Muruga Mata Case: ಮುರುಘಾ ಶ್ರೀ ವಿರುದ್ಧ ದಲಿತ ದೌರ್ಜನ್ಯ ಪ್ರಕರಣವೂ ದಾಖಲು

By Sharath SharmaFirst Published Sep 1, 2022, 11:24 AM IST
Highlights

Muruga Mata POCSO Case Updates: ಮುರುಘಾ ಮಠದ ಶಿವಮೂರ್ತಿ ಶ್ರೀಗಳ ವಿರುದ್ಧ ಪೋಕ್ಸೊ ಪ್ರಕರಣದ ಜತೆಗೆ ದಲಿತ ದೌರ್ಜನ್ಯ (Attrocity) ಆರೋಪವನ್ನೂ ದಾಖಲಿಸಲಾಗಿದೆ. ಅಪ್ರಾಪ್ತ ಯುವಕಿಯರ ಪೈಕಿ ಒಬ್ಬ ವಿದ್ಯಾರ್ಥಿನಿ ದಲಿತ ಸಮುದಾಯಕ್ಕೆ ಸೇರಿರುವ ಹಿನ್ನೆಲೆ ದಲಿತ ದೌರ್ಜನ್ಯ ಪ್ರಕರಣವನ್ನೂ ದಾಖಲಿಸಲಾಗಿದೆ.

ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶ್ರೀಗಳ ವಿರುದ್ಧ ಪೋಕ್ಸೊ (Protection of Children from Sexual Offences Act)  ಕಾಯ್ದೆಯ ಜತೆಗೆ ದಲಿತ ದೌರ್ಜನ್ಯ ಪ್ರಕರಣವನ್ನೂ ದಾಖಲಿಸಲಾಗಿದೆ. ಇಬ್ಬರು ವಿದ್ಯಾರ್ಥಿನಿಗಳಲ್ಲಿ ಒಬ್ಬರು ದಲಿತ ಸಮುದಾಯಕ್ಕೆ ಸೇರಿರುವ ಹಿನ್ನೆಲೆ ಪೋಕ್ಸೊ ಜತೆಗೆ ಅಟ್ರಾಸಿಟಿ ಪ್ರಕರಣವನ್ನೂ ದಾಖಲಿಸಲಾಗಿದೆ. ಈ ಸಂಬಂಧ ಯುವತಿಯ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪರಿಶಿಷ್ಟ ಜಾತಿಯ ಸಮುದಾಯದ ಹುಡುಗಿಯಾಗಿರುವ ಹಿನ್ನೆಲೆ ದಲಿತ ದೌರ್ಜನ್ಯ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ. 

ಸಚಿವ ಸೋಮಣ್ಣ ಪ್ರತಿಕ್ರಿಯೆ:

ಸಚಿವ ವಿ ಸೋಮಣ್ಣ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸತ್ಯಾಸತ್ಯತೆಯ ಅನ್ವೇಷಣೆಗಾಗಿ ಸರ್ಕಾರ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ ಎಂದು ಹೇಳಿದ್ದಾರೆ. "ಈ ರೀತಿಯ ಘಟನೆ ಆಗಬಾರದಿತ್ತು. ಯಾರು ಸರಿ ಯಾರು ತಪ್ಪು ಎಂದು ನಾನು ಹೇಳಲು ಸಾಧ್ಯವಿಲ್ಲ. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಬಂಧನದ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿಲ್ಲ," ಎಂದು ಸಚಿವ ಸೋಮಣ್ಣ ಹೇಳಿದ್ದಾರೆ.

ಘಟನೆ ಏನು?:

ಪ್ರಕರಣವನ್ನು ದಾಖಲಿಸಿದ ಒಡನಾಡಿ ಸಂಸ್ಥೆಯ ಕೌನ್ಸಿಲರ್‌ ಸರಸ್ವತಿ ದೂರು ದಾಖಲಾದ ಸಂದರ್ಭದಲ್ಲಿ ಸುವರ್ಣ ನ್ಯೂಸ್‌ ಜೊತೆಗೆ ಮಾತನಾಡಿ "ಜುಲೈ 24ರಂದು ಮಕ್ಕಳು ದೌರ್ಜನ್ಯದಿಂದ ಬೇಸತ್ತು ಬೆಂಗಳೂರಿಗೆ ಬಂದಿದ್ದಾರೆ. ಹಾಸ್ಟೆಲ್ ನಿಂದ ಅವರನ್ನು ಹೊರ ಹಾಕಲಾಗಿತ್ತಂತೆ. ಅಲ್ಲಿ‌ ಬಹಳಷ್ಟು ಸಮಯ ಒಂದೇ ಕಡೆ ನಿಂತಿದ್ದರಿಂದ ಆಟೋ ಚಾಲಕರೊಬ್ಬರು ಅವರನ್ನು ವಿಚಾರಿಸಿ, ಸಮೀಪದ ಕಾಟನ್ ಪೇಟೆ ಪೊಲೀಸ್ ಸ್ಟೇಷನ್ ಗೆ ಕರೆದೊಯ್ದಿದ್ದಾರೆ. ಠಾಣೆಯಲ್ಲಿ‌ ಮಕ್ಕಳು ಯಾರನ್ನು ಭೇಟಿ ಮಾಡಿದ್ರು ಅನ್ನೋ ಮಾಹಿತಿ ನಮಗಿಲ್ಲ. ಮಕ್ಕಳು ಭಯದ ಕಾರಣಕ್ಲೆ ತಮ್ಮ ಮೇಲೆ ಆಗಿರೋ‌ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಲ್ಲ. ಸ್ವಾಮೀಜಿಯವರು ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಾರೆ. ಕೆಟ್ಟದಾಗಿ ನಿಂದಿಸುತ್ತಾರೆ ಎಂದಷ್ಟೇ ಹೇಳಿದ್ದಾರೆ. ಪೊಲೀಸರಿಂದ ನ್ಯಾಯ ಸಿಗುತ್ತೆ ಎಂಬ ಖಾತ್ರಿ ಇದ್ದಿದ್ದರೆ ಆ ಮಕ್ಕಳು ನಮ್ಮ ತನಕ ಬರುತ್ತಿರಲಿಲ್ಲ.ಹೀಗಾಗಿ ಆ ಮಕ್ಕಳು ಬೇರೊಬ್ಬರ ಸಹಾಯ ಪಡೆದು ನಮ್ಮ ಬಳಿ ಬಂದಿದ್ದಾರೆ. ಮಕ್ಕಳು ಮಾನಸಿಕ ಸ್ಥಿತಿ ಧೃಡವಾಗಿಯೇನೂ ಇಲ್ಲ.ತುಂಬಾ ಹೆದರಿಕೆಯಿಂದಲೇ ನಮ್ಮ ಬಳಿ ಆಗಿರೋ ಅನ್ಯಾಯದ ಬಗ್ಗೆ ಹೇಳಿಕೊಂಡಿದ್ದಾರೆ. ಮಕ್ಕಳ ಹೇಳಿಕೆಯಲ್ಲಿ ಸತ್ಯ ಇರಬಹುದು, ಇಲ್ಲದೆಯೂ ಇರಬಹುದು. ಪ್ರಕರಣದ ಸೂಕ್ತ ತನಿಖೆ ಆಗಲಿ," ಎಂದು ಹೇಳಿದ್ದರು.

ಇದನ್ನೂ ಓದಿ: ವದಂತಿಗಳನ್ನು ನಂಬಬೇಡಿ, ಸಂಕಟದಿಂದ ಪಾರಾಗಿ ಬರುತ್ತೇನೆ: ಮುರುಘಾ ಶ್ರೀ

ಮಠದ ಪ್ರತಿಕ್ರಿಯೆ ಏನು?:

ಚಿತ್ರದುರ್ಗ ಮುರುಘಾಮಠ ಪರ ವಕೀಲ ವಿಶ್ವನಾಥಯ್ಯ ಪ್ರತಿಕ್ರಿಯೆ ನೀಡಿದ್ದು, ಮಠದ ವಿರೋಧಿ ಶಕ್ತಿಗಳಿಂದ ಮುರುಘಾಶ್ರೀ ವಿರುದ್ಧ ದೂರು ನೀಡಿದ್ದಾರೆ ಎಂದಿದ್ದರು. "ಮಾಧ್ಯಮದ ಮೂಲಕ ದೂರು ದಾಖಲಾಗಿದ್ದು ತಿಳಿದಿದೆ. ಸದ್ಯ ಮುರುಘಾಶ್ರೀಗಳು ಮಾಧ್ಯಮಕ್ಕೆ ಪ್ರತಿಕ್ರಿಯಿಸುವ ಸ್ಥಿತಿಯಲ್ಲಿ ಇಲ್ಲ. ಮುರುಘಾ ಶ್ರೀ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ. ಬಾಲಕಿಯರ ತಲೆಕೆಡಿಸಿ ಮುರುಘಾಶ್ರೀ ವಿರುದ್ಧ ದೂರು. ಬಾಲಕಿಯರ ದುರುಪಯೋಗ ಪಡಿಸಿಕೊಂಡು ದೂರು ನೀಡಲಾಗಿದೆ. ಈ ಬಗ್ಗೆ ಮುರುಘಾಶ್ರೀಗಳು ನಮ್ಮ ಬಳಿ ಹೇಳಿದ್ದಾರೆ. ಪ್ರಕರಣದ ಬಗ್ಗೆ ಕಾನೂನು ಹೋರಾಟ ಮಾಡಲಾಗುವುದು. ಸುಳ್ಳು ದೂರು ನೀಡಿದವರು ಕೇಸ್ ವಾಪಸ್ ಪಡೆಯಲಿ. ಮಠದ ಹಾಸ್ಟೆಲ್ ವಾರ್ಡನ್ ರಿಂದ ಮಾಜಿ ಶಾಸಕ ಎಸ್ ಕೆ ಬಸವರಾಜನ್ ವಿರುದ್ಧ ಕೇಸ್ ವಿಚಾರ ತಿಳಿದಿದೆ. ಈ ಬಗ್ಗೆ ಮಹಾತಿ ಇದೆ, ಪೂರ್ಣ ವಿವರ ತಿಳಿದಿಲ್ಲ," ಎಂದು ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: ಮುರುಘಾ ಮಠ ಶ್ರೀಗಳಿಂದ ಲೈಂಗಿಕ ದೌರ್ಜನ್ಯ; ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು

ಶರಣರ ಮೇಲಿನ ಆರೋಪವೇನು?:
ಮುರುಗಾ ಶರಣರಿಗೆ ಪ್ರತಿ ವಾರ ಒಂದು ಹೆಣ್ಣು ಮಗು ಹಣ್ಣು ಹಂಪಲು ನೀಡಲು ಅವರ ಕೋಣೆಗೆ ಕಳಿಸಲಾಗುತ್ತಿತ್ತು. ಅಲ್ಲಿ ಶರಣರು ಇಷ್ಟವಿಲ್ಲ ಎಂದು ಹೇಳಿದರೂ ಹುಡುಗಿಯರ ಖಾಸಗಿ ಭಾಗಗಳನ್ನು ಮುಟ್ಟುತ್ತಿದ್ದರು. ಅದಾದ ನಂತರ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ಮಾಡುತ್ತಿದ್ದರು. ಅದಾದ ನಂತರ ಸ್ವಚ್ಚಗೊಳಿಸಲು ಟಿಶ್ಯೂ ಬಳಸುತ್ತಿದ್ದರು. ವಿದ್ಯಾರ್ಥಿನಿಯರಿಗೆ ಸ್ನಾನದ ಕೋಣೆಗೆ ಹೋಗಿ ಸ್ನಾನ ಮಾಡಿ ಹೋಗುವಂತೆ ಹೇಳುತ್ತಿದ್ದರು ಎಂದು ಆರೋಪಿಸಲಾಗಿದೆ. ಪ್ರತಿನಿತ್ಯ ಒಂದು ಹುಡುಗಿಯನ್ನು ಆಪ್ತ ಸಹಾಯಕರು ಕರೆದುಕೊಂಡು ಹೋಗಿ ಶರಣರ ಜೊತೆ ಕೋಣೆಯಲ್ಲಿ ಕೂಡಿಹಾಕುತ್ತಿದ್ದರು. ಹಲವಾರು ಬಾರಿ ಈ ರೀತಿ ನಡೆದ ನಂತರ ಅದರ ವಿಡಿಯೋಗಳನ್ನು ಕೂಡ ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ ಶರಣರು ಅವರ ವಿರುದ್ಧದ ಯಾವುದೇ ವರದಿಯನ್ನು ಬಿತ್ತರಿಸದಂತೆ ಕೋರ್ಟ್‌ನಿಂದ ಆದೇಶ ಪಡೆದಿದ್ದಾರೆ. 

click me!