
ವಿಜಯಪುರ(ಡಿ.09): ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ನಡೆದ ಗುಂಡಿನ ದಾಳಿಯ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಒಂದೂವರೆ ತಿಂಗಳು ಬಳಿಕ ಪ್ರಮುಖ ಆರೋಪಿಯನ್ನು ಮಂಗಳವಾರ ಬಂಧಿಸಿದ್ದಾರೆ.
ಪ್ರಮುಖ ಆರೋಪಿ ವಿಜಯಪುರ ನಗರದ ಬಂಬಳ ಅಗಸಿ ನಿವಾಸಿ ಮಡಿವಾಳಯ್ಯ ಉರ್ಫ್ ಮಡು ಪಂಚಯ್ಯ ಹಿರೇಮಠ (33) ಎಂಬುವನನ್ನು ಬಂಧಿಸಲಾಗಿದೆ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಪಿಸ್ತೂಲ್, ಒಂದು ಜೀವಂತ ಗುಂಡು ಹಾಗೂ ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ. ಕೃತ್ಯ ನಡೆದ ದಿನದಿಂದಲೂ ತಲೆ ಮರೆಸಿಕೊಂಡಿದ್ದ ಈತನನ್ನು ಹುಡುಕಲು ಪೊಲೀಸರು ಹಲವಾರು ಸ್ಥಳಗಳನ್ನು ಜಾಲಾಡಿದ್ದರು. ಕೊನೆಗೂ ಪೊಲೀಸರ ಕೈಗೆ ಮಡಿವಾಳಯ್ಯ ಹಿರೇಮಠ ಸಿಕ್ಕಿ ಬಿದ್ದಿದ್ದಾನೆ.
ಭೀಮಾತೀರದಲ್ಲಿ ಮತ್ತೆ ಗುಂಡಿನ ದಾಳಿಗೆ ಅಸಲಿ ಕಾರಣ...ಮಲ್ಲಿಕಾರ್ಜುನ ಎಲ್ಲಿದ್ದಾನೆ?
ಪ್ರಕರಣದ ಹಿನ್ನಲೆ:
ಕಳೆದ ನವೆಂಬರ್ 2 ರಂದು ಕಾತ್ರಾಳ ಕ್ರಾಸ್ ಬಳಿ ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಅವರ ಕಾರಿಗೆ ವಾಹನ ಡಿಕ್ಕಿಹೊಡೆಸಿ ಗುಂಡಿನ ದಾಳಿ ಮಾಡಲಾಗಿತ್ತು. ಈ ಘಟನೆಯಲ್ಲಿ ಭೈರಗೊಂಡ ಕಾರು ಚಾಲಕ ಹಾಗೂ ಸಹಚರ ಅಸುನೀಗಿದ್ದರು. ಮಹಾದೇವ ಭೈರಗೊಂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 30 ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಮಡಿವಾಳಯ್ಯ ಹಿರೇಮಠನು ಧರ್ಮರಾಜ್ ಚಡಚಣ ಕಟ್ಟಾ ಬೆಂಬಲಿಗ. ಧರ್ಮರಾಜ್ ಚಡಚಣ ಕೊಲೆ ಪ್ರಕರಣದ ಉನ್ನತ ತನಿಖೆಗಾಗಿ ಧರ್ಮರಾಜ್ ಚಡಚಣ ಅವರ ತಾಯಿ ಮಲಾಬಾಯಿ ಚಡಚಣ ಅವರ ಕಾನೂನು ಹೋರಾಟದಲ್ಲಿ ಸದಾ ಮಹತ್ವದ ಪಾತ್ರ ವಹಿಸಿದ್ದ. ಅದೇ ತೆರನಾಗಿ ಧರ್ಮರಾಜ್ ಚಡಚಣ ಬಾಯ್ಸ್ ಎನ್ನುವ ಸಂಘಟನೆಯನ್ನು ರಚಿಸಿ ಧರ್ಮರಾಜ್ ಚಡಚಣ ಅಭಿಮಾನಿಗಳನ್ನು ಸಂಘಟಿಸಿದ್ದ, ಈ ಅಭಿಮಾನವನ್ನೇ ಹೆಚ್ಚು ಜಾಗೃತಗೊಳಿಸಿ ಯುವಕರನ್ನು ಗುಂಡಿನ ದಾಳಿ ಕೃತ್ಯಕ್ಕೆ ಬಳಕೆ ಮಾಡಿದ್ದ ಎಂಬ ಮೊದಲಾದ ಅಂಶಗಳು ತನಿಖೆ ವೇಳೆ ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ