
ಲಕ್ನೋ: ವ್ಯಕ್ತಿಯೊಬ್ಬ 25 ವರ್ಷದ ಐಸ್ಕ್ರೀಂ ಮಾರಾಟಗಾರನನ್ನು ತಲೆಕಡಿದು ಭೀಕರವಾಗಿ ಕೊಲೆ ಮಾಡಿ ಬಳಿಕ ಅದನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾನೆ. ಬಳಿಕ ಏನೂ ಆಗೇ ಇಲ್ಲ ಎಂಬಂತೆ ಆರಾಮವಾಗಿ ಅಡುಗೆ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ. ಉತ್ತರ ಪ್ರದೇಶದ ಬಾರಬಂಕಿ ಜಿಲ್ಲೆಯಲ್ಲಿ ಶನಿವಾರ ಇಂತಹದೊಂದು ಭೀಭತ್ಸ ಕೃತ್ಯ ನಡೆದಿದೆ. ಬಾರಬಂಕಿ ಜಿಲ್ಲೆಯ ಪರ್ಸ್ವಾಲ್ ಗ್ರಾಮದಲ್ಲಿ ಈ ಭೀಕರ ಕೊಲೆ ನಡೆದಿದ್ದು, ಸಂತ್ರಸ್ತ ಯುವಕನನ್ನು ಐಸ್ಕ್ರೀಂ ಮಾರುತ್ತಿದ್ದ ಬಬ್ಲೂ ಎಂದು ಗುರುತಿಸಲಾಗಿದೆ.
ಐಸ್ಕ್ರೀಂ ಮಾರ್ತಿದ್ದವನ ತಲೆ ಕಡಿದು ಕೊಲೆ
ಈತ ಪ್ರತಿದಿನವೂ ಐಸ್ಕ್ರೀಂ ಮಾರಾಟ ಮಾಡುತ್ತಾ ಸಾಗುತ್ತಿದ್ದ ಇದೇ ಸಮಯದಲ್ಲಿಯೇ ಸ್ಥಳೀಯ ನಿವಾಸಿ ಆಗಿರುವ 50 ವರ್ಷದ ಶಂಕರ್ ಯಾದವ್ ಹಾಗೂ ಬಬ್ಲೂಗೂ ಯಾವುದೋ ಸಣ್ಣಪುಟ್ಟ ವಿಚಾರಕ್ಕೆ ವಾಕ್ಸಮರ ನಡೆದಿದ್ದು, ಇದರಿಂದ ಸಿಟ್ಟಾದ ಶಂಕರ್ ಯಾದವ್ ಬಬ್ಲೂ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಬಳಿಕ ಸಾರ್ವಜನಿಕರ ಮುಂದೆಯೇ ಆತನ ಕುತ್ತಿಗೆ ಕತ್ತರಿಸಿ ತಲೆಯನ್ನು ದೇಹದಿಂದ ಪ್ರತ್ಯೇಕಗೊಳಿಸಿದ್ದಾನೆ. ನಂತರ ಬಬ್ಲೂವಿನ ತಲೆಯನ್ನು ಅದೇ ಊರಿನಲ್ಲಿರುವ ತನ್ನ ಮನೆಗೆ ಕೊಂಡೊಯ್ದಿದ್ದಾನೆ. ಮನೆಗೆ ಹೋದ ನಂತರ ತಾನು ಏನು ಮಾಡೇ ಇಲ್ಲ ಎಂಬಂತೆ ಆತ ಅಡುಗೆ ಮಾಡೋದರಲ್ಲಿ ಬ್ಯುಸಿಯಾಗಿದ್ದ ಎನ್ನಲಾಗಿದೆ. ಘಟನೆಯ ಬಳಿಕ ಪೊಲೀಸರು ಆತನ ಮನೆ ಆವರಣಕ್ಕೆ ಪ್ರವೇಶಿಸಿದಾಗ ಕಂಡುಕೊಂಡ ಮಾಹಿತಿಯ ಪ್ರಕಾರ ಈ ವಿಚಾರ ತಿಳಿದು ಬಂದಿದೆ.
ತಲೆ ಪಕ್ಕದಲ್ಲಿಟ್ಟುಕೊಂಡು ಅಡುಗೆ ಮಾಡ್ತಿದ್ದ ಆರೋಪಿ
ಈತ ಹೀಗೆ ಭೀಕರವಾಗಿ ಸಾರ್ವಜನಿಕ ಸ್ಥಳದಲ್ಲಿ ನರಹತ್ಯೆ ಮಾಡಿದ ಬಗ್ಗೆ ಪೊಲೀಸರಿಗೆ ಮಾಹಿತಿ ತಲುಪಿದೆ. ಪೊಲೀಸರಿ ಪೊಲೀಸ್ ವರಿಷ್ಠಾಧಿಕಾರಿ ಅರ್ಪಿತ್ ವಿಜಯವರ್ಗಿಯ ಅವರ ನಿರ್ದೇಶನದ ಮೇರೆಗೆ ಗ್ರಾಮಕ್ಕೆ ದೊಡ್ಡ ಪಡೆಯನ್ನು ನಿಯೋಜಿಸಿದ್ದಾರೆ. ಅಧಿಕಾರಿಗಳು ಆ ಪ್ರದೇಶವನ್ನು ಸುತ್ತುವರೆದು ಶಂಕರ್ ಯಾದವ್ ಅವರ ಮನೆಗೆ ಹೋಗಿದ್ದಾರೆ. ತಂಡವು ಒಳಗೆ ಹೋದಾಗ, ಆರೋಪಿ ಒಳಗೆ ಅಡುಗೆ ಮಾಡುವುದನ್ನು ಮುಂದುವರೆಸಿದ್ದ,ಆತನ ಪಕ್ಕದಲ್ಲೇ ನೆಲದಲ್ಲಿ ಬಬ್ಲುವಿನ ಕತ್ತರಿಸಿದ ತಲೆ ಬಿದ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ತಕ್ಷಣ ಆತನನ್ನು ಬಂಧಿಸಿ, ಆತ ಕೊಲೆಗೆ ಬಳಸಿದ್ದ ಆಯುಧವನ್ನು ವಶಪಡಿಸಿಕೊಂಡರು ಮತ್ತು ಮನೆಯಲ್ಲಿದ್ದ ಕತ್ತರಿಸಿದ ತಲೆಯನ್ನು ವಶಪಡಿಸಿಕೊಂಡರು.
ಇದನ್ನೂ ಓದಿ: ಪ್ರೇಮ ವೈಫಲ್ಯದಿಂದ ಸಾವಿಗೀಡಾದ ಮಗನಿಗೆ ಪ್ರೇಯಸಿ ಜೊತೆ ಪ್ರತಿವರ್ಷವೂ ಮದುವೆ ಮಾಡ್ತಿದ್ದಾರೆ ಪೋಷಕರು
ಕೊಲೆಯಾದ ಬಬ್ಲು ಮೂವರು ಸಹೋದರರಲ್ಲಿ ಹಿರಿಯವನಾಗಿದ್ದು,. ಅವನು ಕೂಲಿ ಕೆಲಸ ಮತ್ತು ಐಸ್ ಕ್ರೀಮ್ ಮಾರಾಟ ಮಾಡುವ ಮೂಲಕ ತನ್ನ ಕುಟುಂಬವನ್ನು ಪೋಷಿಸುತ್ತಿದ್ದನು. ಬಬ್ಲುವಿಗೆ ಹೆಂಡತಿ ಮತ್ತು ಇಬ್ಬರು ಚಿಕ್ಕ ಮಕ್ಕಳಿದ್ದು, ಘಟನೆಯಿಂದ ಅವರು ಆಘಾತಗೊಂಡಿದ್ದಾರೆ ಎಂದು ವರದಿಯಾಗಿದೆ. ಕೊಲೆ ಆರೋಪಿ ಮತ್ತು ಬಬ್ಲೂ ನಡುವೆ ನಡೆದ ಮಾತಿನ ಚಕಮಕಿಯ ಹಿನ್ನೆಲೆಯ ಬಗ್ಗೆ ಪೊಲೀಸರು ಮಾಹಿತಿ ಪಡೆಯುತ್ತಿದ್ದು, ಬಬ್ಲೂ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಟಿವಿಕೆ: 2 ಕ್ಷೇತ್ರದಲ್ಲಿ ದಳಪತಿ ವಿಜಯ್ ಸ್ಪರ್ಧೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ