ಮಹಾರಾಷ್ಟ್ರದ ದರೋಡೆಕೋರರ ಮೇಲೆ ಕಲಬುರಗಿಯಲ್ಲಿ ಫೈರಿಂಗ್: ನಾಲ್ವರ ಬಂಧನ

By Govindaraj SFirst Published Aug 24, 2022, 8:53 AM IST
Highlights

ಬಿಸಿಲೂರು ಕಲಬುರಗಿಯಲ್ಲಿ ಕಳೆದ ರಾತ್ರಿ ಗುಂಡಿನ ಸದ್ದು ಮಾರ್ಧನಿಸಿದೆ. ಮಹಾರಾಷ್ಟ್ರ ಮೂಲದ ಇಬ್ಬರು ದರೋಡೆಕೋರ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಹಗಲಲ್ಲಿ ದೇವರ ಪ್ರತಿಮೆ ಹೊತ್ತು ಗಲ್ಲಿ ಗಲ್ಲಿ ಪ್ರದರ್ಶನ ಮಾಡುವ ಮಹಾರಾಷ್ಟ್ರ ಮೂಲದ ಗ್ಯಾಂಗ್, ರಾತ್ರಿಯಾಗುತ್ತಿದ್ದಂತೆ ಮನೆ ಮನೆಗಳಿಗೆ ನುಗ್ಗಿ ದರೋಡೆ ಮಾಡುತ್ತಿತ್ತು.

ವರದಿ: ಶರಣಯ್ಯ ಹಿರೇಮಠ್, ಏಷ್ಯಾನೆಟ್  ಸುವರ್ಣ ನ್ಯೂಸ್, ಕಲಬುರಗಿ

ಕಲಬುರಗಿ (ಆ.24): ಬಿಸಿಲೂರು ಕಲಬುರಗಿಯಲ್ಲಿ ಕಳೆದ ರಾತ್ರಿ ಗುಂಡಿನ ಸದ್ದು ಮಾರ್ಧನಿಸಿದೆ. ಮಹಾರಾಷ್ಟ್ರ ಮೂಲದ ಇಬ್ಬರು ದರೋಡೆಕೋರ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಹಗಲಲ್ಲಿ ದೇವರ ಪ್ರತಿಮೆ ಹೊತ್ತು ಗಲ್ಲಿ ಗಲ್ಲಿ ಪ್ರದರ್ಶನ ಮಾಡುವ ಮಹಾರಾಷ್ಟ್ರ ಮೂಲದ ಗ್ಯಾಂಗ್, ರಾತ್ರಿಯಾಗುತ್ತಿದ್ದಂತೆ ಮನೆ ಮನೆಗಳಿಗೆ ನುಗ್ಗಿ ದರೋಡೆ ಮಾಡುತ್ತಿತ್ತು. 

ರಾತ್ರಿ ನಡೆದಿದ್ದಾದ್ರೂ ಏನು?: ನಿನ್ನೆ ರಾತ್ರಿ ಈ ದರೋಡೆಕೋರರ ಗ್ಯಾಂಗ್, ಕಲ್ಬುರ್ಗಿ ನಗರದ ಬಿದ್ದಪುರ್ ಕಾಲೋನಿಯಲ್ಲಿರುವ ಕೆಲವು ಮನೆಗಳಲ್ಲಿ ಕಳ್ಳತನಕ್ಕೆ ಯತ್ನಿಸಿದೆ. ಬಿದ್ದಾಪುರ್ ಕಾಲೋನಿಯ ಜನ ಪೊಲೀಸ್ ಕಂಟ್ರೋಲ್ ರೂಮ್‌ಗೆ ನೀಡಿದ ಮಾಹಿತಿ ಆಧರಿಸಿ ಅಶೋಕ ನಗರ ಠಾಣಾ ಪೊಲೀಸರು, ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಷ್ಟೇ ಅಲ್ಲ, ಸಾರ್ವಜನಿಕರ ಸಹಕಾರದೊಂದಿಗೆ ಒಟ್ಟು ನಾಲ್ವರು ದರೋಡೆಕೋರರನ್ನ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

Davanagere: ಮೋರಾರ್ಜಿ ವಸತಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ನಂತರ ಅವರು ವಾಸವಿದ್ದ ಜಾಗಕ್ಕೆ ಅವರನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಇಬ್ಬರು ದರೋಡೆಕೋರರು ತಮ್ಮ ಬಳಿ ಇದ್ದ ಚಾಕುವಿನಿಂದ ಅಶೋಕನಗರ ಠಾಣಾ ಪೊಲೀಸ್ ಕಾನ್ಸ್‌ಟೇಬಲ್ ಶಿವಶರಣಪ್ಪ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಅಶೋಕನಗರ ಠಾಣಾ ಸರ್ಕಲ್ ಇನ್ಸ್ಪೆಕ್ಟರ್, ಪಂಡಿತ್ ಸಾಗರ್ ತಮ್ಮ ಹಾಗೂ ತಮ್ಮ ಸಿಬ್ಬಂದಿಗಳ ಆತ್ಮ ರಕ್ಷಣೆಗಾಗಿ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅದಾಗಿಯೂ ದರೋಡೆಕೋರರು ತಮ್ಮ ಕೈಯಲ್ಲಿದ್ದ ಚಾಕು ಬಿಸಾಕದ ಕಾರಣ, ದರೋಡೆಕೋರರತ್ತ ಫೈರಿಂಗ್ ಮಾಡಿದ್ದಾರೆ. 

ಇಬ್ಬರ ಕಾಲಿಗೆ ಗುಂಡೇಟು: ಸರ್ಕಲ್ ಇನ್ಸ್ ಪೆಕ್ಟರ ಪಂಡಿತ್ ಸಗರ್ ನಡೆಸಿರುವ ಫೈರಿಂಗ್‌ನಲ್ಲಿ ಇಬ್ಬರು ದರೋಡೆಕೋರರು ಗಾಯಗೊಂಡಿದ್ದಾರೆ. ಗಾಯಾಳುಗಳು ಮಹಾರಾಷ್ಟ್ರದ ಉಸ್ಮಾನಾಬಾದ ಜಿಲ್ಲೆ ತುಳಜಾಪೂರ ತಾಲೂಕಿನ ಝಳಕೋಳ ಗ್ರಾಮದವರು ಎಂದು ತಿಳಿದುಬಂದಿದೆ. 

ಬಬಲಾದ ಬಳಿ ಶೆಡನಲ್ಲಿ ವಾಸ: ಕಲ್ಬುರ್ಗಿ ಹೊರವಲಯದ ಬಬಲಾದ್ ಗ್ರಾಮದ ರಸ್ತೆಯಲ್ಲಿರುವ ಖಾಲಿ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡು ಈ ಗ್ಯಾಂಗ್ ವಾಸವಿತ್ತು. ಹಗಲು ಹೊತ್ತಿನಲ್ಲಿ ದೇವರ ಪ್ರತಿಮೆಗಳನ್ನ ಗಲ್ಲಿ ಗಲ್ಲಿಗೆ ತೆಗೆದುಕೊಂಡು ಹೋಗಿ ಸಾರ್ವಜನಿಕರು ಕೊಟ್ಟಂತಹ ಹಣ ದವಸ ಧಾನ್ಯ ಪಡೆದುಕೊಳ್ಳುತ್ತಿದ್ದರು. ಇದೇ ಸಂದರ್ಭದಲ್ಲಿ ಅವರು ರಾತ್ರಿ ಯಾವ ಮನೆಗಳ ಮೇಲೆ ದಾಳಿ ಮಾಡಬೇಕು ಎನ್ನುವುದರ ಸ್ಕೆಚ್ ಸಹ ರೂಪಿಸುತ್ತಿದ್ದರು ಎನ್ನಲಾಗಿದೆ. 

ಜಿಲ್ಲಾಸ್ಪತ್ರೆಗೆ ದಾಖಲು: ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ದರೋಡೆಕೋರರಾದ ಲವಾ ಮತ್ತು ದೇವಿದಾಸ ಎನ್ನುವ ದರೋಡೆಕೋರರನ್ನ ಕಲ್ಬುರ್ಗಿ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಖೈದಿಗಳ ವಾರ್ಡನಲ್ಲಿ  ಚಿಕಿತ್ಸೆಗಾಗಿ ದಾಖಲಿಸಲಾಗಿದೆ. 

ಕಾನ್ಸ್‌ಟೇಬಲ್‌ಗೂ ಗಾಯ ಚಿಕಿತ್ಸೆಗೆ ದಾಖಲು: ದರೋಡೆಕೋರರು ಚಾಕುವಿನಿಂದ ನಡೆಸಿದ ದಾಳಿಯಿಂದ ಗಾಯಗೊಂಡಿರುವ ಪೊಲೀಸ್ ಕಾನಸ್ಟೇಬಲ್ ಶಿವಶರಣರನ್ನು ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ‌. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಲಬುರ್ಗಿಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪೂಜೆಗೆ ಬಂದವಳ ಮೇಲೆ ಜ್ಯೋತಿಷಿಯಿಂದ ರೇಪ್‌, ದೋಷ ಪರಿಹಾರ ಮಾಡೋದಾಗಿ ನಂಬಿಸಿ ದ್ರೋಹ..!

ನಿಟ್ಟುಸಿರು ಬಿಟ್ಟ ಜನ: ಇತ್ತೀಚಿಗೆ ಕಲ್ಬುರ್ಗಿ ನಗರದಲ್ಲಿ ಮನೆಗಳ್ಳತನ ಹಾಗೂ ದರೋಡೆ ಪ್ರಕರಣಗಳು ಹೆಚ್ಚುತ್ತಿದ್ದು, ಜನ ತೀವ್ರ ಆತಂಕದಲ್ಲಿದ್ದರು. ಇದೀಗ ಮಹಾರಾಷ್ಟ್ರ ಮೂಲದ ಇಬ್ಬರು ದರಡೋಕೋರರ ಮೇಲೆ ಪೊಲೀಸರು ಫೈರಿಂಗ್ ನಡೆಸಿರುವುದರಿಂದ ಕಲ್ಬುರ್ಗಿ ನಗರದ ಜನ ಕೊಂಚ ನಿರಾಳರಾಗಿದ್ದಾರೆ. 

click me!