ಚಾಲಕ ಲಾರಿಯಲ್ಲಿ ಮಲಗಿದ್ದಾಗಲೇ ಟೈಯರ್ ಕದಿಯುತ್ತಿದ್ದ ಖತರ್ನಾಕ್ ಗ್ಯಾಂಗ್ ಸೆರೆ

By Ravi JanekalFirst Published Sep 18, 2022, 3:43 PM IST
Highlights

ಚಾಲಕರು ಲಾರಿಯಲ್ಲಿ ಮಲಗಿದ್ದಾಗಲೇ, ಟಯರ್ ಎಗರಿಸಿಕೊಂಡು ಹೋಗುವ, ದರೋಡೆ ಗ್ಯಾಂಗ್‌ನ್ನು ಉಡುಪಿ ಜಿಲ್ಲೆ, ಬೈಂದೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾತ್ರಿ ವಿಶ್ರಾಂತಿಗೆ ಲಾರಿ ನಿಲ್ಲಿಸಿ ಚಾಲಕ ಒಳಗಡೆ ಮಲಗಿದ್ದರೆ, ಆತನ ಅರಿವಿಗೆ ಬಾರದಂತೆ ಲಾರಿಯ ಟೈರುಗಳನ್ನು ಈ ಗ್ಯಾಂಗ್ ಕದಿಯುತ್ತಿದ್ದರು.

ವರದಿ-ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಸೆ.18) : ಚಾಲಕರು ಲಾರಿಯಲ್ಲಿ ಮಲಗಿದ್ದಾಗಲೇ, ಟಯರ್ ಎಗರಿಸಿಕೊಂಡು ಹೋಗುವ, ದರೋಡೆ ಗ್ಯಾಂಗ್‌ನ್ನು ಉಡುಪಿ ಜಿಲ್ಲೆ, ಬೈಂದೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾತ್ರಿ ವಿಶ್ರಾಂತಿಗೆ ಲಾರಿ ನಿಲ್ಲಿಸಿ ಚಾಲಕ ಒಳಗಡೆ ಮಲಗಿದ್ದರೆ, ಆತನ ಅರಿವಿಗೆ ಬಾರದಂತೆ ಲಾರಿಯ ಟೈರುಗಳನ್ನು ಈ ಗ್ಯಾಂಗ್ ಕದ್ದು ಕೊಂಡೊಯ್ಯುತ್ತಿತ್ತು.

ಬೈಕ್‌ ಕಳ್ಳರ ಜಾಲ ಭೇದಿಸಿದ ರಾಯಚೂರು ಪೊಲೀಸ್ರು, ಖದೀಮರ ಖತರ್ನಾಕ್ ಐಡಿಯಾ ಕೇಳಿ ಪೊಲೀಸರೇ ಶಾಕ್

ದರೋಡೆ ಗ್ಯಾಂಗ್ ಪತ್ತೆಯಾಗಿದ್ದು ಹೇಗೆ ಗೊತ್ತಾ?: ಉಡುಪಿ(udupi) ಮತ್ತು ಉತ್ತರ ಕನ್ನಡ(Uttara Kannada) ಜಿಲ್ಲೆಯ ಗಡಿಭಾಗದಲ್ಲಿರುವ ಶ್ರೀರೂರು ಟೋಲ್ ಪ್ಲಾಜಾ(Shriruru Toll Plaz) ಬಳಿ ಈ ಗ್ಯಾಂಗ್ ತಮ್ಮ ಕೈಚಳಕ ತೋರಿಸಿತ್ತು. ರಾತ್ರಿ ವಿಶ್ರಾಂತಿಗೆ ನಿಲ್ಲಿಸಿದ್ದ ಹೊಚ್ಚ ಹೊಸ ಲಾರಿಯ ಟೈಯರ್ ಗಳು ಕಳ್ಳತನವಾಗಿತ್ತು. ಚಾಲಕರು ನಿದ್ರೆಯಲ್ಲಿದ್ದಾಗ ರಿಮ್ ಡಿಸ್ಕ್ ಸಹಿತ ಐದು ಟೈರುಗಳನ್ನು ಕಳುವು ಮಾಡಲಾಗಿತ್ತು.

ನಾಲ್ಕು ಚಕ್ರ ಮತ್ತು ಒಂದು ಸ್ಪೇರ್ ಟಯರ್ ನ್ನು ಕಳ್ಳರು ದೋಚಿದ್ದರು. ಮರದ ತುಂಡೊಂದನ್ನು ಜಾಕ್ ನಂತೆ ಇಟ್ಟು ಈ ಕೃತ್ಯ ಎಸೆಗಲಾಗಿತ್ತು. ಅಂಕೋಲ(Ankola)ದಿಂದ ಮಂಗಳೂರು(Mangaluru) ಕಡೆಗೆ ಈ ಲಾರಿ ಹೋಗುತ್ತಿದ್ದು, ವಿಶ್ರಾಂತಿಯ ಸಲುವಾಗಿ ಟೋಲ್ ಪ್ಲಾಜಾ ಬಳಿ ನಿಲ್ಲಿಸಲಾಗಿತ್ತು. 

ಈ ಹೊಚ್ಚ ಹೊಸ ಲಾರಿಯನ್ನು ಖರೀದಿ ಮಾಡಿ ಕೇವಲ ಎರಡನೇ ಟ್ರಿಪ್ ಓಡಿಸಲಾಗುತ್ತಿತ್ತು. 50 ಲಕ್ಷ ರೂಪಾಯಿ ಸಾಲ ಮಾಡಿ, ಕಷ್ಟಪಟ್ಟು ಮಾಲಕ ಈ ಲಾರಿ ಖರೀದಿ ಮಾಡಿದ್ದ. ಅಷ್ಟರಲ್ಲಿ ದರೋಡೆಕೋರರ ಗ್ಯಾಂಗ್ ಟಯರ್ ಕಳ್ಳತನ ಮಾಡಿದ್ದರಿಂದ, ಸುಮಾರು ಮೂರು ಲಕ್ಷ ರೂಪಾಯಿ ನಷ್ಟ ಉಂಟಾಗಿತ್ತು.

ಶಹಬ್ಬಾಸ್ ಬೈಂದೂರು ಪೊಲೀಸ್: ಕಳುವು ನಡೆದು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಪರಿಸರದ ಸಿಸಿಟಿವಿ ಫೂಟೇಜ್(CCTV footage) ಆಧಾರದಲ್ಲಿ ಬೈಂದೂರು ಪೊಲೀಸ(Byndur Police)ರು ತನಿಖೆ ಆರಂಭಿಸಿದ್ದರು. ಇದೀಗ ಮಹಾರಾಷ್ಟ್ರ(Maharashtra) ಮೂಲದ ಆರೋಪಿಗಳು ಸೆರೆಯಾಗಿದ್ದಾರೆ. ಆರೋಪಿಗಳನ್ನು ಶಾಮ ಶಂಕರ ಶಿಂಧೆ(Ramashankar shindhe), ಆಕಾಶ್ ಬಪ್ಪ ಶಿಂಧೆ(Akash bappa shindhe), ಅಮುಲ್ ರಾಮ ಕಾಳೆ ಎಂದು ಗುರುತಿಸಲಾಗಿದೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜ್ಯದ ಮೂಲೆ ಮೂಲೆಗಳಿಂದ ಬೈಂದೂರು ಪೊಲೀಸರಿಗೆ ಕರೆ ಬರುತ್ತಿದೆ. ಇದೇ ಮಾದರಿಯ ಅನೇಕ ಪ್ರಕರಣಗಳು ರಾಜ್ಯದ ಚಿತ್ರದುರ್ಗ(Chitradurga) ಮೈಸೂರು(Mysuru), ಮಂಗಳೂರು(Mangaluru) ಭಾಗದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಆದರೆ ಟೈಯರ್ ಕಳ್ಳತನ ಅತ್ಯಂತ ಕ್ಷುಲ್ಲಕ ಪ್ರಕರಣವೆಂದು ಪರಿಗಣಿಸಿ ಯಾರೂ ಬೆನ್ನು ಹತ್ತಿರಲಿಲ್ಲ. ಆದರೆ ಉಡುಪಿ ಜಿಲ್ಲೆಯ ಬೈಂದೂರು ಪೊಲೀಸರ ಈ ಕಾರ್ಯಾಚರಣೆ ಯಿಂದ ಇನ್ನು ಅನೇಕ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಹಾಗಾಗಿ ಬೈಂದೂರು ಪೊಲೀಸರ ಸಕಾಲಿಕ ಕಾರ್ಯಾಚರಣೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಟೈಯರ್ ಕಳ್ಳತನದ ಹಿಂದಿನ ಕಥೆ: ಬಂಧಿತ ಆರೋಪಿಗಳು ಮಹಾರಾಷ್ಟ್ರ(Maharashtra) ಮೂಲದವರು. ಈ ಮೂವರು ಕೂಡ ಗೂಡ್ಸ್ ಲಾರಿಯಲ್ಲೇ ಕೆಲಸ ಮಾಡುವವರು. ಲಾರಿ ಚಾಲಕ, ಕ್ಲೀನರ್ ಹೀಗೆ ಬೇರೆ ಬೇರೆ ಕೆಲಸ ಮಾಡಿಕೊಂಡಿದ್ದರು. ಈ ರೀತಿ ನಿಲ್ಲಿಸಿದ ಲಾರಿಗಳಿಂದ ರಾತ್ರಿ ವೇಳೆ ಟೈಯರ್ ಕದಿಯೋದೇ ಇವರ ಹವ್ಯಾಸ. ಹೀಗೆ ಕದ್ದ ಟೈರುಗಳನ್ನು ಮಹಾರಾಷ್ಟ್ರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಹೊಸ ಹೊಸ ಟೈರ್ ಗಳನ್ನು ಕದ್ದು ಮಾರುತ್ತಿದ್ದುದರಿಂದ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತಿತ್ತು.

ಪುಟ್ಟೇನಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ, 51 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ಅರೆಸ್ಟ್

ಚಾಲಕ ಲಾರಿಯೊಳಗೆ ಮಲಗಿದ್ದರೂ , ಆತನ ಅರಿವಿಗೆ ಬಾರದಂತೆ ಎಗರಿಸುವುದರಲ್ಲಿ ಈ ತಂಡ ಯಶಸ್ವಿಯಾಗಿತ್ತು. ಯಾವುದೋ ಸ್ಪ್ರೇಯಿಂದ ನಿದ್ರೆಗೆ ಜಾರುವಂತೆ ಮಾಡಿ ಈ ಕೃತ್ಯ ಎಸಗುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಯಾವುದೇ ಸ್ಪ್ರೇ ಇಲ್ಲದೆ ಕೇವಲ ಜಾಕ್ ಬಳಸಿ ಮರದ ತುಂಡು ಇಟ್ಟು ಟೈಯರ್ ಎಗರಿಸುವುದರಲ್ಲಿ ಈ  ಕಳ್ಳರು ಚಾಕಚಕ್ಯತೆ ಹೊಂದಿದ್ದರು. ಇದೀಗ ಆರೋಪಿಗಳು ಸೆರೆಯಾಗಿದ್ದಾರೆ ಇನ್ನು ಇಂತಹ ಹತ್ತಾರು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.

click me!