ಕುಡುಕರ ತಾಣವಾದ ರಾಮನಗರ ಬಸ್ ನಿಲ್ದಾಣ: ಚೈನ್ ಸ್ನ್ಯಾಚಿಂಗ್, ಮೊಬೈಲ್ ಕಳ್ಳತನ ಹೆಚ್ಚಳ

By Manjunath NayakFirst Published Sep 21, 2022, 7:53 PM IST
Highlights

Ramanagara Bus Stand Non-maintenance: ರಾಮನಗರ ಜಿಲ್ಲೆಯ ಬಸ್ ನಿಲ್ದಾಣ ನಿರ್ಮಾಣವಾಗಿ 10 ವರ್ಷಗಳೇ ಕಳೆದರೂ ನಿಲ್ದಾಣದಲ್ಲಿ ಸೌಲಭ್ಯಗಳು ಮಾತ್ರ ಇನ್ನೂ ಮರಿಚೀಕೆಯಾಗೇ ಉಳಿದಿದೆ 

ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ

ರಾಮನಗರ (ಸೆ. 21): ರಾಮನಗರ ಜಿಲ್ಲೆಯ ಬಸ್ ನಿಲ್ದಾಣ (Ramanagara Bus Stand) ನಿರ್ಮಾಣವಾಗಿ 10 ವರ್ಷಗಳೇ ಕಳೆದರೂ ನಿಲ್ದಾಣದಲ್ಲಿ ಸೌಲಭ್ಯಗಳು ಮಾತ್ರ ಇನ್ನೂ ಮರಿಚೀಕೆಯಾಗೇ ಉಳಿದಿದೆ. ಬಸ್ ನಿಲ್ದಾಣ ಈಗ ಕುಡುಕರ ತಾಣವಾಗಿದ್ದು, ನಿಲ್ದಾಣದಲ್ಲಿ ಸಿಸಿಟಿವಿ ಇಲ್ಲದೇ ಕಳ್ಳರ ಕಾಟ ಹೆಚ್ಚಾಗಿದ್ದು, ಪ್ರಯಾಣೀಕರಿಗೆ ರಕ್ಷಣೆ ಇಲ್ಲದಂತಾಗಿದೆ.  ಬಸ್ ನಿಲ್ದಾಣದ ಪ್ಲಾಟ್ ಫಾರಂಗಳಲ್ಲಿ ಕುಡುಕರು, ಭಿಕ್ಷುಕರ ಹಾವಳಿ ಹೆಚ್ಚಾಗಿದ್ದು, ಕುಡಿದು ಬಂದು ಪ್ಲಾಟ್ ಫಾರಂಗಳ ಆಸನದಲ್ಲಿ ಮಲಗುವ ಮೂಲಕ ಪ್ರತಿನಿತ್ಯ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಜೊತೆ ಅಸಭ್ಯವಾಗಿ ವರ್ತಿಸಿದ ಕುಡುಕನೋರ್ವನಿಗೆ ಮಹಿಳೆಯೊಬ್ಬಳು ಹಿಗ್ಗಾಮುಗ್ಗ ಥಳಿಸಿ ಪೊರಕೆ ಸೇವೆ ಮಾಡುವ ಮೂಲಕ ಚಳಿ ಬಿಡಿಸಿದ್ದಾಳೆ. 

ರಾಮನಗರ ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು, ಕಾಲೇಜು ವಿಧ್ಯಾರ್ಥಿಗಳು, ಬೆಂಗಳೂರಿಗೆ ಕೆಲಸಕ್ಕೆ ತೆರಳಲು ಹಾಗೂ ತಮ್ಮ ತಮ್ಮ ಊರುಗಳಿಗೆ ತೆರಳಲು ನಿಲ್ದಾಣಕ್ಕೆ ಬರುತ್ತಾರೆ. ಆದರೆ ಬರುವಂತಹ ಪ್ರಯಾಣೀಕರಿಗೆ ಬಸ್ ನಿಲ್ದಾಣದಲ್ಲಿ ಕುಡಿಯಲು ಎಲ್ಲೂ ಸಹ ನೀರು ಕೂಡ ಸಿಗೋದಿಲ್ಲ. 

ಇನ್ನು ನಿಲ್ದಾಣದಲ್ಲಿ ಸಿಟಿಟಿವಿ ಇಲ್ಲದ ಕಾರಣ, ಸಾಕಷ್ಟು ಮೊಬೈಲ್ ಕಳ್ಳತನ, ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇನ್ನೂ ಕಾಲೇಜು ವಿಧ್ಯಾರ್ಥಿನಿಯರು ಬಸ್ ಹತ್ತಲು ಬರುವ ವೇಳೆ ಪುಂಡ ಪೋಕರಿಗಳು ಚುಡಾಯಿಸುತ್ತಿದ್ದು,  ಸೂಕ್ತ ರಕ್ಷಣೆ ಇಲ್ಲದ ಕಾರಣ ಬಸ್ ನಿಲ್ದಾಣಕ್ಕೆ ಬರುವಂತಹ ಪ್ರಯಾಣಿಕರು ಭಯದಲ್ಲೇ ಬಸ್ ಹತ್ತುವ ಪರಿಸ್ಥಿತಿ ಉಂಟಾಗಿದೆ. ಒಟ್ಟಾರೆ ಜಿಲ್ಲೆಯ ಹೃದಯ ಭಾಗದಲ್ಲೇ ಇರುವ ಬಸ್ ನಿಲ್ದಾಣದಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ರೂ ಅಧಿಕಾರಿಗಳೂ ಮಾತ್ರ ಮೌನ ವಹಿಸಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕಾಗಿದೆ.

ರಾಮನಗರ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಅಗತ್ಯ: ಎಚ್‌.ಡಿ.ಕುಮಾರಸ್ವಾಮಿ

click me!