ವಿಜಯಪುರ: ಲಾರಿ ಅಡ್ಡಗಟ್ಟಿ ದರೋಡೆ, ಒಂಬತ್ತು ಖದೀಮರ ಬಂಧನ

Kannadaprabha News   | Asianet News
Published : May 27, 2020, 09:43 AM IST
ವಿಜಯಪುರ: ಲಾರಿ ಅಡ್ಡಗಟ್ಟಿ ದರೋಡೆ, ಒಂಬತ್ತು ಖದೀಮರ ಬಂಧನ

ಸಾರಾಂಶ

ಒಂಬತ್ತು ಹೆದ್ದಾರಿ ದರೋಡೆಕೋರರ ಬಂಧನ| ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ ಅಗರವಾಲ್‌ ಮಾಹಿತಿ| ವಿಜಯಪುರದಿಂದ-ದಾವಣಗೆರೆ ಕಡೆಗೆ ಹೊರಟಿದ್ದ ಲಾರಿಯನ್ನು ಮನಗೂಳಿ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ತಡೆದಿದ್ದ ಆರೋಪಿಗಳು|

ವಿಜಯಪುರ(ಮೇ.27): ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯನ್ನು ಅಡ್ಡಗಟ್ಟಿ, ಮಾರಕಾಸ್ತ್ರಗಳನ್ನು ತೋರಿಸಿ ಹಣ ದರೋಡೆ ಮಾಡುತ್ತಿದ್ದ ಓರ್ವ ಬಾಲಾರೋಪಿ ಸೇರಿದಂತೆ 9 ಜನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ ಅಗರವಾಲ್‌ ತಿಳಿಸಿದ್ದಾರೆ. 

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತ ಆರೋಪಿಗಳಾದ ಬಸವನ ಬಾಗೇವಾಡಿ ತಾಲೂಕಿನ ಸಂಗಮೇಶ ಮಡಿವಾಳಪ್ಪ ಅಗಸರ, ಬಸವರಾಜ ತಮ್ಮಣ್ಣ ಮಡಿವಾಳರ, ಬಸವರಾಜ ಅಪ್ಪಾಸಾಹೇಬ ಮೇಟಿ, ಶಿವಾನಂದ ಮುರುಗೇಶ ಕಂಟೆ, ರವಿ ಬಸಪ್ಪ ಬಿರಾದಾರ, ಭೀಮರಾಯ ಮಡಿವಾಳಪ್ಪ ಅಗಸರ, ಶೇಖರ ಬಸಪ್ಪ ಮಡಿವಾಳ, ಬಸವರಾಜ ಮಲ್ಲನಗೌಡ ಬಿರಾದಾರ ಅವರನ್ನು ಬಂಧಿಸಲಾಗಿದೆ. ಒಬ್ಬ ಬಾಲಾರೋಪಿಯನ್ನೂ ಬಂಧಿಸಲಾಗಿದೆ. ಬಂಧಿತರು ಬಸವನ ಬಾಗೇವಾಡಿ ಪಟ್ಟಣ ಹಾಗೂ ಟಕ್ಕಳಕಿ ಗ್ರಾಮದ ನಿವಾಸಿಗಳಾಗಿದ್ದಾರೆ.

ವಿಜಯಪುರ ಜಿಲ್ಲೆಗೆ ವಿವಿಧ ರಾಜ್ಯಗಳಿಂದ 4159 ವಲಸೆ ಕಾರ್ಮಿಕರ ಆಗಮನ

ದರೋಡೆಗೆ ಬಳಸಲಾಗಿರುವ ಆಟೋರಿಕ್ಷಾ, ಮೋಟಾರ್‌ ಸೈಕಲ್‌, ಮೊಬೈಲ್‌, .89 ಸಾವಿರ ನಗದು ಹಣವನ್ನು ಜಪ್ತು ಮಾಡಲಾಗಿದೆ. ಬಂಧಿತವಾಗಿರುವ ಆರೋಪಿಗಳು ಕಳೆದ ಮೇ 22 ರಂದು ವಿಜಯಪುರದಿಂದ-ದಾವಣಗೆರೆ ಕಡೆಗೆ ಹೊರಟಿದ್ದ ಲಾರಿಯನ್ನು ಮನಗೂಳಿ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ತಡೆದಿದ್ದಾರೆ, ವಿಳಾಸ ಕೇಳುವ ನೆಪದಲ್ಲಿ ಲಾರಿಯನ್ನು ನಿಲ್ಲಿಸಿ, ತಕ್ಷಣವೇ ಲಾರಿ ಚಾಲಕ ಹಾಗೂ ಕ್ಲೀನರ್‌ ಅನ್ನು ಚಾಕು ಮೊದಲಾದ ಮಾರಕಾಸ್ತ್ರಗಳಿಂದ ಹೆದರಿಸಿ, ಹಣ ಕೊಡಿ ಎಂದು ಬೆದರಿಕೆ ಹಾಕಿ, ನಗದು ಹಣವನ್ನು ದೋಚಿ ಪರಾರಿಯಾಗಿದ್ದರು ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ- 50ರಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಈ ಸಂದರ್ಭದಲ್ಲಿ ಈ ರೀತಿಯ ದರೋಡೆ ಪ್ರಕರಣ ನಡೆದಿರುವುದು ಸಾರ್ವಜನಿಕರಲ್ಲಿ ಹಾಗೂ ಚಾಲಕರಲ್ಲಿ ಆತಂಕ ಇತ್ತು. ಈ ಕಾರಣಕ್ಕಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೇವಲ ಮೂರು ದಿನಗಳಲ್ಲಿ ಅದು ಸಂಪ್ರದಾಯಿಕ ತನಿಖಾ ವಿಧಾನದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದಾರೆ.

ಆರೋಪಿಗಳು ಸೋಮವಾರ ಮಧ್ಯಾಹ್ನ ಮನಗೂಳಿ ಬಳಿ ಇರುವ ಡಾಬಾವೊಂದರಲ್ಲಿ ಸಂಶಯಾಸ್ಪದವಾಗಿ ನಿಂತಿದ್ದರು. ಆಗ ಅವರನ್ನು ವಿಚಾರಿಸಲಾಗಿ ಕೇವಲ ಊಟ ಮಾಡಲು ಬಂದಿದ್ದೇವೆ ಎಂದು ಅಸಂಬದ್ಧವಾಗಿ ಉತ್ತರಿಸಿದ್ದರು. ಆಗ ಅವರ ಚಲನವಲನಗಳ ಬಗ್ಗೆ ಸಂಶಯ ಬಂದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ವಿಚಾರಣೆಗೆಳಪಡಿಸಿದಾಗ ಹೆದ್ದಾರಿಯಲ್ಲಿ ವಾಹನಗಳ ತಡೆದು ದರೋಡೆ ನಡೆಸುವುದನ್ನು ಬಾಯಿ ಬಿಟ್ಟಿದ್ದಾರೆ ಎಂದು ಹೇಳಿದರು.

ಐಷಾರಾಮಿ ಜೀವನ ಶೈಲಿಗಾಗಿ ಈ ರೀತಿಯ ಕೃತ್ಯಕ್ಕೆ ಕೈ ಹಾಕಲಾಗಿತ್ತು ಎಂದು ಯುವಕರು ವಿಚಾರಣೆ ವೇಳೆ ಹೇಳಿದ್ದಾರೆ. ಬಂಧಿತ ಆರೋಪಿಗಳ ಮೇಲೆ ಯಾವುದೇ ಅಪರಾಧಿಕ ಹಿನ್ನೆಲೆ ಇಲ್ಲ ಎಂದು ಹೇಳಿದರು.

ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಡಿವೈಎಸ್‌ಪಿ ಶಾಂತವೀರ, ಪೊಲೀಸ್‌ ಅಧಿಕಾರಿಗಳಾದ ಸೋಮಶೇಖರ ಜುಟ್ಟಲ್‌, ಎನ್‌.ಬಿ. ಶಿವೂರ, ಸಿ.ಬಿ. ಚಿಕ್ಕೋಡಿ, ಬಿ.ಎಂ. ಬಸವನಗೌಡರ ಅವರನ್ನೊಳಗೊಂಡ ತಂಡದ ಕಾರ್ಯವೂ ಶ್ಲಾಘನೀಯ ಎಂದು ಎಸ್ಪಿ ಅನುಪಮ ಅಗರವಾಲ್‌ ತಿಳಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!