಪಿ ಮೇಲೆ ಮುಗಿಬಿದ್ದರೆ ಬಿಜೆಪಿಯ ಕೆ.ಎಸ್‌. ಈಶ್ವರಪ್ಪ, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಕಾಂಗ್ರೆಸ್‌ ವಿರುದ್ಧ ಪ್ರತಿದಾಳಿ ನಡೆಸಿದ್ದಾರೆ. ಈಗ ಎನ್‌ಐಎ ತನಿಖೆಗೆ ನೀಡಬೇಕೆಂಬ ಆಗ್ರಹವೂ ಕೇಳಿಬಂದಿದೆ. ಈ ನಡುವೆ ಪರೇಶ ಮೇಸ್ತ ತಂದೆ ಕಮಲಾಕರ ಮೇಸ್ತ ಸಿಬಿಐ ತನಿಖೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉತ್ತರ ಕನ್ನಡದ ಜನತೆ ಮಾತ್ರ ಮೌನವಾಗಿ ರಾಜಕೀಯ ಮುಖಂಡರ ಕದನವನ್ನು ವೀಕ್ಷಿಸುತ್ತಿದ್ದಾರೆ.

ಸಿಬಿಐ ವರದಿ ಸರಿಯಿಲ್ಲ ಎನ್ನುವ ಬಿಜೆಪಿಗರು: ಸತೀಶ್ ಸೈಲ್‌

ಹೊನ್ನಾವರದ ಪರೇಶ ಮೇಸ್ತ ಸಾವಿನ ಪ್ರಕರಣವನ್ನು ಅಂದಿನ ಸಿದ್ದರಾಮಯ್ಯ ಸರ್ಕಾರ ಸಿಒಡಿಗೆ (ಸಿಐಡಿ) ನೀಡಿದರೆ ಬಿಜೆಪಿಗರು ಒಪ್ಪಿಕೊಳ್ಳದೇ ಸಿಬಿಐಗೆ ಹಸ್ತಾಂತರಿಸುವಂತೆ ಆಗ್ರಹಿಸಿದ್ದರು. ಸಿಬಿಐ ವರದಿ ಬಂದಿದ್ದು, ಈಗ ಸಿಬಿಐ ವರದಿ ಸರಿಯಿಲ್ಲ ಎನ್ನುತ್ತಿರುವುದು ಆಶ್ವರ್ಯಕ್ಕೆ ಕಾರಣವಾಗಿದೆ ಎಂದು ಮಾಜಿ ಶಾಸಕ ಸತೀಶ ಸೈಲ್‌ ಹೇಳಿದರು.

ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡ ಸಿ.ಟಿ. ರವಿ, ಕೆ.ಎಸ್‌. ಈಶ್ವರಪ್ಪ, ಶೋಭಾ ಕರಂದ್ಲಾಜೆ ಒಳಗೊಂಡು ಹಲವು ನಾಯಕರು ಸಿಬಿಐ ‘ಬಿ’ ರಿಪೋರ್ಚ್‌ ಸಲ್ಲಿಸಿದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಬಿಜೆಪಿಗರಿಗೆ ವರದಿ ಬಗ್ಗೆ ನಂಬಿಕೆ ಇಲ್ಲವೆಂದರೆ ಸರ್ಕಾರ ಮರುಪರಿಶೀಲನೆಗೆ ಹಾಕಬೇಕು. ಈ ರೀತಿ ಹಾಕದೇ ಇದ್ದರೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ವಿರುದ್ಧ ಅಂದು ಮಾಡಿದ್ದ ಆರೋಪ ತಪ್ಪು ಎಂದು ಬಹಿರಂಗ ಹೇಳಿಕೆ ನೀಡಬೇಕು. ಸದನದಲ್ಲಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಬಿಜೆಪಿಗರು ಬೇಷರತ್‌ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇಸ್ತ ಪ್ರಕರಣವನ್ನು ಮುಂದಿಟ್ಟುಕೊಂಡೇ ಹಿಂದಿನ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನು ಬಿಜೆಪಿ ಗೆದ್ದಿತ್ತು. ಈ ವೇಳೆ ಜನರಲ್ಲಿ ಹಲವಾರು ಗೊಂದಲ ಸೃಷ್ಟಿಸಿ ಮತ ಸೆಳೆದುಕೊಂಡಿದ್ದರು. ಆದರೆ ಈಗ ಪರೇಶ ಸಾವು ಸಹಜ ಎಂದು ಸಿಬಿಐ ವರದಿ ನೀಡಿದೆ. ಆದರೆ ಬಿಜೆಪಿಗರು ವರದಿ ಬಳಿಕ ಯಾವುದೇ ಹೇಳಿಕೆ ನೀಡಿಲ್ಲ. ಪ್ರಕರಣವು ಚುನಾವಣೆಗೆ ಸೀಮಿತವಾಯಿತೇ ಎಂದು ಪ್ರಶ್ನಿಸಿದರು.

ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್‌ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಮುಖಂಡರು ಒಪ್ಪಿಗೆ ನೀಡಿದರೆ ಮೇಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲು ಬದ್ಧನಾಗಿದ್ದೇನೆ. ಗಲಭೆಯಲ್ಲಿ ಸಾವಿರಾರು ಜನರ ಮೇಲೆ ಪ್ರಕರಣ ದಾಖಲಾಗಿದೆ. ಇದಕ್ಕೆ ಯಾರು ಜವಾಬ್ದಾರರು? ಆಟೋ ರಿಕ್ಷಾ, ಅಂಗಡಿ ಮುಂಗಟ್ಟುಗಳಿಗೆ ಹಾನಿಯಾಗಿದೆ. ಅವುಗಳಿಗೆ ಸರ್ಕಾರವೇ ಪರಿಹಾರ ನೀಡಬೇಕು ಎಂದರು.

ಪರೇಶ್ ಮೇಸ್ತಾ ಕೇಸ್‌: ಸಿಬಿಐ 'ಬಿ' ರಿಪೋರ್ಟ್ ಹಾಕಿರೋದು ತಪ್ಪು, ಮುತಾಲಿಕ್ ಆಕ್ರೋಶ

ತಿಮ್ಮಪ್ಪ ನಾಯ್ಕ, ಗೀತಾ ಬಾನಾವಳಿ, ಡಾ.ಚಿತ್ತರಂಜನ್‌ ಘಟನೆಗಳ ಬಗ್ಗೆ ಪ್ರಶ್ನಿಸಿದಾಗ, ಯಾರು ಬೇಕಾದರೂ ರಿಟ್‌ ಅರ್ಜಿ ಸಲ್ಲಿಸಬಹುದು ಎಂದ ಅವರು, ಚುನಾವಣೆ ಬಗ್ಗೆ ಕೇಳದ್ದಕ್ಕೆ ಆ ಸಂದರ್ಭದಲ್ಲಿ ಯಾರೇ ಸ್ಪರ್ಧಿಸಿದರೂ ಅವರು ಎದುರಾಳಿಯೇ ಆಗಿದ್ದಾರೆ. ಒಂದು ಮತವೂ ಮಹತ್ವದ ತೀರ್ಪು ನೀಡುತ್ತದೆ. ಆದರೆ ನಾವು ಜೀವನ ಪರ್ಯಂತ ರಾಜಕೀಯ ಮಾಡುವುದಿಲ್ಲ. ಅದು ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗುತ್ತದೆ ಎಂದು ಹೇಳಿದರು.

ಹೆಣದ ಮೇಲೆ ಚುನಾವಣೆ ಗೆದ್ದವರು ರಾಜೀನಾಮೆ ನೀಡಲಿ: ಭೀಮಣ್ಣ

ಪರೇಶ ಮೇಸ್ತ ಹೆಣದ ಮೇಲೆ ರಾಜಕಾರಣ ಮಾಡಿ ಆರಿಸಿ ಬಂದ ಬಿಜೆಪಿ ಶಾಸಕರು ಈಗ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಆಗ್ರಹಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಜನರ ಭಾವನೆಯೊಂದಿಗೆ ಆಟ ಆಡುವುದನ್ನು ಬಿಜೆಪಿ ಮೊದಲು ಬಿಡಬೇಕು ಎಂದು ತಾಕೀತು ಮಾಡಿದರು.

ಅಂದು ಹೊನ್ನಾವರದ ಪರೇಶ ಮೇಸ್ತ ಸಾವಿನ ಹೆಸರು ಬಳಸಿ ಚುನಾವಣೆ ಗೆದ್ದ ಬಿಜೆಪಿ ಶಾಸಕರಿಗೆ ನೈತಿಕತೆ ಇಲ್ಲ. ಸಿಬಿಐ ವರದಿ ಬಂದ ಬಳಿಕ ಪ್ರತಿಕ್ರಿಯೆ ಕೊಟ್ಟು ರಾಜೀನಾಮೆ ನೀಡಬೇಕಿದೆ ಎಂದರು. ಅಧಿಕಾರಕ್ಕೆ ಒಬ್ಬ ಯುವಕನ ಸಾವನ್ನು ಬಳಸಿಕೊಂಡಿದ್ದು ಸರಿಯಲ್ಲ. ಅಂದು ಈ ಪ್ರಕರಣ ಬಳಸಿಕೊಂಡು ಆಯ್ಕೆ ಆದ ಜಿಲ್ಲೆಯ ಬಿಜೆಪಿ ಶಾಸಕರು ರಾಜೀನಾಮೆ ಕೊಟ್ಟು ಮರಳಿ ಜನಾದೇಶ ಪಡೆಯಬೇಕಿದೆ ಎಂದರು. ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಗುತ್ತಿಗೆದಾರರಿಗೆ ಹಣದ ಬಟವಾಡೆ ಇಲ್ಲ. ಶೇ.40ರ ಕಮಿಷನ್‌ ಸರ್ಕಾರ ಎಂದೇ ಹೆಸರು ಬಿದ್ದಿದೆ ಎಂದ ಅವರು, ಪರೇಶ ಮೇಸ್ತ ಸಾವಿನ ಪ್ರಕರಣದ ಸಿಬಿಐ ವರದಿ ಕೋರ್ಚ್‌ಗೆ ನೀಡಿದ ಬಳಿಕ ಜಿಲ್ಲೆಯಲ್ಲೂ ಗೊಂದಲ ಸೃಷ್ಟಿಯಾಗಿದೆ ಎಂದರು.

ರಾಜಕೀಯ ಸ್ವಾರ್ಥಕ್ಕೆ ಕೋಮು ಗಲಭೆ ಸಂದರ್ಭ ಸೃಷ್ಟಿಸಿದ್ದು ಅಕ್ಷಮ್ಯ ಅಪರಾಧವಾಗಿದೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಾಗ್ರಹದ ಮೇರೆಗೆ ಪ್ರಕರಣವನ್ನು ಸಿಬಿಐಗೆ ವಹಿಸಿದ್ದರು. ಈಗಿನ ಬಿಜೆಪಿ ಸರ್ಕಾರದ ಸಿಬಿಐ ವರದಿ ನೀಡಿದೆ. ಜಿಲ್ಲೆಯ ಭಯದ ವಾತಾವರಣ ಕಳೆಯಬೇಕಿದೆ. ಇದಕ್ಕಾಗಿ ಹೊನ್ನಾವರದಲ್ಲಿ ಅ.7ರಂದು 11 ಗಂಟೆಗೆ ರಾಜ್ಯ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು.

click me!