ಮೂವರು ಮಕ್ಕಳೊಂದಿಗೆ ನೀರಿನ ಸಂಪ್‌ಗೆ ಹಾರಿದ ತಾಯಿ: ಹೃದಯವಿದ್ರಾವಕ ಘಟನೆಗೆ ಗ್ರಾಮಸ್ಥರ ಕಣ್ಣೀರು

By Sathish Kumar KHFirst Published Jan 29, 2023, 10:54 AM IST
Highlights

ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದ ಬಳಿಯ ವಿಠಲವಾಡಿ ತಾಂಡಾದಲ್ಲಿ ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಮೂವರು ಮಕ್ಕಳನ್ನು ನೀರಿನ ಸಂಪ್‌ಗೆ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಇಂದು ಬೆಳಗ್ಗೆ ನಡೆದಿದೆ.

ವಿಜಯಪುರ ‌(ಜ.29): ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದ ಬಳಿಯ ವಿಠಲವಾಡಿ ತಾಂಡಾದಲ್ಲಿ ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಮೂವರು ಮಕ್ಕಳನ್ನು ನೀರಿನ ಸಂಪ್‌ಗೆ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಇಂದು ಬೆಳಗ್ಗೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆ (ತಾಯಿ) ಗೀತಾ ರಾಮು ಚೌವ್ಹಾಣ (32),  ಮಕ್ಕಳಾದ ಸೃಷ್ಟಿ (6) ಸಮರ್ಥ (4)  ಮತ್ತು ಕಿಶನ್ (3) ಮೂವರು ಮೃತ ಮಕ್ಕಳಾಗಿದ್ದಾರೆ. ಮೂರು ಮಕ್ಕಳೊಂದಿಗೆ ನೀರಿನ ಸಂಪ್ ನಲ್ಲಿ ಹಾರಿ‌ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳದಿಬಂದಿದೆ. ನಿನ್ನೆ ರಾತ್ರಿ  ಪತಿಯೊಂದಿಗೆ ಜಗಳ ಮಾಡಿದ್ದ ಗೀತಾ, ಪತಿ ರಾಮು ಮಲಗಿದ್ದ ವೇಳೆ ಮೂವರು‌ ಮಕ್ಕಳನ್ನು ನೀರಿನ‌ ಸಂಪ್ ಗೆ ಎಸೆದು ಕೊಲೆ ಮಾಡಿದ್ದಾಳೆ. ಬಳಿಕ ತಾನೂ ಸಂಪ್ ನಲ್ಲಿ ಬಿದ್ದಿದ್ದಾಳೆ. 

ಇದನ್ನೂ ಓದಿ: Kolar: ಕೌಟುಂಬಿಕ ಕಲಹಕ್ಕೆ ಬೇಸರ: ಎರಡು ಪುಟ್ಟ ಕಂದಮ್ಮಗಳೊಂದಿಗೆ ಕೆರೆಗೆ ಹಾರಿದ ಕ್ರೂರಿ ತಾಯಿ

ಪತ್ನಿ ಮಕ್ಕಳಿಗಾಗಿ ಹುಡುಕಾಟ: ಪತಿ ಹುಡುಕಾಡಿದ ನಂತರ ಮನೆಯಲ್ಲಿ ಮಕ್ಕಳು ಪತ್ನಿ ಇಲ್ಲದಿರುವುದು ಕಂಡು ರಾತ್ರಿ ವೇಳೆ ಮನೆಯಿಂದ ಹೊರಬಂದು ನೋಡಿದಾಗ ಎಲ್ಲೂ ಸಿಕ್ಕಿಲ್ಲ. ನಂತರ ಮನೆ ಬಾಗಿಲ ಬಳಿಯಿರುವ ನೀರಿನ ಸಂಪ್‌ನ ಬಾಗಿಲು ತೆರೆದುಕೊಂಡಿದ್ದು, ಅದರೊಳಗೆ ಲೈಟ್‌ ಹಾಕಿ ನೋಡಿದಾಗ ಮಕ್ಕಳು ಮತ್ತು ಪತ್ನಿಯರ ಮೃತದೇಹಗಳು ಪತ್ತೆಯಾಗಿವೆ ಎಂದು ಪತಿ ರಾಮು ತಿಳಿಸಿದ್ದಾರೆ. ಈ ದುರ್ಘಟನೆ ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ತಿಕೋಟಾ ಪೊಲೀಸರ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

ತಮ್ಮ ಸಾವಿನ ಜೊತೆಗೆ ಮಕ್ಕಳನ್ನು ಕೊಲ್ಲುವ ಚಿಂತನೆ ಏಕೆ.?: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕುಟುಂಬ ಕಲಹದಿಂದ ಬೇಸತ್ತವರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ಮಾಡುತ್ತಾರೆ. ಅವರಿಗೆ ಬದಕಲು ಸಾಕಷ್ಟು ಅವಕಾಶಗಳು ಇದ್ದರೂ ದುಡುಕು ನಿರ್ಧಾರ ಕೈಗೊಳ್ಳುತ್ತಾರೆ. ಆದರೆ, ತಾವು ಒಬ್ಬರೇ ಆತ್ಮಹತ್ಯೆ ಮಾಡಿಕೊಳ್ಳದೇ ಜಗತ್ತಿನ ಬಗ್ಗೆ ಅರಿವೇ ಇಲ್ಲದ ಕಂದಮ್ಮಗಳನ್ನೂ ಸಾಯಿಸುತ್ತಿರುವುದು ಅತ್ಯಂತ ಅಮಾನವೀಯ ಘಟನೆ ಆಗಿದೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು. ಸಾರ್ವಜನಿಕರಿಗೆ ನೈತಿಕ ಶಿಕ್ಷಣ ಮತ್ತು ಮೌಲ್ಯ ಶಿಕ್ಷಣವನ್ನು ನೀಡಲು ಸರ್ಕಾರ ಕೆಲವು ಅಭಿಯಾನವನ್ನಾದರೂ ಕೈಗೊಳ್ಳಬೇಕು. ಇಲ್ಲವಾದಲ್ಲಿ ತಂದೆ- ತಾಯಿ ಜಗಳದಲ್ಲಿ ಜಗತ್ತನ್ನೇ ಅರಿಯದ ಕಂದಮ್ಮಗಳ ಬಲಿ ಆಗುವುದನ್ನು ತಡೆಯಲು ಸಾಧ್ಯವಿಲ್ಲ.

ಇದನ್ನೂ ಓದಿ: ಮದ್ದೂರಿನಲ್ಲಿ ಘೋರ ದುರಂತ: 3 ಮಕ್ಕಳಿಗೆ ವಿಷವುಣಿಸಿ ನೇಣಿಗೆ ಶರಣಾದ ತಾಯಿ

ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿದ್ದ ತಾಯಿ:
ಕೋಲಾರ (ಜ.19): ಕೌಟುಂಬಿಕ ಕಲಹಕ್ಕೆ ಬೇಸತ್ತು ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳು ಮಕ್ಕಳೊಂದಿಗೆ ಕೆರೆಗೆ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಕೋಲಾರ ಜಿಲ್ಲೆಯ ಮಾಲೂರಿನ ಹೊರ ವಲಯದಲ್ಲಿ ನಡೆದಿತ್ತು. ಮಾಲೂರು ಪಟ್ಟಣದ ಹೊರ ವಲಯದಲ್ಲಿ ತನ್ನ ಇಬ್ಬರು ಪುಟಾಣಿ ಹೆಣ್ಣು ಮಕ್ಳಳ ಜೊತೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳೀಯರ ನೆರವಿನಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಮೂರು ಮೃತ ದೇಹಗಳನ್ನು ಕೆರೆಯಿಂದ ತೆಗೆದು ಹೊರಗೆ ಹಾಕಿದ್ದರು. 

ಕೌಟುಂಬಿಕ ಕಲಹ ಹಿನ್ನಲೆ: ಮೃತ ತಾಯಿ ಮಕ್ಕಳು ಮಾಲೂರು ತಾಲೂಕಿನ ಚೊಕ್ಕಂಡಹಳ್ಳಿ ಗ್ರಾಮದ ನಿವಾಸಿಗಳು ಆಗಿದ್ದಾರೆ.  ಮೃತ ತಾಯಿಯನ್ನು ಬೇಬಿ (30) ಹಾಗೂ ಮಕ್ಕಳನ್ನು ದರ್ಶಿನಿ (4) ಛಾಯಾ ಶ್ರೀ (9 ತಿಂಗಳ ಮಗು ) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹ ಹಿನ್ನಲೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಮೃತ ಬೇಬಿಯ ಪತಿ ವೇಣುಗೋಪಾಲ ಅವರನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

click me!