ತಿರುವನಂತಪುರ: ತನ್ನನ್ನು ಬಂಧಿಸಲು ಬಂದ ಪೊಲೀಸರ ಕಾಣುತ್ತಿದ್ದಂತೆ ಚೀಲದಲ್ಲಿದ್ದ ಮಚ್ಚು ತೆಗೆದು ಹಲ್ಲೆಗೆ ಯತ್ನಿಸಿದ ವ್ಯಕ್ತಿಯೊಂದಿಗೆ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ಧೈರ್ಯವಾಗಿ ಬರಿಗೈಲಿ ಹೋರಾಡಿ ಆತನನ್ನು ನೆಲಕ್ಕೆ ಕೆಡಹುವಲ್ಲಿ ಯಶಸ್ವಿಯಾಗಿದ್ದು, ಸಾಹಸ ಮೆರೆದ ಪೊಲೀಸ್ ಅಧಿಕಾರಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಸಾಹಸ ಮೆರೆದ ಪೊಲೀಸ್ ಅಧಿಕಾರಿಗೆ ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಕೇರಳದ ಅಲಪ್ಪುಳ (Alappuzha) ಜಿಲ್ಲೆಯ ನೂರನಾಡ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಆಗಿರುವ 37 ವರ್ಷದ ವಿ ಆರ್ ಅರುಣ್ ಕುಮಾರ್ ಎಂಬುವವರೇ ಹೀಗೆ ಸಾಹಸ ಮೆರೆದ ಪೊಲೀಸ್ ಅಧಿಕಾರಿ. ಅವರು ಪೊಲೀಸ್ ವ್ಯಾನ್ನಲ್ಲಿ ಚಾಲಕನೊಂದಿಗೆ ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಗಸ್ತು ತಿರುಗುತ್ತಿದ್ದಾಗ ತಮಗೆ ಪ್ರಕರಣವೊಂದರಲ್ಲಿ ಬೇಕಾಗಿದ್ದ ಶಂಕಿತನನ್ನು ನೋಡಿದರು. ಈ ವೇಳೆ ಶಂಕಿತ 48 ವರ್ಷ ಪ್ರಾಯದ ಸುಗತನ್ (Sugathan) ರಸ್ತೆ ಬದಿ ಸ್ಕೂಟರ್ ನಿಲ್ಲಿಸಿ ಹಿಂದೆ ತಿರುಗಬೇಕಾದರೆ ಪೊಲೀಸ್ ಗಾಡಿ ತನ್ನ ಸ್ಕೂಟರ್ ಬಳಿಯೇ ಬಂದು ನಿಂತಿದ್ದನ್ನು ನೋಡಿದ್ದಾನೆ. ನಿಂತ ಗಾಡಿಯಿಂದ ಇನ್ಸ್ಪೆಕ್ಟರ್ ಕೆಳಗೆ ಇಳಿಯುತ್ತಿದ್ದಂತೆ ಎಚ್ಚೆತ್ತ ಆರೋಪಿ ಕೂಡಲೇ ತನ್ನ ಸ್ಕೂಟರ್ನಲ್ಲಿದ್ದ ಮಚ್ಚನ್ನು ತೆಗೆದು ಪೊಲೀಸ್ ಇನ್ಸ್ಪೆಕ್ಟರ್ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾನೆ.
ಆರೋಪಿ ಬಳಿ ಮಾರಕಾಸ್ತ್ರಗಳಿದ್ದರೂ ಸ್ವಲ್ಪವೂ ಅಂಜದೇ ಧೈರ್ಯವಾಗಿ ಆತನೊಂದಿಗೆ ಹೋರಾಡಿದ ಇನ್ಸ್ಪೆಕ್ಟರ್ ವಿ ಆರ್ ಅರುಣ್ ಕುಮಾರ್ ಮೊದಲಿಗೆ ತಾವು ನೆಲಕ್ಕೆ ಬಿದ್ದರು ಬಳಿಕ ಆತನನ್ನು ನೆಲಕ್ಕೆ ಕೆಡೆವುವಲ್ಲಿ ಯಶಸ್ವಿಯಾಗುತ್ತಾರೆ. ಇನ್ಸ್ಪೆಕ್ಟರ್ ಕತ್ತಿನ ಮೇಲೆ ಮಚ್ಚು ಜಳಪಿಸಲು ಮುಂದಾದ ಆರೋಪಿಯ ಮಚ್ಚನ್ನು ಮೊದಲಿಗೆ ಹಿಡಿತಕ್ಕೆ ಪಡೆದ ಇನ್ಸ್ಪೆಕ್ಟರ್ ನಂತರ ಆತನನ್ನು ನೆಲಕ್ಕೆ ಕೆಡವುದಲ್ಲಿ ಯಶಸ್ವಿಯಾಗುತ್ತಾರೆ. ನಂತರ ಆತನ ಕೈಯಲ್ಲಿದ್ದ ಮಚ್ಚನ್ನು ವಶಕ್ಕೆ ಪಡೆಯುತ್ತಾರೆ.
ಅನಾಥ ವೃದ್ಧೆಗೆ 'ಮಗ'ನಾಗಿ ಕೈತುತ್ತು ತಿನ್ನಿಸಿದ ಪೊಲೀಸ್ ಅಧಿಕಾರಿ!
ನಂತರ ಪೊಲೀಸ್ ವ್ಯಾನ್ ಚಾಲಕ ಹಾಗೂ ಕೆಲ ಸ್ಥಳೀಯರು ಅಲ್ಲಿಗೆ ಬಂದು ಆತನನ್ನು ಹಿಡಿದು ಪೊಲೀಸ್ ವಾಹನದೊಳಗೆ ತೂರಿಸುವಲ್ಲಿ ಯಶಸ್ವಿಯಾಗುತ್ತಾರೆ. ಈ ಹೊಡೆದಾಟದ ವೇಳೆ ಅರುಣ್ಕುಮಾರ್ ಅವರ ಕೈ ಬೆರಳುಗಳಿಗೆ ಗಾಯಗಳಾಗಿದ್ದು ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಅವರ ಕೈಗಳಿಗೆ ಏಳು ಹೊಲಿಗೆಗಳನ್ನು ಹಾಕಿಸಲಾಗಿತ್ತು. ಪೊಲೀಸ್ ಅಧಿಕಾರಿಯ ಸಾಹಸದ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಕೇರಳ ಪೊಲೀಸರು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ತೆಲಂಗಾಣ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಮಹಿಳಾ ಸುರಕ್ಷತೆ) (Telangana Additional Director-General of Police) ಸ್ವಾತಿ ಲಾಕ್ರಾ (Swati Lakra) ಅವರು ಕೂಡ ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. 'ನಿಜವಾದ ಹೀರೋ ಹೇಗೆ ಕಾಣುತ್ತಾರೆ' ಎಂದು ಅವರು ಬರೆದು ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಅಪಘಾತದಲ್ಲಿ ಗಾಯಗೊಂಡು ಮಂಗನ ನರಳಾಟ: ಕೋತಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಪೊಲೀಸ್
ಹೀಗೆ ಸಾಹಸ ಮೆರೆದ ಅರುಣ್ ಕುಮಾರ್ (Arun Kumar) ವರ್ಷಕ್ಕೂ ಮೊದಲು ನೂರನಾಡ್ (Nooranad) ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ