
ಹರ್ಯಾಣ (ಅ. 19): ವೇಗದ ಚಾಲನೆಯಿಂದಾಗಿ ರಸ್ತೆ ಅಪಘಾತಕ್ಕೆ ಕಾರಣವಾಗಿದ್ದ ವ್ಯಕ್ತಿಯೋರ್ವನನ್ನು ತಡೆದಾಗ ಆತ ಟ್ರಾಫಿಕ್ ಪೊಲೀಸರಿಗೆ ಥಳಿಸಿ ಸಮವಸ್ತ್ರವನ್ನು ಹರಿದು ಹಾಕಿರುವ ಘಟನೆ ಹರ್ಯಾಣದ ಅಂಬಾಲಾ ಜಿಲ್ಲೆಯಲ್ಲಿ ನಡೆದಿದೆ. ಲವಿಶ್ ಬಾತ್ರಾ ಎಂದು ಗುರುತಿಸಲಾದ ಆರೋಪಿ ಪೊಲೀಸರನ್ನು ಅಮಾನುಷವಾಗಿ ಥಳಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಟ್ರಾಫಿಕ್ ಪೊಲೀಸ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ವೈರಲ್ ಆಗಿರುವ ವಿಡಿಯೋದಲ್ಲಿ ಯುವಕ ಹಳದಿ ಟೀ ಶರ್ಟ್ ಧರಿಸಿ ಎಎಸ್ಐ ಅಶೋಕ್ ಕುಮಾರ್ ಮೇಲೆ ಹಲ್ಲೆ ನಡೆಸಿರುವುದು ಕಂಡು ಬಂದಿದೆ. ಬಳಿಕ ಎಎಸ್ಐ ಸಮವಸ್ತ್ರ ಹರಿದಿರುವುದು ಕಂಡು ಬಂದಿದೆ. “ವ್ಯಕ್ತಿಯೊಬ್ಬ ಪೊಲೀಸರಿಗೆ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪರಿಶೀಲನೆ ನಡೆಸಿದಾಗ ಅಕ್ಟೋಬರ್ 13 ರಂದು ಈ ಘಟನೆ ನಡೆದಿದ್ದು, ಆರೋಪಿಯನ್ನು ಅತಿವೇಗದ ಚಾಲನೆಗಾಗಿ ಪೊಲೀಸರು ತಡೆದಿದ್ದಾರೆ. ಆತನ ವಿರುದ್ಧ ಎಫ್ಐಆರ್ ದಾಖಲಾಗಿದೆ. ತನಿಖೆ ನಡೆಯುತ್ತಿದೆ" ಎಂದು ಅಂಬಾಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಜಶನ್ದೀಪ್ ಸಿಂಗ್ ರಾಂಧವಾ ಹೇಳಿದ್ದಾರೆ.
ಅಂಬಾಲಾದಲ್ಲಿ ಟ್ರಾಫಿಕ್ ಪೊಲೀಸರೊಂದಿಗೆ ತಮ್ಮನ್ನು ನಿಯೋಜಿಸಲಾಗಿತ್ತು ಮತ್ತು ಅಕ್ಟೋಬರ್ 13 ರಂದು ರಾಜಪುರ-ಅಂಬಾಲಾ ರಸ್ತೆಯಲ್ಲಿರುವ ಗುರುದ್ವಾರ ಮಾಂಜಿ ಸಾಹಿಬ್ (NH-44 ನಲ್ಲಿ) ಮುಂದೆ ಚಲನ್ ಡ್ಯೂಟಿ ಮಾಡುತ್ತಿದೆ, ಈ ವೇಳೆ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಎಎಸ್ಐ ಅಶೋಕ್ ಕುಮಾರ್ ತಿಳಿಸಿದ್ದಾರೆ.
ಬೆಳಿಗ್ಗೆ 9 ಗಂಟೆ ಸುಮಾರಿಗೆ ಚಂಡೀಗಢ ನೋಂದಣಿ ಸಂಖ್ಯೆ (CH01AM3383) ಹೊಂದಿರುವ SUV ಕಾರು ರಾಜಪುರ ಕಡೆಯಿಂದ ಬಂದು ಎರಡು ಮೋಟಾರ್ ಸೈಕಲ್ಗಳಿಗೆ ಡಿಕ್ಕಿ ಹೊಡೆದಿದೆ. ನಾಲ್ಕು ಚಕ್ರದ ವಾಹನಕ್ಕೆ ಡಿಕ್ಕಿಯಾದ ನಂತರ, ಎರಡು ಪಟಿಯಾಲಾ ನೋಂದಾಯಿತ ಮೋಟಾರ್ಸೈಕಲ್ಗಳಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಾಯಗೊಂಡಿದ್ದಾರೆ. ಈ ವೇಳೆ ಗಾಯಾಳುಗಳ ಆರೈಕೆಗೆ ನಾವು ಧಾವಿಸಿದ್ದೆವು ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಐಡಿ ಕಾರ್ಡ್ ಕೇಳಿದ ಭದ್ರತಾ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ ವ್ಯಕ್ತಿ
ಆದರೆ, ಪೊಲೀಸರು ಗಾಯಗೊಂಡವರನ್ನು ಉಪಚರಿಸುತ್ತಿರುವಾಗ, SUV ಚಾಲನೆ ಮಾಡುತ್ತಿದ್ದ ಆರೋಪಿ ಲವಿಶ್ ಹೊರಬಂದು ತಂಟೆ ಮಾಡಿದ್ದಾನೆ. ನಂತರ ಆರೋಪಿ ಅಶೋಕ್ ಅವರ ಸಮವಸ್ತ್ರವನ್ನು ಹರಿದು ಹಲ್ಲೆ ಮಾಡಿದ್ದಾನೆ. ಸ್ವಲ್ಪ ಸಮಯದ ನಂತರ, ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಲು ಪ್ರಾರಂಭಿಸಿದಾಗ, ಆರೋಪಿ ತನ್ನ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ. ಗಾಯಾಳುಗಳನ್ನು ಅಂಬಾಲಾದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ