ರೇವಣ್ಣ ಆಪ್ತನ ಕಿಡ್ನಾಪ್‌ ಕೇಸಲ್ಲಿ ಇನ್ಸ್‌ಪೆಕ್ಟರ್‌ ಅರೆಸ್ಟ್‌

By Kannadaprabha NewsFirst Published Oct 26, 2023, 10:05 AM IST
Highlights

ಕಿಡ್ನಾಪ್‌ಗೆ ನೆರವು ಆರೋಪ, ಕೋಲಾರ ಪಿಐ ಸೇರಿ 6 ಮಂದಿ ಸೆರೆ, ವರ್ತೂರ್‌ ಪ್ರಕಾಶ್‌ರನ್ನು ಕಿಡ್ನಾಪ್‌ ಮಾಡಿದ್ದವರಿಂದ ಈ ಕೃತ್ಯ, ಚನ್ನರಾಯಪಟ್ಟಣಕ್ಕೆ ಹೊರಟಿದ್ದ ಉದ್ಯಮಿಯನ್ನು ಅಪಹರಿಸಲು ಯತ್ನಿಸಿದ್ದ ಗ್ಯಾಂಗ್‌

ಕೋಲಾರ(ಅ.26): ಮಾಜಿ ಸಚಿವ ಎಚ್.ಡಿ.ರೇವಣ್ಣ ಪರಮಾಪ್ತ ಹಾಗೂ ಚನ್ನರಾಯಪಟ್ಟಣದ ಉದ್ಯಮಿ ಅಶ್ವತ್ಥ್ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ಆಂತರಿಕ ಭದ್ರತಾ ವಿಭಾಗದ ಇನ್ಸ್‌ಪೆಕ್ಟರ್ ಅಶೋಕ್ ಸೇರಿ ೬ ಮಂದಿಯನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಮೂಲದ ಆರ್.ಸತೀಶ್ (೩೮), ಸಿ.ಮುರುಗನ್, ಆರ್. ಮಧುಸೂದನ್ (೩೮), ಚನ್ನರಾಯಪಟ್ಟಣದ ಬಿ.ಎಸ್.ತೇಜಸ್ವಿ (೩೭), ಅರವಿಂದ್ (೪೦) ಹಾಗೂ ಇನ್ಸ್‌ಪೆಕ್ಟರ್ ಜೆ.ಅಶೋಕ್ ರನ್ನು ಬಂಧಿಸಲಾಗಿದೆ. ಅಪಹರಣಕಾರರಿಗೆ ನೆರವು ನೀಡಿದ ಆರೋಪ ಇನ್ಸ್‌ಪೆಕ್ಟರ್‌ ಅವರ ಮೇಲಿದೆ.

ಎಚ್‌ಡಿ ರೇವಣ್ಣ ಆಪ್ತ, ಗುತ್ತಿಗೆದಾರನ ಕೊಲೆಗೆ ಯತ್ನ; ಕೂದಲೆಳೆ ಅಂತರದಲ್ಲಿ ಪಾರು!

ಅ.೧೦ರಂದು ರಾತ್ರಿ ಮಾಜಿ ಸಚಿವ ರೇವಣ್ಣ ಮನೆಯಿಂದ ತಮ್ಮ ಫಾರ್ಚುನರ್ ವಾಹನದಲ್ಲಿ ಚನ್ನರಾಯಪಟ್ಟಣಕ್ಕೆ ಹೊರಟಿದ್ದ ಅಶ್ವತ್ಥರನ್ನು ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿ ಬಳಿ ಆರೋಪಿಗಳು ಅಡ್ಟಗಟ್ಟಿ ಅಪಹರಿಸಲು ಯತ್ನಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಖಚಿತ ಸುಳಿವಿನ ಹಿನ್ನೆಲೆ ಇನ್ಸ್‌ಪೆಕ್ಟರ್ ಅಶೋಕ್‌ರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಇತರ ಐದು ಮಂದಿಯ ಮಾಹಿತಿ ದೊರಕಿತು. ಬಂಧಿತ ಆರೋಪಿಗಳಿಂದ ಮೂರು ಐಷಾರಾಮಿ ಕಾರುಗಳು ಮತ್ತು ೮ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಎಂದು ಹಾಸನ ಎಸ್ಪಿ ಮೊಹಮ್ಮದ್ ಸುಜಿತಾ ತಿಳಿಸಿದ್ದಾರೆ.

ಮೂರು ವರ್ಷದ ಹಿಂದೆ ತಾಲೂಕಿನ ಬೆಗ್ಲಿಹೊಸಹಳ್ಳಿಯ ತೋಟದ ಮನೆಯಿಂದ ಮಾಜಿ ಸಚಿವ ವರ್ತೂರು ಪ್ರಕಾಶ್‌ರನ್ನು ಅಪಹರಿಸಿದ್ದ ತಂಡದಲ್ಲಿದ್ದ ಇಬ್ಬರು ಹಾಗೂ ಬೆಂಗಳೂರಿನ ಡಿಸಿಪಿಯೊಬ್ಬರ ಸಂಬಂಧಿ ಈ ಪ್ರಕರಣದಲ್ಲಿ ಬಂಧಿತರು.

click me!