ACB Raids ಕಾಲು ನೋವಿನ ಚಿಕಿತ್ಸೆಗೆ 12000 ರೂ ಲಂಚ ಕೇಳಿದ ಸರ್ಕಾರಿ ವೈದ್ಯ, ಸ್ವೀಕರಿಸುವಾಗ ಎಸಿಬಿ ಬಲೆಗೆ

By Suvarna NewsFirst Published Jan 22, 2022, 10:49 PM IST
Highlights

ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಸರ್ಕಾರಿ ವೈದ್ಯ
ಚಿಕಿತ್ಸೆಗೆಂದು ಬಂದ ರೋಗಿಯಿಂದ ಲಂಚದ ಬೇಡಿಕೆಯಿಟ್ಟ ವೈದ್ಯ ,ಡಿಗ್ರೂಪ್ ನೌಕರ ಎಸಿಬಿ ಬಲೆಗೆ
ಕಾಲು ನೋವಿನ ಚಿಕಿತ್ಸೆಗಾಗಿ 12000 ರೂ ಲಂಚ ಕೇಳಿದ ಸರ್ಕಾರಿ ವೈದ್ಯ

ಕೊಪ್ಪಳ, (ಜ.22): ಜಿಲ್ಲೆಯ ಗಂಗಾವತಿಯ ಸರಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ(Hospital) ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಲು ಲಂಚದ(Bribe) ಹಣ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಎಸಿಬಿ ಪೊಲೀಸರು(ACB Police) ದಾಳಿ ನಡೆಸಿ ಸರಕಾರಿ ವೈದ್ಯ ಹಾಗೂ ಡಿಗ್ರೂಪ್ ನೌಕರನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಸರಕಾರಿ ಆಸ್ಪತ್ರೆಯ ಎಲುಬು ಕೀಲು ವೈದ್ಯ ಡಾ. ಸಲಾವುದ್ದೀನ್ ಹಾಗೂ ಡಿಗ್ರೂಪ್ ನೌಕರ ವಿರೇಶ ಬಾರಿಕೇರ್ ಎಸಿಬಿ ಬಂಧನಕ್ಕೊಳಗಾದವರು.

Fake Death Certificate: 5 ಕೋಟಿ ವಿಮೆ ನುಂಗಲು ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿ..!

ತಾಲೂಕಿನ ವಡ್ಡರಹಟ್ಟಿ ಗ್ರಾಮದ ನಾಗಪ್ಪ ಎನ್ನುವ ವ್ಯಕ್ತಿ ಕಾಲು ನೋವಿನ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯ ಡಾ.ಸಲಾವುದ್ದಿನ್ 12000 ರೂ.ಗಳ ಲಂಚ ನೀಡುವಂತೆ ಕೇಳಿದ್ದು ಇದನ್ನು ತಮ್ಮ ಸಹಾಯಕ ವಿರೇಶ ಬಾರಕೇರ್ ಇವರ ಕೈಗೆ ಕೊಡುವಂತೆ ನಾಗಪ್ಪನ ಕಡೆಯವರಾದ ಕೃಷ್ಣಕಿಶೋರ್ ಎನ್ನುವರಿಗೆ ತಿಳಿಸಿದ್ದಾರೆ.

ಶುಕ್ರವಾರ 6000 ರೂ.ಗಳನ್ನು ಕೊಟ್ಟು ಉಳಿದ ಹಣ ಶನಿವಾರ ಕೊಡುವುದಾಗಿ ತಿಳಿಸಿ ನಂತರ ಕೊಪ್ಪಳದ ಎಸಿಬಿ ಪೊಲೀಸ್ ಠಾಣೆಗೆ ಕೃಷ್ಣಕಿಶೋರ್ ದೂರು ನೀಡಿದ್ದಾರೆ. ಶನಿವಾರ ಉಳಿದ ಹಣ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಹಾಯಕ ವಿರೇಶ ಬಾರೆಕೇರ್ ಇವರಿಗೆ ಕೊಡುವ ಸಂದರ್ಭದಲ್ಲಿ ಎಸಿಬಿ ಬಳ್ಳಾರಿ ವಲಯ ಎಸ್ಪಿ ಹರಿಬಾಬು, ಡಿಎಸ್ಪಿ ಶಿವಕುಮಾರ ಹಾಗೂ ಇನ್ಸಪೆಕ್ಟರ್ ಆಂಜನೇಯ ನೇತೃತ್ವದಲ್ಲಿ ದಾಳಿ ನಡೆಸಿ ವೈದ್ಯ ಡಾ.ಸಲಾವುದ್ದೀನ್ ಹಾಗೂ ವಿರೇಶ ಬಾರಕೇರ ಇವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ದಾಳಿಯ ಸಂದರ್ಭದಲ್ಲಿ ಇನ್ಸಪೆಕ್ಟರ್ ಶಿವರಾಜ್ ಇಂಗಳೆ, ಸಿಬ್ಬಂದಿಗಳಾದ ಸಿದ್ದಯ್ಯ, ರಂಗನಾಥ, ಜಗದೀಶ, ಗಣೇಶಗೌಡ, ಸವಿತಾ ಸಜ್ಜನ್, ಆನಂದ ಬಸ್ತಿ, ಯಮುನಾನಾಯಕ್ ಇದ್ದರು.

 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗಪ್ಪ ಇವರನ್ನು ಡಿಸ್ಚಾರ್ಜ್ ಮಾಡಲು ಕೇಳಿಕೊಂಡಾಗ ಬಾಕಿ ಉಳಿದ 6000/- ರೂಪಾಯಿ ಹಣ ಕೊಡು ಎಂದು ವೈದ್ಯರಾದ ಡಾ: ಸಲಾವುದ್ದಿನ್ ಇವರು ಒತ್ತಾಯಿಸಿರುತ್ತಾರೆ. ಇಂದು ದಿ: 22-01-2022 ರಂದು ಬಾಕಿ ಉಳಿದ 6000/- ಲಂಚದ ಹಣವನ್ನು ಡಾ: ಸಲಾವುದ್ದಿನ್  ಇವರ ಸೂಚನೆಯಂತೆ ಗ್ರೂಪ್ ಡಿ ನೌಕರರಾದ ವೀರೇಶ್ ಬಾರಕೇರ ಇವರು ಪಡೆದುಕೊಂಡು ಕೊಪ್ಪಳ ACB ಬಲೆಗೆ ಬಿದ್ದಿರುತ್ತಾರೆ.

click me!