ಹುಬ್ಬಳ್ಳಿ ಶಾಲೇಲಿ ಮಕ್ಕಳಿಂದ ಮೀಟರ್‌ ಬಡ್ಡಿ ವ್ಯವಹಾರ: ದುಡ್ಡು ಕೊಡದದ್ದಕ್ಕೆ ಚಾಕುವಿನಿಂದ ಇರಿದ ಬಾಲಕ..!

By Kannadaprabha NewsFirst Published Aug 20, 2024, 5:15 AM IST
Highlights

ಮೀಟರ್‌ ಬಡ್ಡಿ ವ್ಯವಹಾರಕ್ಕೆ ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು, ಮೀಟರ್‌ ಬಡ್ಡಿಗೆ ಶಾಲಾ ಮಕ್ಕಳಿಗೂ ಸಾಲ ಕೊಡುತ್ತಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಂತಾಗಿದೆ. ಆದರೆ ಯಾರು ಬಳಸಿಕೊಳ್ಳುತ್ತಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಈ ಸಂಬಂಧ ಆರು ಮಂದಿ ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿ(ಆ.20): ಇಷ್ಟು ದಿನ ದೊಡ್ಡವರಿಗೆ ಮಾತ್ರ ಸೀಮಿತವಾಗಿದ್ದ ಮೀಟರ್‌ ಬಡ್ಡಿ ಇದೀಗ ಶಾಲೆಗಳಿಗೂ ಕಾಲಿಟ್ಟಿದೆ. ಬಡ್ಡಿ ಸಾಲಕ್ಕೆ ಸಂಬಂಧಿಸಿ ಹೈಸ್ಕೂಲ್‌ ವಿದ್ಯಾರ್ಥಿಯೊಬ್ಬ ಮತ್ತೊಬ್ಬ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಭಾನುವಾರ ರಾತ್ರಿ ಇಲ್ಲಿನ ಕರ್ಕಿ ಬಸವೇಶ್ವರ ನಗರದಲ್ಲಿ ನಡೆದಿದೆ.

ಈ ಪ್ರಕರಣದಿಂದ ಮೀಟರ್‌ ಬಡ್ಡಿ ವ್ಯವಹಾರಕ್ಕೆ ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು, ಮೀಟರ್‌ ಬಡ್ಡಿಗೆ ಶಾಲಾ ಮಕ್ಕಳಿಗೂ ಸಾಲ ಕೊಡುತ್ತಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಂತಾಗಿದೆ. ಆದರೆ ಯಾರು ಬಳಸಿಕೊಳ್ಳುತ್ತಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಈ ಸಂಬಂಧ ಆರು ಮಂದಿ ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Latest Videos

ರಾಮನಗರ: ಪ್ರೀತಿಗೆ ಪೋಷಕರ ವಿರೋಧ, ಯುವಕ ನೇಣಿಗೆ ಶರಣು, ಚಾಕು ಇರಿದುಕೊಂಡ ಯುವತಿ

9, 10ನೇ ತರಗತಿಯಲ್ಲಿ ಬಡ್ಡಿ ವ್ಯವಹಾರ:

ಕರ್ಕಿ ಬಸವೇಶ್ವರ ನಗರದ 10ನೇ ತರಗತಿ ವಿದ್ಯಾರ್ಥಿಯೊಬ್ಬ ₹10 ಸಾವಿರ ಸಾಲವನ್ನು ವಾರದ ಬಡ್ಡಿ ಲೆಕ್ಕದಲ್ಲಿ ಪಡೆದಿದ್ದನಂತೆ. ಪ್ರತಿವಾರ ನಿಯಮಿತವಾಗಿ ₹1 ಸಾವಿರ ಬಡ್ಡಿ ಕೂಡ ಕೊಡುತ್ತಿದ್ದನಂತೆ. ಆದರೆ ಎರಡ್ಮೂರು ವಾರದಿಂದ ಈತ ಬಡ್ಡಿ ಕೊಟ್ಟಿರಲಿಲ್ಲ. ಹೀಗಾಗಿ ಈತನನ್ನು 9ನೇ ತರಗತಿ ವಿದ್ಯಾರ್ಥಿ ಸೇರಿ 6 ಮಂದಿ ಕರೆದುಕೊಂಡು ಬಂದು ಕೊಠಡಿಯಲ್ಲಿ ಕೂಡಿ ಹಾಕಿ ಥಳಿಸಿದ್ದರು. ಅಲ್ಲದೆ, ಚಾಕು ಸೇರಿ ಮತ್ತಿತರ ಮಾರಕಾಸ್ತ್ರಗಳಿಂದ ಬೆದರಿಸಿದ್ದರು. ಈ ವಿಷಯ 10ನೇ ತರಗತಿ ವಿದ್ಯಾರ್ಥಿ ಪಾಲಕರಿಗೆ ಗೊತ್ತಾಗಿ ಶೀಘ್ರದಲ್ಲೇ ಹಣ ಕೊಡುವುದಾಗಿ ಭರವಸೆ ನೀಡಿ ಮಗನನ್ನು ಬಿಡಿಸಿಕೊಂಡು ಬಂದಿದ್ದರು.

ಇದಾಗಿ ಒಂದೆರಡು ಗಂಟೆಯಲ್ಲೇ ಮತ್ತೆ ಆ ಅಪ್ರಾಪ್ತರು, ಸಾಲ ಪಡೆದಿದ್ದ 10ನೇ ತರಗತಿ ಬಾಲಕನನ್ನು ಕರೆಸಿಕೊಂಡು ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. ಇದರಿಂದ ರೊಚ್ಚಿಗೆದ್ದ ಆ ಬಾಲಕ, 9ನೇ ತರಗತಿ ಬಾಲಕನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಈತನನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ. ಚಾಕುವಿನಿಂದ ಇರಿದ ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ನಡುವೆ ತಮ್ಮ ಮಗನನ್ನು ಕಿಡ್ನಾಪ್‌ ಮಾಡಿ ಅಕ್ರಮವಾಗಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ. ಮೀಟರ್‌ ಬಡ್ಡಿಯಂತೆ ಸಾಲ ಕೊಟ್ಟು ಹಣ, ಮೊಬೈಲ್‌ ಕಸಿದುಕೊಂಡಿದ್ದಾರೆ ಎಂದು 10ನೇ ತರಗತಿಯ ಬಾಲಕನ ಪಾಲಕರು ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಿಡ್ನಾಪ್‌ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದುಡ್ಡು ಕೊಟ್ಟಿದ್ದು ಯಾರು?:

ನಡುವೆ 10ನೇ ತರಗತಿ ವಿದ್ಯಾರ್ಥಿಗೆ ₹10 ಸಾವಿರ ಸಾಲವನ್ನು ಮೀಟರ್‌ ಬಡ್ಡಿ ಲೆಕ್ಕದಲ್ಲಿ ಕೊಟ್ಟಿದ್ದು ಯಾರು? 9ನೇ ತರಗತಿ ವಿದ್ಯಾರ್ಥಿ ಸೇರಿ ಆರು ಮಂದಿ ಅಪ್ರಾಪ್ತರನ್ನು ಬಿಟ್ಟು ವಸೂಲಿಗೆ ಇಳಿದಿದ್ದು ಯಾರು? ಮೀಟರ್‌ ಬಡ್ಡಿ ಹಣಕ್ಕೆ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆಯೇ? ಅಥವಾ 9ನೇ ತರಗತಿ ವಿದ್ಯಾರ್ಥಿ ತನ್ನದೇ ಹಣ ಸಾಲ ಕೊಟ್ಟಿದ್ದನೇ ಎಂಬುದು ಪೊಲೀಸ್‌ ತನಿಖೆಯಿಂದಷ್ಟೇ ಹೊರಬೀಳಬೇಕಿದೆ.

ಡ್ರಗ್ಸ್‌ ಜೊತೆ ಸಿಕ್ಕಿಬಿದ್ದ ಕೇರಳದ ರೂಪದರ್ಶಿ..!

ಬಾಲ ನ್ಯಾಯಮಂಡಳಿ

ವಶಕ್ಕೆ ಪಡೆದಿರುವ ಆರು ಜನ ಅಪ್ರಾಪ್ತರನ್ನು ಬಾಲನ್ಯಾಯಮಂಡಳಿ ಎದುರಿಗೆ ಹಾಜರುಪಡಿಸಿದ್ದಾರೆಂದು ಮೂಲಗಳು ತಿಳಿಸಿವೆ. ಈ ಕುರಿತು ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡ್ಡಿವ್ಯವಹಾರಕ್ಕೆ ವಿದ್ಯಾರ್ಥಿಗಳ ಬಳಕೆ: ಕಮಿಷನರ್‌

ಮೀಟರ್‌ ಬಡ್ಡಿ, ವಾರದ ಬಡ್ಡಿ ಲೆಕ್ಕದಲ್ಲಿ ಸಾಲ ಕೊಡುವವರು ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ಯಾರೇ ಮೀಟರ್‌ ಬಡ್ಡಿ ವ್ಯವಹಾರ ಮಾಡುತ್ತಿದ್ದರೂ ಅವರ ವಿರುದ್ಧ ದೂರು ಬಂದರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು. ಈ ಬಡ್ಡಿ ವ್ಯವಹಾರಕ್ಕೆ ಕಡಿವಾಣ ಹಾಕಲಾಗುವುದು ಎಂದು  ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ ತಿಳಿಸಿದ್ದಾರೆ. 

click me!