ಬೆಂಗ್ಳೂರಲ್ಲಿ ಇರಾನಿ ಸರಗಳ್ಳರ ಗ್ಯಾಂಗ್..! 1 ಕೆ.ಜಿ. ಚಿನ್ನಾಭರಣ ವಶ

By Kannadaprabha NewsFirst Published Dec 30, 2020, 7:29 AM IST
Highlights

ನಗರದಲ್ಲಿ ಸರಗಳ್ಳನ ಮಾಡಿದ್ದ ಇರಾನಿ | ಗ್ಯಾಂಗ್‌ ಕಳ್ಳರು ಧಾರವಾಡದಲ್ಲಿ ಸೆರೆ | ಮಾಗಡಿ ರಸ್ತೆ ಪೊಲೀಸರ ಕಾರಾರ‍ಯಚರಣೆ | 1 ಕೆ.ಜಿ. ಚಿನ್ನಾಭರಣ ವಶ

ಬೆಂಗಳೂರು(ಡಿ.30): ಸರಗಳ್ಳತನ ಮೂಲಕ ನಗರದ ನಾಗರಿಕರಲ್ಲಿ ಭೀತಿ ಮೂಡಿಸಿದ್ದ ಇರಾನಿ ಗ್ಯಾಂಗ್‌ನ ಮೂವರನ್ನು ಧಾರವಾಡದಲ್ಲಿ ಸೆರೆ ಹಿಡಿದ ಮಾಗಡಿ ರಸ್ತೆ ಠಾಣೆ ಪೊಲೀಸರು, ಒಂದು ಕೆ.ಜಿ. ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ.

ಧಾರವಾಡದ ಸಲೀಂ ಇರಾನಿ, ಅಜಾದ್‌ ಇರಾನಿ ಹಾಗೂ ಅವ್ನೂ ಇರಾನಿ ಬಂಧಿತರಾಗಿದ್ದು, ಆರೋಪಿಗಳಿಂದ .50 ಲಕ್ಷ ಮೌಲ್ಯದ 1 ಕೆ.ಜಿ. 20 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ನಗರದಲ್ಲಿ ನಡೆದಿದ್ದ ಸರಗಳ್ಳತನ ಕೃತ್ಯಗಳಲ್ಲಿ ಸಲೀಂ ತಂಡ ಪಾಲ್ಗೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ವಿಜಯನಗರ ಉಪ ವಿಭಾಗದ ಎಸಿಪಿ ನಂಜುಂಡೇಗೌಡ ನೇತೃತ್ವದ ತಂಡ ಬಂಧಿಸಿದೆ ಎಂದು ಆಯುಕ್ತ ಕಮಲ್‌ ಪಂತ್‌ ತಿಳಿಸಿದ್ದಾರೆ.

ತರಕಾರಿಗಳ ಮಧ್ಯೆ ಡಗ್ಸ್‌ ಇಟ್ಟು ಸಾಗಾಟ!

ಆರೋಪಿಗಳು ವೃತ್ತಿಪರ ಸರಗಳ್ಳರಾಗಿದ್ದು, ಸಲೀಂ ಇರಾನಿ ವಿರುದ್ಧ ಆಂಧ್ರಪ್ರದೇಶದ ಗುಂಟೂರು ಮತ್ತು ಧಾರವಾಡದಲ್ಲಿ ಪ್ರಕರಣಗಳು ದಾಖಲಾಗಿವೆ. ಇವರ ಬಂಧನದಿಂದ ಮಾಗಡಿ, ಬ್ಯಾಡರಹಳ್ಳಿ, ಚಂದ್ರಾ ಲೇಔಟ್‌, ವಿಜಯನಗರ, ಜ್ಞಾನಭಾರತಿ, ಕಾಟನ್‌ಪೇಟೆ, ರಾಮಮೂರ್ತಿ ನಗರ, ಯಲಹಂಕ, ಹೆಣ್ಣೂರು, ಸುಬ್ರಹ್ಮಣ್ಯ ನಗರ ಸೇರಿದಂತೆ ಇತರೆ ಠಾಣೆಗಳಲ್ಲಿ ದಾಖಲಾಗಿದ್ದ 27 ಪ್ರಕರಣಗಳು ಪತ್ತೆಯಾಗಿವೆ. ತನಿಖಾ ತಂಡಕ್ಕೆ ನಗರ ಪೊಲೀಸ್‌ ಆಯುಕ್ತರು .50 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.

ಮಗ ಕದ್ದ ಒಡವೆ ಮಾರುತ್ತಿದ್ದ ತಾಯಿ

ಸರಗಳ್ಳತನ ಮಾಡಿ ಮಕ್ಕಳು ತರುತ್ತಿದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಲು ನೆರವು ನೀಡಿದ ತಪ್ಪಿಗೆ ಆರೋಪಿ ತಾಯಿ ಸೇರಿದಂತೆ ಮೂವರು ಮಹಿಳೆಯರು ಜೈಲು ಸೇರುವಂತಾಗಿದೆ.

ಆರೋಪಿ ಅವ್ನೂ ಇರಾನಿ ತಾಯಿ ಭಾನು ಇರಾನಿ, ಫಾತಿಮಾ ಅತ್ತಾರ್‌, ಗುಲ್ಜಾರ್‌ ಬೇಗಂ ಬಂಧಿತರು. ಕಳವು ಆಭರಣಗಳನ್ನು ಈ ಮಹಿಳೆಯರ ಮೂಲಕ ಆರೋಪಿಗಳು ವಿಲೇವಾರಿ ಮಾಡಿಸಿ ಹಣ ಸಂಪಾದಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರ ಮೇಲೆ ಹಲ್ಲೆ

ಸರಗಳ್ಳತನ ಪ್ರಕರಣ ಸಂಬಂಧ ಇರಾನಿ ಗ್ಯಾಂಗ್‌ ತಂಡದ ಸದಸ್ಯರನ್ನು ಬಂಧಿಸಲು ತೆರಳಿದ್ದಾಗ ಮಾಗಡಿ ರಸ್ತೆ ಪೊಲೀಸರ ಮೇಲೆ ಧಾರವಾಡದಲ್ಲಿ ಆರೋಪಿಗಳ ಸಂಬಂಧಿಕರು ಹಾಗೂ ಕುಟುಂಬ ಸದಸ್ಯರು ಹಲ್ಲೆ ಸಹ ಮಾಡಿದ್ದರು. ಕೊನೆಗೆ ಸ್ಥಳೀಯ ಪೊಲೀಸರ ನೆರವು ಪಡೆದು ಆರೋಪಿಗಳನ್ನು ಬಂಧಿಸಿ ಕರೆ ತರಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!