ಮದುವೆ ಸಮಾರಂಭಗಳೇ ಖದೀಮನ ಟಾರ್ಗೆಟ್; ಎರಡೇ ಎರಡು ಮದುವೆಯಲ್ಲಿ ಚಿನ್ನಾಭರಣ ಎಗರಿಸಿದ್ದು ಎಷ್ಟು ಗೊತ್ತಾ?

By Ravi JanekalFirst Published May 4, 2024, 11:07 AM IST
Highlights

ನಗರದ ಟಿಳಕವಾಡಿ ಮಹಾವೀರ್ ಭವನ ಹಾಗೂ ಸಿಟಿ ಹಾಲ್‌ ಮದುವೆ ಸಮಾರಂಭಗಳಲ್ಲಿ ನಡೆದಿದ್ದ ಚಿನ್ನಾಭರಣ ಕಳುವು ಪ್ರಕರಣ ಬೇಧಿಸಿರುವ ಟಿಳಕವಾಡಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಬೆಳಗಾವಿ(ಮೇ.4): ನಗರದ ಟಿಳಕವಾಡಿ ಮಹಾವೀರ್ ಭವನ ಹಾಗೂ ಸಿಟಿ ಹಾಲ್‌ ಮದುವೆ ಸಮಾರಂಭಗಳಲ್ಲಿ ನಡೆದಿದ್ದ ಚಿನ್ನಾಭರಣ ಕಳುವು ಪ್ರಕರಣ ಬೇಧಿಸಿರುವ ಟಿಳಕವಾಡಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಸೊಹೈಲ್ ಮೌಲಾ ತಾಶಾವಾಲೆ(26) ಬಂಧಿತ ಆರೋಪಿ. ಬಂಧಿತನಿಂದ ಬರೋಬ್ಬರಿ ₹ 4.1ಲಕ್ಷ ಮೌಲ್ಯದ  58.4 ಗ್ರಾಂ  ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಆರೋಪಿ ಇಲ್ಲಿನ ಉಜ್ವಲನಗರದ ನಿವಾಸಿಯಾಗಿದ್ದು, ಕಳೆದ ತಿಂಗಳು ಏ.13 ರಂದು ಟಿಳಕವಾಡಿ ಮಹಾವೀರ್ ಭವನ ಹಾಗೂ ಏ.21 ರಂದು ಸಿಟಿ ಹಾಲ್‌ನಲ್ಲಿ ನಡೆದಿದ್ದ ಮದುವೆ ಸಮಾರಂಭಗಳಲ್ಲಿ ಅತಿಥಿಗಳಂತೆ ಒಳನುಗ್ಗಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಆರೋಪಿ. 

ಬೆಂಗಳೂರು: ಮನೆಗಳ್ಳನ ಬಂಧನ: ₹13 ಲಕ್ಷದ ಚಿನ್ನಾಭರಣ ಜಪ್ತಿ

ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಟಿಳಕವಾಡಿ ಪೊಲೀಸರು ಖದೀಮನ ಪತ್ತೆ ಕಾರ್ಯ ನಡೆಸಿದ್ದರು. ಮದುವೆ ಸಮಾರಂಭ ನಡೆದ ಸ್ಥಳದಲ್ಲಿನ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲಿಸಿ ಖದೀಮನ ಬೆನ್ನು ಬಿದ್ದಿದ್ದ ಪೊಲೀಸರು. ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು. ಸದ್ಯ ಆರೋಪಿಯನ್ನು ಬಂಧಿಸಿ ಇತರೆಡೆ ನಡೆದ ಕಳ್ಳತನ ಪ್ರಕರಣಗಳಲ್ಲೂ ಖದೀಮನ ಕೈವಾಡ ಇದೆಯೇ ಈ ಎಲ್ಲ ಆಯಾಮಗಳಲ್ಲಿ ವಿಚಾರಣೆ ನಡೆಸಲಿದ್ದಾರೆ.

ವೈನ್ಸ್ ಅಂಗಡಿ ಶಟರ್ಸ್ ಮುರಿದು ಕಳುವು:

ಶಿರಸಿ: ನಗರದ ಕರಿಗುಂಡಿ ರಸ್ತೆಯಲ್ಲಿರುವ ಕ್ವಾಲಿಟಿ ವೈನ್ಸ್‌ ಅಂಗಡಿಯ ಶಟರ್ಸ್ ಮುರಿದು ಒಳನುಗ್ಗಿದ ಕಳ್ಳರು ₹೬೦ ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.

ಯಾರೋ ಕಳ್ಳರು ಮೇ ೨ರಂದು ರಾತ್ರಿ ೧೦.೩೦ ಗಂಟೆಯಿಂದ ಮೇ ೩ರಂದು ಬೆಳಗ್ಗೆ ೮.೫೦ ಗಂಟೆ ನಡುವಿನ ಅವಧಿಯಲ್ಲಿ ಕ್ವಾಲಿಟಿ ವೈನ್ಸ್‌ನ ಶಟರ್ಸ್‌ನ ಚಾವಿಯನ್ನು ಗಟ್ಟಿಯಾದ ವಸ್ತುವಿನಿಂದ ಮೀಟಿ ತೆಗೆದು ಒಳ ನುಗ್ಗಿ, ಕ್ಯಾಶ್‌ ಕೌಂಟರ್‌ನಲ್ಲಿದ್ದ ₹೬೦ ಸಾವಿರಗಳನ್ನು ಕಳ್ಳತನ ಮಾಡಿದ್ದಾರೆ ಎಂದು ವೈನ್ಸ್‌ನ ಮ್ಯಾನೇಜರ್ ಸಂಕೇತ ಪೂಜಾರಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿ ಕ್ಯಾಮೆರಾ ಪರಿಶೀಲಿಸಿ, ಕಳ್ಳರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

click me!