Chikkamagaluru: ಅಪ್ರಾಪ್ತ ಯುವತಿ ಆತ್ಮಹತ್ಯೆ ಪ್ರಕರಣ, ಆರೋಪಿ ಬಿಜೆಪಿ ಕಾರ್ಯಕರ್ತ ನಿತೇಶ್ ಬಂಧನ

By Suvarna NewsFirst Published Jan 17, 2023, 6:43 PM IST
Highlights

ಮಲೆನಾಡಿನ ವಿದ್ಯಾರ್ಥಿನಿ ಆತ್ಮಹತ್ಯೆಗೆ ಪ್ರಮುಖ ಕಾರಣಕರ್ತನಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕುದುರೆಮುಖ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಜ.17): ಮಲೆನಾಡಿನ ವಿದ್ಯಾರ್ಥಿನಿ ಆತ್ಮಹತ್ಯೆಗೆ ಪ್ರಮುಖ ಕಾರಣಕರ್ತನಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕುದುರೆಮುಖ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನಿತೇಶ್ ನನ್ನು ಚಿಕ್ಕಮಗಳೂರಿನಲ್ಲಿ  ಪೊಲೀಸರು ಬಂಧಿಸಿದ್ದಾರೆ. ಇಂದು ಮಧ್ಯಾಹ್ನ ಕುದುರೆಮುಖ  ಸರ್ಕಲ್ ಇನ್ಸ್ ಪೆಕ್ಟರ್ ರಮೇಶ್ ನೇತೃತ್ವದಲ್ಲಿ  ಆರೋಪಿಯನ್ನು ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ಬಂಧಿಸಲಾಗಿದೆ. ತನ್ನ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ನಿತೀಶ್ ಗ್ರಾಮದಿಂದ ನಾಪತ್ತೆಯಾಗಿದ್ದ. ಬಂಧನ ಬೀತಿ ಎದುರಿಸುತ್ತಿದ್ದ ನಿತೇಶ್  ಚಲನವಲನದ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಬಲೆಬೀಸಿ ಬಂಧಿಸಿದ್ದಾರೆ.

ಪ್ರೇಮವೈಫಲ್ಯದಿಂದ ವಿದ್ಯಾರ್ಥಿನಿ ಆತ್ಮಹತ್ಯೆ:
ಜನವರಿ 10 ರಂದು ತನ್ಮ ಮನೆಯಲ್ಲಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ   ಸಂಸೆ ಸಮೀಪದ ಜೋಗಿಕುಂಬ್ರಿ ಗ್ರಾಮದ ಚನ್ನಪ್ಪಗೌಡ ಎಂಬುವವರ ಮಗಳು 17 ವರ್ಷದ ದೀಪ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಳು.ದೀಪ್ತಿ ಡೆತ್ ನೋಟ್ ನಲ್ಲಿ ಸ್ಥಳೀಯ ಬಜರಂಗದಳದ ಸಂಯೋಜಕನಾಗಿದ್ದ ನಿತೇಶ್ ಕಾರ್ಗದ್ದೆ ಹೆಸರು ಬರೆದಿದ್ದಳು. ನಿತೀಶ್ ಡಿಪಿ ಇಬ್ಬರೂ ಕೂಡ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ನಡುವೆ ಉಂಟಾದ ಮನಸ್ತಾಪದಿಂದ ದೀಪ್ತಿ ಕಳೆನಾಶಕ ಔಷಧಿ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದಳು.

ಚಿಕ್ಕಮಗಳೂರು: ಬಿಜೆಪಿ ಕಾರ್ಯಕರ್ತನ ಕಿರುಕುಳಕ್ಕೆ ಅಪ್ರಾಪ್ತ ಬಾಲಕಿ ಬಲಿ

ಈ ಸಂಬಂಧ ಮೃತಳ ಪೋಷಕರು ಆರೋಪಿ ವಿರುದ್ಧ ಕುದುರೆಮುಖ ಪೊಲೀಸರಿಗೆ ದೂರು ನೀಡಲು ಮುಂದಾದ ಸಂದರ್ಭದಲ್ಲಿ ಕುದುರೆಮುಖ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದರು. ಆಕ್ರೋಶಗೊಂಡ ಪೋಷಕರು ಕುದುರೆಮುಖ ಪೊಲೀಸರ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿದ್ದರು. ಎಸ್ ಪಿ ಉಮಾ ಪ್ರಶಾಂತ್ ಕುದುರೆಮುಖ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಬಳಿಕ ಆರೋಪಿ ನಿತೇಶ್ ವಿರುದ್ಧ  ಪ್ರಕರಣವನ್ನು ಕುದುರೆಮುಖ ಪೊಲೀಸರು ದಾಖಲು ಮಾಡಿಕೊಂಡಿದ್ದರು. ಈ ಸಂಬಂಧ ಕುದುರೆಮುಖ ಠಾಣೆಯಲ್ಲಿ ನಿತೇಶ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

KOPPAL NEWS: ಜೂಜುಕೋರರನ್ನು ಬಿಟ್ಟು ಕೋಳಿಗಳನ್ನು ಬಂಧಿಸಿದ ಪೊಲೀಸರು!

ಈ ಪ್ರಕರಣ ಕಳಸ ಸುತ್ತಮುತ್ತ ತೀವ್ರ ಜನಾಕ್ರೋಶಕ್ಕೆ ಕಾರಣವಾಗಿತ್ತು. ನಿತೇಶ್ ನನ್ನು ಬಜರಂಗದಳದಿಂದ ಹೊರಹಾಕಲಾಗಿತ್ತು. ಅಪ್ರಾಪ್ತ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿ ವಂಚಿಸಿ ಆಕೆಯ ಸಾವಿಗೆ ಕಾರಣನಾದ ನಿತೇಶ್ ನನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಜನರು ಒತ್ತಾಯಿಸಿದ್ದರು.ಇದೀಗ ಪೊಲೀಸರು ನಿತೇಶ್ ನನ್ನು ಚಿಕ್ಕಮಗಳೂರಿನಲ್ಲಿ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

click me!