3 ವರ್ಷದ ಮಗುವನ್ನು ನೀರಿನ ಟಬ್‌ನಲ್ಲಿ ಮುಳುಗಿಸಿ ಕೊಂದ ತಾಯಿ ನೇಣಿಗೆ ಯತ್ನ

By Kannadaprabha NewsFirst Published Aug 23, 2022, 6:21 AM IST
Highlights

ಕಳೆದ ತಿಂಗಳು ತಾಯಿಯೊಬ್ಬಳು ಮಗಳು ಬುದ್ಧಿಮಾಂದ್ಯ ಎಂಬ ಕಾರಣಕ್ಕೆ ನಾಲ್ಕನೆ ಮಹಡಿಯಿಂದ ಕೆಳಗೆ ಎಸೆದ ಕೃತ್ಯ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಬ್ಬ ತಾಯಿ ತನ್ನ ಮೂರು ವರ್ಷದ ಮಗುವನ್ನೇ ಟಬ್‌ನಲ್ಲಿ ಮುಳುಗಿಸಿ ಕೊಂದು, ತಾನೂ ನೇಣಿಗೆ ಶರಣಾಗುವ ಯತ್ನ ನಡೆಸಿದ ಘಟನೆ ವರದಿಯಾಗಿದೆ.

ಬೆಂಗಳೂರು (ಆ.23) : ಅನಾರೋಗ್ಯ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆ ತನ್ನ ಮೂರು ವರ್ಷದ ಮಗುವನ್ನು ನೀರಿನ ಟಬ್‌ನಲ್ಲಿ ಮುಳಗಿಸಿ ಸಾಯಿಸಿ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಮಾನವೀಯ ಘಟನೆ ಎಚ್‌ಎಎಲ್‌ ಪೊಲೀಸ್‌ ಠಾಣೆ(HAL Police Station) ವ್ಯಾಪ್ತಿಯಲ್ಲಿ ನಡೆದಿದೆ. ದೊಡ್ಡಾನೆಕುಂದಿ ಗುರುರಾಜ ಲೇಔಟ್‌ನ ಸಂಯುಕ್ತ(3) ತಾಯಿಯಿಂದಲೇ ಕೊಲೆಯಾದ ಮಗು. ಗಾಯಿತ್ರಿ ದೇವಿ(24) ಹೆತ್ತ ಮಗಳನ್ನೇ ಸಾಯಿಸಿ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ತಾಯಿ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Crime News: ಮೂರು ವರ್ಷದ ಮಗು ಕೊಂದು ತಾನೂ ಆತ್ಮಹತ್ಯೆಗೆ ಮಾಡಿಕೊಂಡ ಅಮ್ಮ

ತಮಿಳುನಾಡಿ(Tamilunadu)ನ ವೆಲ್ಲೂರು ಮೂಲದ ನರೇಂದ್ರನ್‌(Narendran) ಐದು ವರ್ಷದ ಹಿಂದೆ ಗಾಯಿತ್ರಿ ದೇವಿ(Gayatridevi)ಯನ್ನು ವಿವಾಹವಾಗಿದ್ದು, ಕೆಲ ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು. ದಂಪತಿಗೆ ಮೂರು ವರ್ಷದ ಸಂಯುಕ್ತ ಇದ್ದಳು. ನಗರದ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್‌ ಆಗಿರುವ ನರೇಂದ್ರನ್‌ ಶನಿವಾರ ಕಾರ್ಯ ನಿಮಿತ್ತ ತಮಿಳುನಾಡಿಗೆ ತೆರಳಿದ್ದರು. ಹೀಗಾಗಿ ಮನೆಯಲ್ಲಿ ಗಾಯಿತ್ರಿದೇವಿ ಹಾಗೂ ಸಂಯುಕ್ತ ಮಾತ್ರ ಇದ್ದರು. ಭಾನುವಾರ ತಡರಾತ್ರಿ ಮಗು ಸಂಯುಕ್ತಳನ್ನು ನೀರಿನ ಟಬ್‌ನಲ್ಲಿ ಮುಳುಗಿಸಿರುವ ಗಾಯಿತ್ರಿ ದೇವಿ, ಬಳಿಕ ತಾನು ಸಹ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಬಾಗಿಲು ಮುರಿದು ನುಗ್ಗಿದ ಪತಿಗೆ ಶಾಕ್‌

ಮುಂಜಾನೆ 4ರ ಸುಮಾರಿಗೆ ನರೇಂದ್ರನ್‌ ತಮಿಳುನಾಡಿನಿಂದ ನಗರಕ್ಕೆ ವಾಪಸಾಗಿ ಮನೆಗೆ ಬಂದಿದ್ದಾರೆ. ಈ ವೇಳೆ ಮನೆಯ ಕಾಲಿಂಗ್‌ ಬೆಲ್‌ ಒತ್ತಿದ್ದಾರೆ. ಆದರೆ, ಪತ್ನಿ ಗಾಯಿತ್ರಿದೇವಿ ಬಾಗಿಲು ತೆರೆದಿಲ್ಲ. ಹತ್ತಾರು ಬಾರಿ ಬೆಲ್‌ ಮಾಡಿದರೂ ಬಾಗಿಲು ತೆರೆದಿಲ್ಲ. ಅನುಮಾನಗೊಂಡು ಬಾಗಿಲು ಜೋರಾಗಿ ತಳ್ಳಿದಾಗ ಬಾಗಿಲು ತೆರೆದುಕೊಂಡಿದೆ. ಈ ವೇಳೆ ಒಳಹೋಗಿ ನೋಡಿದಾಗ ಮಗಳು ಸಂಯುಕ್ತ ನೀಟಿನ ಟಬ್‌ನಲ್ಲಿ ಮುಳುಗಿ ಮೃತಪಟ್ಟಿರುವುದು ಗೊತ್ತಾಗಿದೆ. ಬಳಿಕ ರೂಮ್‌ಗೆ ತೆರಳಿ ನೋಡಿದಾಗ ಪತ್ನಿ ಗಾಯಿತ್ರಿ ದೇವಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೂಡಲೇ ಆಕೆಯನ್ನು ಕೆಳಗೆ ಇಳಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಪರೀಕ್ಷಿಸಿದ ವೈದ್ಯರು ಆಕೆಗೆ ಜೀವ ಇರುವುದು ಗೊತ್ತಾಗಿದೆ. ಕೂಡಲೇ ಐಸಿಯುಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru: ಬುದ್ಧಿಮಾಂದ್ಯ ಎಂಬ ಕಾರಣಕ್ಕೆ ತಾಯಿಯಿಂದಲೇ ಮಗುವಿನ ಹತ್ಯೆ

ಮಾನಸಿಕ ಖಿನ್ನತೆ: ಗಾಯಿತ್ರಿ ದೇವಿ ಕೆಲ ದಿನಗಳಿಂದ ಅನಾರೋಗ್ಯ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು. ಇದಕ್ಕೆ ಯಾವುದೇ ಚಿಕಿತ್ಸೆ ಪಡೆದಿರಲಿಲ್ಲ ಎಂಬ ವಿಷಯ ತಿಳಿದು ಬಂದಿದೆ. ಭಾನುವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಮಗಳನ್ನೇ ನೀರಿನ ಟಬ್‌ನಲ್ಲಿ ಮುಳುಗಿಸಿ ಸಾಯಿಸಿ, ಬಳಿಕ ಆಕೆಯ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಸಂಬಂಧ ನರೇಂದ್ರನ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಎಚ್‌ಎಎಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!