ವಿಜಯಪುರ: ಇಬ್ಬರು ಹೆಣ್ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ, ಕಾರಣ ಕೇಳಿದ್ರೆ ಹೌಹಾರ್ತಿರಿ..!

By Girish GoudarFirst Published Jul 13, 2022, 2:44 PM IST
Highlights

*   ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹಂದಿಗನೂರು ಗ್ರಾಮದಲ್ಲಿ ನಡೆದ ಘಟನೆ 
*   ಆತ್ಮಹತ್ಯೆಗೆ ಹೊರಟ ತಾಯಿಯಿಂದ ಇಬ್ಬರು ಹೆಣ್ಣು ಮಕ್ಕಳು ಬಚಾವ್ 
*   ಅದೃಷ್ಟವಶಾತ್ ಇನ್ನಿಬ್ಬರು ಹೆಣ್ಣು ಮಕ್ಕಳು ಬಚಾವ್ 
 

ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಜು.13):  ಮನೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಆ ಮನೆಯ ಭಾಗ್ಯದ ಬಾಗಿಲು ತೆರೆದಂತೆ. ಆದ್ರೆ ಈಗಲು ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಮನೆಗೆ ಹುಣ್ಣು ಅನ್ನೋ ಭಾವನೆ ಇದ್ದಂತೆ ಕಾಣ್ತಿದೆ. ಅದಕ್ಕೆ ತಾಜಾ ಉದಾಹರಣೆಯೇ ಈ ಸ್ಟೋರಿ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹಂದಿಗನೂರು ಗ್ರಾಮದಲ್ಲಿ ತಾಯಿಯೊಬ್ಬಳು ತನ್ನ ಇಬ್ಬರು ಹೆಣ್ಣು ಮಕ್ಕಳ ಸಮೇತ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ. ಕಾರಣ ಕೇಳಿದ್ರೆ ಅಯ್ಯೋ ಪಾಪಾ ಅನ್ತೀರಿ.! ಯಾಕಂದ್ರೆ ನಾಲ್ಕು ಹೆಣ್ಣುಮಕ್ಕಳೇ ಹುಟ್ಟಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. 

ಇಬ್ಬರು ಹೆಣ್ಣು ಮಕ್ಕಳ ಸಮೇತ ಬಾವಿಗೆ ಹಾರಿದ ತಾಯಿ 

ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹಂದಿಗನೂರು ಗ್ರಾಮದಲ್ಲಿ ನಡೆದ ಘಟನೆ ಇದು. ಇದೆ ಗ್ರಾಮದ ತಾಯಿಯೊಬ್ಬಳು ತನ್ನ ಇಬ್ಬರು ಹೆಣ್ಣು ಮಕ್ಕಳ ಸಮೇತವಾಗಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಅಕ್ಕಮ್ಮ ಗುಬ್ಬೇವಾಡಿ (30), ತನ್ನ ಅವ್ವಮ್ಮ (2), ಸಾವಿತ್ರಿ (1) ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮನೆಯಿಂದ ಮಕ್ಕಳನ್ನ ತೆಗೆದುಕೊಂಡು ತೋಟದ ಮನೆಯ ಬಾವಿಗೆ ಹೋದ ಅಕ್ಕಮ್ಮ ಮಕ್ಕಳ ಸಮೇತ ಹಾರಿದ್ದಾಳೆ. ತಾಯಿಯ ಜೊತೆಗೆ ಮಕ್ಕಳು ಸಾವನ್ನಪ್ಪಿದ್ದಾರೆ. ಇಂದು(ಬುಧವಾರ) ಬಾವಿಯಲ್ಲಿ ಮೂವರ ಶವ ಪತ್ತೆಯಾಗಿವೆ.

ಮೊಬೈಲ್ ಕೊಡಿಸದ್ದಕ್ಕೆ ತಂದೆ ಜನ್ಮದಿನದಂದೇ ಮಗ ನೇಣಿಗೆ ಶರಣು!

ಬರೀ ಹೆಣ್ಮಕ್ಕಳು ಹುಟ್ಟಿದಕ್ಕೆ ತಾಯಿ ಆತ್ಮಹತ್ಯೆ 

ಇನ್ನು ತಾಯಿ ಅವ್ವಕ್ಕ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಕೇಳಿದ್ರೆ ಹೌಹಾರ್ತಿರಿ.. ಯಾಕಂದ್ರೆ ತನಗೆ ಬರೀ ಹೆಣ್ಣು ಮಕ್ಕಳೇ ಹುಟ್ಟುತ್ತಿವೆ ಎಂದು ಮಾನಸಿಕವಾಗಿ ಅವ್ವಕ್ಕ ನೊಂದಿದ್ದಳಂತೆ. ಮೂಲತಃ ಸಿಂದಗಿ ತಾಲೂಕಿನ ಹಚ್ಯಾಳ ಗ್ರಾಮದ ಅವ್ವಕ್ಕಳನ್ನ 10  ವರ್ಷಗಳ ಹಿಂದೆ ದೇವರಹಿಪ್ಪರಗಿಯ ಹಂದಿಗುಂದ ನಿವಾಸಿ ಶ್ರೀಶೈಲ್‌ ಎಂಬುವರಿಗ ಮದುವೆ ಮಾಡಿ ಕೊಡಲಾಗಿತ್ತು. ಈ ವರೆಗೆ ನಾಲ್ಕು ಹೆಣ್ಣು ಮಕ್ಕಳು ಜನಿಸಿದ್ದರು. 9 ಹಾಗೂ 8 ವರ್ಷದ ಇಬ್ಬರು ಹೆಣ್ಣು ಮಕ್ಕಳು ಹಾಗೂ 2 ವರ್ಷದ ಹಾಗೂ 1 ವರ್ಷದ ಮತ್ತಿಬ್ಬರು ಹೆಣ್ಣು ಮಕ್ಕಳೇ ಹುಟ್ಟಿದ್ದರು. ಗಂಡು ಮಗು ಹುಟ್ಟಲಿಲ್ಲ ಎಂದು ಮಾನಸಿಕವಾಗಿ ನೊಂದಿದ್ದಳು. ಕಳೆದ ವರ್ಷ ಸಾವಿತ್ರಿ ಅನ್ನೋ ಮಗು ಹುಟ್ಟಿದ್ದು, ಅಂದಿನಿಂದಲೂ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದಳು ಎನ್ನಲಾಗಿದೆ.

ಕಾರನ್ನು ಕಸಿದುಕೊಂಡ ನಾಯಕ, ಗೆಳೆಯರಿಂದ ಥಳಿತ, ಸೂಸೈಡ್‌ ಮಾಡ್ಕೊಂಡ ವಕೀಲ!

ಅದೃಷ್ಟವಶಾತ್ ಇನ್ನಿಬ್ಬರು ಹೆಣ್ಣು ಮಕ್ಕಳು ಬಚಾವ್ 

ಗಂಡು ಮಗು ಹುಟ್ಟಲಿಲ್ಲ ಅಂತ ಜಿಗುಪ್ಸೆಗೆ ಒಳಗಾಗಿದ್ದ ಅವ್ವಕ್ಕ, ಆತ್ಮಹತ್ಯೆಗೆ ನಿರ್ಧರಿಸಿದ್ದಳು. ಹಾಗೇ ತನ್ನ ನಾಲ್ಕು ಹೆಣ್ಣು ಮಕ್ಕಳ ಸಮೇತ ಆತ್ಮಹತ್ಯೆಗೆ ಮುಂದಾಗಿದ್ದಳು. ಆತ್ಮಹತ್ಯೆ ಮಾಡಿಕೊಳ್ಳಲು ಹೋಗುವಾಗ 8 ಹಾಗೂ 9 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ಕರೆದುಕೊಂಡು ಹೋಗಲು ನಿರ್ಧರಿಸಿದ್ದಳು. ಶಾಲೆಯಲ್ಲಿದ್ದ ಬಾಲಕಿಯರನ್ನ ಕರೆದುಕೊಂಡು ಬರಲು ಹೋಗಿದ್ದಳಾದ್ರು, ಇಬ್ಬರು ಬಾಲಕಿಯರು ಜೊತೆಗೆ ಬರಲು ನಿರಾಕಸಿದಿದ್ದರಂತೆ. ಬಳಿಕ 2 ಹಾಗೂ 1 ವರ್ಷದ ಇಬ್ಬರು ಮಕ್ಕಳನ್ನ ಕರೆದುಕೊಂಡು ಹೋಗಿ ಬಾವಿ ಹಾರಿದ್ದಾಳೆ. 

ನಿತ್ಯ ಮಕ್ಕಳಿಗೂ ಟಾರ್ಚರ್‌ 

ಅವ್ವಕ್ಕ ಕಳೆದ 2 ವರ್ಷಗಳಲ್ಲಿ ಮತ್ತೆ ಎರಡು ಹೆಣ್ಣು ಮಕ್ಕಳೇ ಜನಿಸಿದ್ದರಿಂದ ದೃತಿಗೆಟ್ಟವರಂತೆ ಆಡ್ತಿದ್ದಳು ಎನ್ನಲಾಗಿದೆ. ಹೆಣ್ಣು ಮಕ್ಕಳಿಗೆ ಆಗಾಗ್ಗ ಟಾರ್ಚರ್‌ ನೀಡುತ್ತಿದ್ದಳಂತೆ. ದೊಡ್ಡ ಹೆಣ್ಣು ಮಕ್ಕಳಿಗೆ ನೀವು ಗಂಡಾಗಿ ಹುಟ್ಟಲಿಲ್ಲ ಅಂತಾ ಹೊಡೆದು ಬಡಿದು ಮಾಡ್ತಿದ್ದಳು ಅಂತಾ ಗ್ರಾಮಸ್ತರೊಬ್ಬರು ಹೇಳಿಕೊಂಡಿದ್ದಾರೆ.  ಇನ್ನು ಪತಿ ಹಾಗೂ ಕುಟುಂಬಸ್ಥರು ಹೆಣ್ಣು ಹುಟ್ಟಿದ್ದಕ್ಕೆ ಕಿರುಕುಳ ಏನಾದರು ನೀಡಿದ್ದಾರಾ ಎನ್ನುವ ಬಗ್ಗೆಯು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 

click me!