ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ!

By Ravi JanekalFirst Published Mar 22, 2024, 8:17 PM IST
Highlights

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು, ಇಂದು ಕಾಡಾನೆ ದಾಳಿಗೆ ಕೂಲಿಕಾರ್ಮಿಕನೋರ್ವ ದುರ್ಮರಣಕ್ಕೀಡಾದ ಘಟನೆ ಚಿಕ್ಕಮಗಳೂರು ತಾಲೂಕಿನ ಕೆಂಚೇನಹಳ್ಳಿಯಲ್ಲಿ ನಡೆದಿದೆ.

ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಮಾ.22): ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು, ಇಂದು ಕಾಡಾನೆ ದಾಳಿಗೆ ಕೂಲಿಕಾರ್ಮಿಕನೋರ್ವ ದುರ್ಮರಣಕ್ಕೀಡಾದ ಘಟನೆ ಚಿಕ್ಕಮಗಳೂರು ತಾಲೂಕಿನ ಕೆಂಚೇನಹಳ್ಳಿಯಲ್ಲಿ ನಡೆದಿದೆ.

ತಮಿಳುನಾಡು ಮೂಲದ ಕಾರ್ಮಿಕ : 

ತಮಿಳುನಾಡು ಮೂಲದ ಶ್ರೀಧರ ಕೂಲಿ ಕೆಲಸಕ್ಕೆಂದು ತೋಟಕ್ಕೆ ತೆರಳುತ್ತಿದ್ದಾಗ  ಒಂಟಿ ಸಲಗ ದಾಳಿನಡೆಸಿದ್ದು, ಆನೆ ದಾಳಿಯಿಂದ ತೀವ್ರ ಗಾಯಗೊಂಡ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವಪ್ಪಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಒಂಟಿ ಸಲಗ  ಮತ್ತಾವರ ಅರಣ್ಯ ಮಾಹಿತಿಕೇಂದ್ರದ ಬಳಿ ಬಂದಾಗ ಅರಣ್ಯ ಇಲಾಖೆ ಸಿಬ್ಬಂದಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನವನ್ನು ತಡೆದು ಪಟಾಕಿ ಸಿಡಿಸುವ ಮೂಲಕ ಓಡಿಸಿದ್ದರು. 

ಬಿಜೆಪಿ ಅಭ್ಯರ್ಥಿಯ ಚುನಾವಣೆ ಖರ್ಚಿಗೆ ₹25000 ಹಣ ನೀಡಿ, ಗೆಲುವಿಗೆ ಶುಭಹಾರೈಸಿದ ಚುರುಮುರಿ ಮಾರುವ ವ್ಯಕ್ತಿ!

ಈ ಒಂಟಿ ಸಲಗ ಚಿಕ್ಕಮಗಳೂರು ತಾಲೂಕಿನ ಕೆ.ಆರ್.ಪೇಟೆ ಸುತ್ತಮುತ್ತಲಲ್ಲಿ ಸಂಚರಿಸುತ್ತಿತ್ತು. ಕೆಲವು ವರ್ಷಗಳಿಂದ ದಾನಿಹಳ್ಳಿಯಲ್ಲಿ ಕೆಲಸ ಮಾಡಿಕೊಂಡಿದ್ದ ಕುಟುಂಬ ಎರಡು ವರ್ಷದಹಿಂದೆ ಕಂಚೇನಹಳ್ಳಿಗೆ ಬಂದಿದ್ದರು. ಇಂದು ಕೆಲಸಕ್ಕೆ ತೆರಳುವಾಗ ಆನೆ ದಾಳಿ ನಡೆಸಿ ಕೊಂದುಹಾಕಿದೆ. ಕಳೆದ ಎರಡು ವರ್ಷದಲ್ಲಿ ಆನೆ ದಾಳಿಗೆ ಐದಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.

ಪ್ರತಿಭಟನೆ:

ಆನೆದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿರುವುದನ್ನು ಖಂಡಿಸಿ, ಸರ್ಕಾರ ಮತ್ತು ಅರಣ್ಯ ಇಲಾಖೆ ಕಾರ್ಯವೈಖರಿಯನ್ನು ವಿರೋಧಿಸಿ ವಿವಿಧ ಸಂಘಟನೆಗಳ ಮುಖಂಡರು ಶವಾಗಾರದ ಎದುರು ಸಂಜೆ ಪ್ರತಿಭಟನೆ ನಡೆಸಿದರು. ಸರ್ಕಾರ ಮತ್ತು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾನಿರತರು ಆನೆಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

15 ಲಕ್ಷ ಪರಿಹಾರ : 

ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದು, ಕಾಡಾನೆಯನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು. ಇಲ್ಲವೇ ಕಾಡಿಗೆ ಅಟ್ಟಲು ಮುಂದಾಗಬೇಕೆಂದು ಒತ್ತಾಯಿಸಿದರು. ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶಬಾಬು, ವಲಯಾರಣ್ಯಾಧಿಕಾರಿ ಮೋಹನ್ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದರು. ಮೃತಕುಟುಂಬಕ್ಕೆ ಸ್ವಾಂತನ ಹೇಳಿ 15 ಲಕ್ಷ ಪರಿಹಾರದ ಚೆಕ್ ನ್ನು ನೀಡಿದರು. ಅಲ್ಲದೆ ಪ್ರತಿಭಟನಾನಿತರೊಂದಿಗೆ ಮಾತಾಡಿದ ಹಿರಿಯ ಅರಣ್ಯಾಧಿಕಾರಿಗಳು ಒಂಟಿ ಸಲಗವನ್ನು ಓಡಿಸುವ ಪ್ರಯತ್ನ ನಡೆಸಲಾಗುವುದು ಅಲ್ಲದೆ ಕಾಡಾನೆಗಳನ್ನು  ನಿಯಂತ್ರಣ ಮಾಡುವ ಭರವಸೆಯನ್ನು ನೀಡಿದರು.

ಆನೆಗೂ ಬಂತಾ ಆಧಾರ್ ಕಾರ್ಡ್? ವಿವಾದಕ್ಕೆ ಗುರಿಯಾದ ಕೇರಳ ವ್ಯಕ್ತಿಗೆ ಕರ್ನಾಟಕದ ಪರಿಹಾರ!

ತಲೆನೋವಾಗಿರುವ ಒಂಟಿ ಸಲಗ :

ಜಿಲ್ಲೆಯಲ್ಲಿ ಸುತ್ತಾಡಿಕೊಂಡಿದ್ದ ಬೀಟಮ್ಮಗುಂಪಿನ  ಆನೆಗಳನ್ನು ಕಾಡಿಗಟ್ಟಲು ಹರಸಾಹಸಪಟ್ಟು ಕೊನೆಗೂ ಹಾಸನ ಜಿಲ್ಲೆಗೆ ಕಳುಹಿಸಲು ಯಶಸ್ವಿಯಾಗಿದ್ದ ಅರಣ್ಯ ಇಲಾಖೆಗೆ ಈಗ ಒಂಟಿಸಲಗಳ ಕಾಟ ಜಾಸ್ತಿಯಾಗುವ ಮೂಲಕ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಒಂಟಿ ಸಲಗದ ಹಾವಳಿ ಜಿಲ್ಲೆಯಲ್ಲಿ ಅಧಿಕಗೊಂಡಿದೆ. ಕೆಲವು ದಿನಗಳ ಹಿಂದೆ ಪ್ರವಾಸಕ್ಕೆಂದು ಮೂಡಿಗೆರೆ ತಾಲೂಕಿನ ದೇವರ ಮನೆಗೆ ಬಂದಿದ್ದ ಪ್ರವಾಸಿಗರ ಮೇಲೆ ಒಂಟಿಸಲಗವೊಂದು ದಾಳಿನಡೆಸಿದ್ದು, ಬೈಕ್ಬಿಟ್ಟು ಕೂದಲೆಳೆಯ ಅಂತರದಿಂದ ಪಾರಾಗಿದ್ದರು. ಇಂದು ಚಿಕ್ಕಮಗಳೂರು ತಾಲೂಕಿನ ಕಂಚೇನಹಳ್ಳಿಯಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಶ್ರೀಧರ ಮೇಲೆ ಸಲಗವೊಂದು ದಾಳಿ ನಡೆಸಿಕೊಂದುಹಾಕಿದೆ.

click me!