Shivamogga; ಚಲಿಸುತ್ತಿದ್ದ ಟ್ರ್ಯಾಕ್ಟರ್ ನಿಂದ ಬಿದ್ದು ವ್ಯಕ್ತಿ ಸಾವು

By Gowthami KFirst Published Sep 10, 2022, 11:07 AM IST
Highlights

ಚಲಿಸುತ್ತಿದ್ದ ಟ್ರ್ಯಾಕ್ಟರ್ ನಿಂದ ಆಯತಪ್ಪಿ ಕೆಳಕ್ಕೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯ ಹಿರೇಮೈಥೆ ಗ್ರಾಮದಲ್ಲಿ ನಡೆದಿದೆ.

ಶಿವಮೊಗ್ಗ (ಸೆ.10): ಚಲಿಸುತ್ತಿದ್ದ ಟ್ರ್ಯಾಕ್ಟರ್ ನಿಂದ ಆಯತಪ್ಪಿ ಕೆಳಕ್ಕೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಹೊಸನಗರ ತಾಲೂಕಿನ ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯ ಹಿರೇಮೈಥೆ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಹಿರೇಮೈಥೆ ಗ್ರಾಮದ ನಿವಾಸಿ ರಾಘವೇಂದ್ರ (43) ಎಂದು ಗುರುತಿಸಲಾಗಿದೆ. ಮನೆ ಕಟ್ಟುವ ಸಲುವಾಗಿ ಕೆಲಸದ ಮನೆಗೆ ಬೇಕಾಗಿದ್ದ  ಮರಳು ತರಲು  ಟ್ರ್ಯಾಕ್ಟರ್ ನಲ್ಲಿ ಬರುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್ ಚಾಲಕನ ಅಜಾಗರೂಕತೆಯಿಂದ  ರಾಘವೇಂದ್ರ ಕೆಳಗೆ ಬಿದ್ದು ಈ ದುರಂತ ಸಂಭವಿಸಿದೆ ಎನ್ನಲಾಗಿದೆ.  ರಾಘವೇಂದ್ರ ಕೆಳಗೆ ಬಿದ್ದಾಗ ಹೊಟ್ಟೆ ಭಾಗಕ್ಕೆ ತೀವ್ರ ಗಾಯವಾಗಿತ್ತು. ತಕ್ಷಣ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವ ವೇಳೆ  ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಮೃತ ರಾಘವೇಂದ್ರನ ತಂದೆ ಭೈರಪ್ಪ  ಅವರು ದೂರು ನೀಡಿದ್ದು,  ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಒಣ, ಹಸಿ ಗಾಂಜಾ ಸಮೇತ ಆರೋಪಿ ಬಂಧನ
ಸೊರಬ: ಮನೆ ಹಾಗೂ ಶುಂಠಿ ಹೊಲದ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಗಾಂಜಾ ಸಮೇತ ಆರೋಪಿಯನ್ನು ವಶಪಡಿಸಿಕೊಂಡ ಘಟನೆ ತಾಲೂಕಿನ ಚಿಟ್ಟೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿಂಗರಾಜ್‌ (45) ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಆಯುಕ್ತ ಹಾಗೂ ಉಪ ಅಧೀಕ್ಷಕರ ನೇತೃತ್ವದಲ್ಲಿ ನಿಂಗರಾಜ್‌ ಅವರ ಮನೆಮೇಲೆ ದಾಳಿ ನಡೆಸಿ 300 ಗ್ರಾಂ ಒಣ ಗಾಂಜಾ ಹಾಗೂ ಶುಂಠಿ ಹೊಲದಲ್ಲಿರುವ 20 ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳುವ ಜತೆಗೆ ಆರೋಪಿ ನಿಂಗರಾಜ್‌ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಾಳಿಯಲ್ಲಿ ಅಬಕಾರಿ ನಿರೀಕ್ಷಕರಾದ ಆರ್‌.ಶ್ರೀನಾಥ್‌, ಹಾಲಾನಾಯಕ್‌, ಉಪ ನಿರೀಕ್ಷಕಿ ಭಾಗ್ಯಲಕ್ಷ್ಮೇ, ಸಿಬ್ಬಂದಿ ರಂಜನ್‌, ರಾಮಪ್ಪ, ಬಾಲಚಂದ್ರ ಇತರರು ಪಾಲ್ಗೊಂಡಿದ್ದರು.

 ಸಾಲಬಾಧೆ: ಬೆಳಲಕಟ್ಟೆರೈತ ಆತ್ಮಹತ್ಯೆ
ಶಿವಮೊಗ್ಗ: ತಾಲೂಕಿನ ಬೆಳಲಕಟ್ಟೆಗ್ರಾಮದಲ್ಲಿ ಸಾಲಬಾಧೆಯಿಂದ ಮನನೊಂದು ರೈತರೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಗ್ರಾಮದ ವಾಸಿ ತೀರ್ಥಯ್ಯ (46) ಆತ್ಮಹತ್ಯೆಗೆ ಶರಣಾದ ರೈತ. ತಮ್ಮ ತಾಯಿ ಹೆಸರಿನಲ್ಲಿದ್ದ 2.18 ಎಕರೆ ಸ್ವಂತ ಭೂಮಿ ಹಾಗೂ 1 ಎಕರೆಯಷ್ಟುಬಗರ್‌ ಹುಕುಂ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಈ ಬಾರಿ ಅತ್ಯಧಿಕ ಮಳೆ ಸುರಿದ ಪರಿಣಾಮ ಬೆಳೆ ಸಂಪೂರ್ಣ ನಾಶವಾಗಿತ್ತು. ಇದರಿಂದಾಗಿ ಮನನೊಂದು ಶುಕ್ರವಾರ ಸಂಜೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸರಿಗೆ ಆಟಿಕೆ ಪಿಸ್ತೂಲ್‌ ತೋರಿಸಿ ತಪ್ಪಿಸಿಕೊಂಡಿದ್ದ ಡ್ರಗ್ಸ್‌ ಪೆಡ್ಲರ್‌ ಬಂಧನ

ಬೆಳೆ ಬೆಳೆಯುವ ಸಲುವಾಗಿ ಬ್ಯಾಂಕಿನಲ್ಲಿ ಹಾಗೂ ಖಾಸಗಿಯಾಗಿ ಸುಮಾರು .3 ಲಕ್ಷದಷ್ಟುಸಾಲ ಮಾಡಿದ್ದರು ಎನ್ನಲಾಗಿದೆ. ಇತ್ತ ಬೆಳೆಯೂ ಇಲ್ಲದೇ, ಸಾಲ ಮರುಪಾವತಿ ಮಾಡುವುದಕ್ಕೂ ಸಾಧ್ಯವಾಗದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ: ಕಾರಿನಲ್ಲಿ ಬಂದು ಬೈಕ್‌ ಕಸಿದು ಪರಾರಿಯಾದ ಖದೀಮರು

ಮೃತ ತೀರ್ಥಯ್ಯ ಅವರಿಗೆ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಮೃತರ ತಂದೆ ಕೂಡ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದರು. ತೀರ್ಥಯ್ಯ ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದು ದುರ್ದೈವದ ಸಂಗತಿ. ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

click me!