ಜನ ಮರಳೋ ಜಾತ್ರೆ ಮರಳೋ: ಜೈ ಶ್ರೀರಾಮ್‌ ಘೋಷಣೆ ಕೂಗಿಸಿ ಚಿನ್ನಾಭರಣ ಎಗರಿಸಿದ..!

By Kannadaprabha NewsFirst Published Apr 24, 2021, 7:51 AM IST
Highlights

ಬಾಲಾಜಿ ದೇವಸ್ಥಾನವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿ ಜೈ ಶ್ರೀರಾಮ್‌ ಎಂದರೆ ದೇವರು ಪ್ರತ್ಯಕ್ಷ| ನನಗೆ ಸಹ ಅನುಭವ ಆಗಿದೆ. ಅಲ್ಲದೆ ಇದಕ್ಕಾಗಿ 2 ಲಕ್ಷ ಕೊಡುತ್ತಿದ್ದಾರೆ ಎಂದು ಹೇಳಿದ ಅಪರಿಚಿತ ವ್ಯಕ್ತಿ| ಪ್ರದಕ್ಷಿಣೆ ಹಾಕಿ ಬರುವ ವೇಳೆಗೆ ಬ್ಯಾಗ್‌ ಸಮೇತ ಪರಾರಿಯಾದ ಆರೋಪಿ| 

ಬೆಂಗಳೂರು(ಏ.24): ದೇವಾಲಯದಲ್ಲಿ ಜೈ ಶ್ರೀರಾಮ್‌ ಘೋಷಣೆ ಕೂಗಿಸುವ ನೆಪದಲ್ಲಿ ಯುವಕನೊಬ್ಬನ ಗಮನ ಬೇರೆಡೆ ಸೆಳೆದು ಆತನಿಂದ 2.5 ಲಕ್ಷ ನಗದು ಹಾಗೂ 20 ಗ್ರಾಂ ಚಿನ್ನದ ಗಟ್ಟಿ ದೋಚಿ ಕಿಡಿಗೇಡಿ ಪರಾರಿಯಾದ ಘಟನೆ ಸಿ.ಟಿ.ಮಾರ್ಕೆಟ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿಜಯನಗರದ ಎಂ.ಸಿ.ಲೇಔಟ್‌ನ ನಿವಾಸಿ 19 ವರ್ಷದ ಯುವಕ ಮೋಸ ಹೋಗಿದ್ದು, ಮೈಸೂರು ಬ್ಯಾಂಕ್‌ ಸರ್ಕಲ್‌ಗೆ ಸಮೀಪ ದೇವಾಲಯದಲ್ಲಿ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯಪುರ: ನಂಬಿಸಿ ವಂಚನೆ, ಗೆಳತಿಯ ನಗ್ನ ಚಿತ್ರ ಹರಿಬಿಟ್ಟ ಯುವಕ

ಚಿಕ್ಕಪೇಟೆ ರಾಜ ಮಾರ್ಕೆಟ್‌ನಲ್ಲಿರುವ ಚಿನ್ನದ ಮಳಿಗೆಯಲ್ಲಿ ಚಿನ್ನದ ವ್ಯಾಪಾರ ಸಲುವಾಗಿ ಯುವಕ ತೆರಳುತ್ತಿದ್ದ. ಆಗ ಮೈಸೂರು ಬ್ಯಾಂಕ್‌ ಸರ್ಕಲ್‌ಗೆ ಬಂದು ಅವೆನ್ಯೂ ರಸ್ತೆಯಲ್ಲಿ ಆತ ತೆರಳುವಾಗ ಎದುರಿಗೆ ಅಪರಿಚಿತ ಸಿಕ್ಕಿದ್ದಾನೆ. ಯುವಕನನ್ನು ತಡೆದ ಆತ, ‘ಬಾಲಾಜಿ ದೇವಸ್ಥಾನವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿ ಜೈ ಶ್ರೀರಾಮ್‌ ಎಂದರೆ ದೇವರು ಪ್ರತ್ಯಕ್ಷ ಆಗುತ್ತಾನೆ. ನನಗೆ ಸಹ ಅನುಭವ ಆಗಿದೆ. ಅಲ್ಲದೆ ಇದಕ್ಕಾಗಿ 2 ಲಕ್ಷ ಕೊಡುತ್ತಿದ್ದಾರೆ’ ಎಂದಿದ್ದಾನೆ.

ಈ ಮಾತಿಗೆ ಮರುಳಾದ ಸಂತ್ರಸ್ತ, ಅಪರಿಚಿತ ಜತೆ ದೇವಾಲಯಕ್ಕೆ ಹೋಗಿದ್ದಾನೆ. ಬಳಿಕ ದೇವಸ್ಥಾನದ ಬಳಿ ಯುವಕನನ್ನು ನಿಲ್ಲಿಸಿದ ಆತ, ನೀನು ಪ್ರದಕ್ಷಿಣೆ ಬರುವವರೆಗೆ ಬ್ಯಾಗ್‌ ಕೊಡುವಂತೆ ಹೇಳಿ ಪಡೆದಿದ್ದಾನೆ. ಆತನ ವಿಶ್ವಾಸದ ಮೇಲೆ ಬ್ಯಾಗ್‌ ಕೊಟ್ಟು ಪ್ರದಕ್ಷಿಣಿಗೆ ಯುವಕ ಹೋಗಿದ್ದಾನೆ. ಒಂದು ಬಾರಿ ಪ್ರದಕ್ಷಿಣೆ ಹಾಕುವಾಗ ಅಪರಿಚಿತ ವ್ಯಕ್ತಿ ಸ್ಥಳದಲ್ಲಿಯೇ ನಿಂತಿದ್ದ. ಮತ್ತೊಂದು ಪ್ರದಕ್ಷಿಣೆ ಬರುವ ವೇಳೆಗೆ ಬ್ಯಾಗ್‌ ಸಮೇತ ಆರೋಪಿ ಪರಾರಿಯಾಗಿದ್ದಾನೆ.
 

click me!