
ವರದಿ - ಪುಟ್ಟರಾಜು. ಆರ್.ಸಿ. ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ, (ಏ.23): ಹಣ ಅಂದ್ರೆ ಹೆಣನೂ ಬಾಯಿ ಬಿಡುತ್ತೆ ಅನ್ನೋ ಗಾದೆ ಇದೆ. ಹಣಕ್ಕಾಗಿ ಕೆಲವರು ಮಾಡಬಾರದ್ದೆನ್ನೆಲ್ಲಾ ಮಾಡ್ತಾರೆ. ಹಾಗೇನೆ ಇಲ್ಲೊಬ್ಬ ಯುವಕ ಹಣಕ್ಕಾಗಿ ಮದುವೆಯಾಗಿ ಒಂದು ಹುಡುಗಿಯ ಬಾಳನ್ನೇ ಹಾಳು ಮಾಡಿದ್ದಾನೆ. ಹುಡುಗಿ ಈಗ ತನಗೆ ಹಣ ಬೇಡ, ಮದುವೆಯಾದ ಹುಡುಗನೊಂದಿಗೆ ಬಾಳು ಬೇಕು ಎಂದು ಕಣ್ಣೀರಿಡುತ್ತಿದ್ದಾಳೆ
ಹುಡುಗಿ ಬಳಿ ಲಕ್ಷಾಂತರ ರೂಪಾಯಿ ನಗದು ಹಣ, ಚಿನ್ನದ ಒಡವೆ ಇತ್ತು. ಈಕೆಯ ಹಣದ ಮೇಲೆ ಕಣ್ಣಿಟ್ಟ ಯುವಕನೊಬ್ಬ ಈಕೆಯನ್ನು ಪುಸಲಾಯಿಸಿ ಮದುವೆಯಾಗಿ ಹಣ ಒಡವೆ ಎಲ್ಲವನ್ನು ಲಪಟಾಯಿಸಿ ಕೈ ಕೊಟ್ಟಿದ್ದಾನೆ . ಈಕೆಯ ಹೆಸರು ನದಿಯಾಬಾಯಿ. ತಮಿಳುನಾಡಿನ ತಿರುಪುರು ಬಳಿ ಟಿಶರ್ಟ್ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಈಕೆಯ ತಾಯಿ ರಾಣಿಬಾಯಿ ಕಳೆದ ವರ್ಷ ಅಪಘಾತ ವೊಂದರಲ್ಲಿ ತೀರಿಕೊಂಡು ಈ ಸಂಬಂಧ ರಾಣಿಬಾಯಿ ಕುಟುಂಬಕ್ಕೆ ,12 ಲಕ್ಷ ರೂಪಾಯಿ ಪರಿಹಾರ ಸಿಕ್ಕಿತ್ತು. ಈ ಹಣವೆಲ್ಲಾ ರಾಣಿವಾಯಿ ಮಗಳು ನದಿಯಾಬಾಯಿ ಬಳಿ ಇತ್ತು. ತಾಯಿ ತೀರಿಕೊಂಡ ಮೇಲೆ ತಾಯಿಯ ತವರು ಚಾಮರಾಜನಗರ ತಾಲೋಕಿನ ಮೂಕನಪಾಳ್ಯಕ್ಕೆ ಬಂದಿದ್ದ ನದಿಯಾಬಾಯಿ ಇಲ್ಲಿಯೇ ನೆಲೆಸಿದ್ದಳು.
17 ವರ್ಷದ ಯುವತಿಯ ಮೇಲೆ 12 ವರ್ಷದ ಹುಡುಗನಿಂದ ಅತ್ಯಾಚಾರ, ಮಗುವಿಗೆ ಜನ್ಮ ನೀಡಿದ ಹುಡುಗಿ
ಆದರೆ ತಿರುಪೂರಿನ ಟಿಶರ್ಟ್ ಕಂಪನಿಯಲ್ಲಿ ಕೆಲಸ ಮುಂದುವರಿಸಿದ್ದ ನದಿಯಾಬಾಯಿ ಎರಡು ತಿಂಗಳಿಗೊಮ್ಮೆ ಮೂಕನಪಾಳ್ಯಕ್ಕೆ ಬಂದು ಹೋಗುತ್ತಿದ್ದಳು.ಈಕೆಯ ಬಳಿ ಇದ್ದ ಹಣ ಒಡವೆ ಹಾಗು ಪೂರ್ವಪರ ಎಲ್ಲವನ್ನು ಅರಿತಿದ್ದ ಮೂಕನಪಾಳ್ಯದವನೇ ಆದ ಚಲಪತಿ ಎಂಬ ಯುವಕ ಇನ್ಸ್ಟಾಗ್ರಾಮ್ ನಲ್ಲಿ ಹುಡುಗಿಯನ್ನು ಪರಿಚಯ ಮಾಡಿಕೊಂಡಿದ್ದಾನೆ. ಪರಿಚಯ ಪ್ರೀತಿ ಪ್ರೇಮಕ್ಕೆ ತಿರುಗಿದೆ.ಬಳಿಕ ಯಾರಿಗೂ ತಿಳಿಯದಂತೆ ಮದುವೆಯು ಆಗಿದ್ದಾರೆ.
ಮದುವೆಗೂ ಮೊದಲೆ ಈಕೆಯನ್ನು ಗರ್ಬಿಣಿ ಮಾಡಿ ಅಬಾರ್ಷನ್ ಮಾಡಿಸಿದ್ದ ಎನ್ನಲಾಗಿದೆ. ನದಿಯಾಬಾಯಿಯನ್ನು ಮದುವೆಯಾಗಿ ತನ್ನ ಮನೆಗೆ ಕರೆದೊಯ್ದ ಚಲಪತಿ ಒಂದಷ್ಟು ದಿನ ಚನ್ನಾಗಿ ನೋಡಿಕೊಂಡು ಆಕೆ ಬಳಿ ಇದ್ದ ಹಣ ಒಡವೆ ಲಪಟಾಯಿಸಿದ್ದಾನೆ. ಬಳಿಕ ಇಲ್ಲ ಸಲ್ಲದ ಆರೋಪ ಹೊರಿಸಿ ಕಿರುಕುಳ ನೀಡಿ ಹೆಚ್.ಡಿ.ಕೋಟೆಯಲ್ಲಿರುವ ಈಕೆಯ ಸಂಬಂಧಿಕರ ಮನೆಗೆ ಕರದೊಯ್ದು ಕೈಕೊಟ್ಟಿದ್ದಾನೆ..
ತಾನು ಮೋಸ ಹೋದ ಬಗ್ಗೆ ಅರಿತ ನದಿಯಾಬಾಯಿ, ತನ್ಮ ಸೋದರಮಾವನಿಗೆ ಕರೆ ಮಾಡಿ ಎಲ್ಲ ವಿಷಯ ತಿಳಿಸಿದ್ದಾಳೆ. ಆಕೆಯನ್ನು ಹೆಚ್.ಡಿ.ಕೋಟೆಯಿಂದ ಕರೆತಂದ ಸೋದರಮಾವ ಬಾಲಾಜಿ ನಾಯಕ , ನದಿಯಾಬಾಯಿಗೆ ನ್ಯಾಯ ಕೊಡಿಸುವಂತೆ ಚಾಮರಾಜನಗರದ
ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಯಾವುದೇ ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರು ನೊಂದ ಯುವತಿಗೆ ನ್ಯಾಯ ಕೊಡಿಸುವಲ್ಲಿ ವಿಫಲವಾಗಿದ್ದಾರೆ. ಯುವಕನಿಂದ ಯುವತಿಗೆ ಒಂದಷ್ಟು ಹಣ ಕೊಡಿಸಿ ಕೈತೊಳೆದುಕೊಳ್ಳಲು ಮುಂದಾಗಿದ್ದಾರೆ..
ಯುವಕನಿಗೆ ಬುದ್ದಿವಾದ ಹೇಳಿ ಇಲ್ಲವೇ ಕಾನೂನು ಕ್ರಮ ಕೈಗೊಂಡು ಯುವತಿಗೆ ನ್ಯಾಯ ಕೊಡಿಸಬೇಕಾದ ಪೊಲೀಸರು ಮೋಸ ಹೋಗಿರುವ ಯುವತಿಗೆ ಒಂದಷ್ಟು ಹಣ ಕೊಡಿಸಿ ಇಡೀ ಪ್ರಕರಣಕ್ಕೆ ಇತಿಶ್ರೀ ಹಾಡಲು ಮುಂದಾಗಿರುವುದು ವಿಪರ್ಯಾಸವಾಗಿದೆ. ಪೊಲೀಸರಿಂದ ನ್ಯಾಯ ದೊರೆಯದೆ ಯುವತಿ ಈಗ ದಿಕ್ಕುತೋಚದಂತಾಗಿದ್ದಾಳೆ. ನನಗೆ ಹಣ ಬೇಡ, ಗಂಡನೊಂದಿಗೆ ಬಾಳು ಬೇಕು ಎಂದು ಕಣ್ಣೀರಿಡುತ್ತಿದ್ದಾಳೆ...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ