
ವಾಶಿಮ್: ಮದುವೆಯಾಗಿ ಸುಂದರ ಕನಸುಗಳೊಂದಿಗೆ ಗಂಡನ ಮನೆ ಸೇರಿದ್ದ, ಮಹಿಳೆ ತಾಯ್ತನದ ಸಂಭ್ರಮದಲ್ಲಿರುವಾಗಲೇ ನಡೆದೇ ಬಿಟ್ಟಿತು ದುರಂತ ಅಂತ್ಯ. ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ಏಳು ತಿಂಗಳ ಗರ್ಭಿಣಿ ದೀಪಾಲಿ ಮಾನೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಇದು ಅಪಘಾತವಲ್ಲ, ಆದರೆ ಪೂರ್ವನಿಯೋಜಿತ ಕೊಲೆ ಎಂದು ಕುಟುಂಬ ಆರೋಪಿಸಿದೆ. ದುರಂತ ಸಂಗತಿ ಎಂದರೆ ದೀಪಾಲಿಯ ಸೀಮಂತ ಸಂಭ್ರಮ ಕೇವಲ ನಾಲ್ಕು ದಿನಗಳ ಹಿಂದೆ ನಡೆದಿತ್ತು.
ಮಧ್ಯಪ್ರದೇಶದ ಬುರ್ಹಾನ್ಪುರ ನಿವಾಸಿ ದೀಪಾಲಿ, ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ನಿವಾಸಿ ಧ್ಯಾನೇಶ್ವರ್ ಮಡ್ನೆ ಎಂಬ ಭಾರತೀಯ ಸೇನೆ ಯೋಧನನ್ನು ಸುಮಾರು ಒಂದು ವರ್ಷದ ಹಿಂದೆ ವಿವಾಹವಾಗಿದ್ದರು. ಕುಟುಂಬ ಸದಸ್ಯರ ಪ್ರಕಾರ, ಮದುವೆಯ ಮೊದಲ ಮೂರು ತಿಂಗಳುಗಳು ಅನ್ಯೋನ್ಯವಾಗಿದ್ದರು, ಆದರೆ ನಂತರ, ದೀಪಾಲಿ ತನ್ನ ಅತ್ತೆಯ ಮನೆಯಲ್ಲಿ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸಿದಳು. ಪತಿಯ ನಡವಳಿಕೆ ನಿರಂತರವಾಗಿ ಬದಲಾಗುತ್ತಿತ್ತು ಮತ್ತು ಆತ ಮಾನಸಿಕವಾಗಿ ಮತ್ತು ದೈಹಿಕವಾಗಿ ನಿಂದಿಸಲು ಪ್ರಾರಂಭಿಸಿದ್ದನು ಎಂದು ಕುಟುಂಬ ಆರೋಪಿಸಿದೆ.
ಕುಟುಂಬದ ಪ್ರಕಾರ, ಕೋಲ್ಕತ್ತಾದಲ್ಲಿ ಪೋಸ್ಟಿಂಗ್ ನಲ್ಲಿರುವ ಸಂದರ್ಭದಲ್ಲಿ ಆರೋಪಿ ಪತಿ ದೀಪಾಲಿಯ ಮೇಲೆ ಹಲ್ಲೆ ಮಾಡಿ, ಫಿನಾಯಿಲ್ ಕುಡಿಯುವಂತೆ ಒತ್ತಾಯಿಸಿದನು ಮತ್ತು ನೇಣು ಹಾಕಲು ಸಹ ಪ್ರಯತ್ನಿಸಿದನು. ಘಟನೆಯ ಸಮಯದಲ್ಲಿ ಆತ ಪತ್ನಿಯ ಮೊಬೈಲ್ ಫೋನ್ ಸಹ ಮುರಿದಿದ್ದಾನೆ ಎಂದು ವರದಿಯಾಗಿದೆ. ದೀಪಾಲಿ ಘಟನೆಯ ಬಗ್ಗೆ ತನ್ನ ಪೋಷಕರಿಗೆ ತಿಳಿಸಿದ ಬಳಿಕ, ರಾಜಿ ಸಂಧಾನ ನಡೆದು, ಆರೋಪಿಯ ತಂದೆ ನಂದು ಮದ್ನೆ, ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸುವುದಿಲ್ಲ ಮತ್ತು ದೀಪಾಲಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಭರವಸೆ ನೀಡಿದ್ದರು.
ಸಂಭ್ರಮದಿಂದ ನಡೆದ ಸೀಮಂತ
ದೀಪಾಲಿ ಏಳು ತಿಂಗಳ ಗರ್ಭಿಣಿಯಾಗಿದ್ದು, ಆಗಸ್ಟ್ 2 ರಂದು, ಆಕೆಯ ತವರು ಮನೆಯವರು ಸಂಭ್ರಮದಿಂದ ಸೀಮಂತ ಕಾರ್ಯಕ್ರಮ ಮಾಡಿದ್ದರು. ಕೆಲವು ದಿನಗಳ ಕಾಲ ದೀಪಾಲಿಯನ್ನು ಬುರ್ಹಾನ್ಪುರಕ್ಕೆ ಕರೆದುಕೊಂಡು ಹೋಗುವ ಇಚ್ಛೆಯನ್ನು ಕುಟುಂಬದವರು ವ್ಯಕ್ತಪಡಿಸಿದ್ದರು, ಆದರೆ ಆಕೆಯ ಅತ್ತೆ ಅದಕ್ಕೆ ಅವಕಾಶ ನೀಡಲಿಲ್ಲ.ಆಗಸ್ಟ್ 6 ರಂದು ಇದ್ದಕ್ಕಿದ್ದಂತೆ ದೀಪಾಲಿ ಬಿದ್ದು ಗಾಯಗೊಂಡಿರುವ ಬಗ್ಗೆ ಮನೆಯವರಿಗೆ ಮಾಹಿತಿ ತಲುಪಿಸಲಾಗಿದ್ದು. ಈ ಸುದ್ದಿ ತಿಳಿದ ಕೂಡಲೇ ಮನೆಯವರು ವಾಶಿಮ್ ತಲುಪಿದರು. ಅಲ್ಲಿಗೆ ತಲುಪಿದಾಗ ದೀಪಾಲಿ ಮೃತಪಟ್ಟಿರುವುದು ತಿಳಿದು ಬಂದಿದೆ. ನಂತರ ಪ್ರಾಥಮಿಕ ತನಿಖೆಯಿಂದ ಕೊಲೆ ಎಂದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತಿ, ಅತ್ತೆ ಮತ್ತು ಮಾವ ಬಂಧನ
ಕುಟುಂಬದವರ ದೂರಿನ ಆಧಾರದ ಮೇಲೆ ಪೊಲೀಸರು ಸೇನಾ ಯೋಧ ಧ್ಯಾನೇಶ್ವರ್ ಮಡ್ನೆ, ಅವರ ತಂದೆ ನಂದು ಮಡ್ನೆ ಮತ್ತು ತಾಯಿ ಇಂದು ಮಡ್ನೆ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಈ ಘಟನೆಯಿಂದ ದೀಪಾಲಿಯ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ. ತಮ್ಮ ಮಗಳನ್ನು ಅಮಾನವೀಯವಾಗಿ ನಡೆಸಿಕೊಂಡು ಕೊಲೆ ಮಾಡಲಾಗಿದ್ದು, ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ಆರೋಪಿಗೆ ಶಿಕ್ಷೆಯಾಗಬೇಕೆಂದು ಕುಟುಂಬವು ಬಯಸುತ್ತದೆ. ಆರೋಪಿಗೆ ಮರಣದಂಡನೆಯಂತಹ ಕಠಿಣ ಶಿಕ್ಷೆ ವಿಧಿಸಬೇಕೆಂದು ಕುಟುಂಬವು ಒತ್ತಾಯಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ