ಶೀಲ‌ ಶಂಕಿಸಿ ಪತ್ನಿ ಕೊಲೆ ಮಾಡಿದ ಗಂಡ, ಇಬ್ಬರು ಹೆಣ್ಣು ಮಕ್ಕಳು ಅನಾಥ

By Suvarna NewsFirst Published Jan 12, 2024, 9:17 PM IST
Highlights

ಶೀಲ ಶಂಕಿಸಿ ಗಂಡ ತನ್ನ ಪತ್ನಿಯನ್ನೇ ಕತ್ತು ಕೊಯ್ದು ಬರ್ಬರವಾಗಿ‌ ಕೊಲೆ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.  

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜ.12): ಗಂಡ ಹೆಂಡತಿ ಅಂದ್ಮೇಲೆ ಜಗಳ ಬರೋದು ಸಾಮಾನ್ಯ. ಆದ್ರೆ ಅನುಮಾನ ಎನ್ನುವ ಪೆಡಂಭೂತ ಸಂಸಾರದಲ್ಲಿ ಒಮ್ಮೆ ಎಂಟ್ರಿ ಆದ್ರೆ ಸಾಕು ಇಡೀ ಜೀವನವನ್ನೇ ಹಾಳು ಮಾಡುತ್ತೆ. ಅದಕ್ಕೊಂದು ನಿದರ್ಶನ ಎಂಬಂತೆ ಶೀಲ ಶಂಕಿಸಿ ಗಂಡ ತನ್ನ ಪತ್ನಿಯನ್ನೇ ಕತ್ತು ಕೊಯ್ದು ಬರ್ಬರವಾಗಿ‌ ಕೊಲೆ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.  

ಮಹಿಳೆಯ ಭೀಕರ ಹತ್ಯೆಯಿಂದ ಮನನೊಂದು ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ ಒಂದೆಡೆಯಾದ್ರೆ, ತಾಳಿ ಕಟ್ಟಿದ ಗಂಡನಿಂದಲೇ ಬರ್ಬರ ಕೊಲೆಯಾಗಿ ಶವವಾಗಿ ಮಲಗಿರೋ ಮೃತ ಮಹಿಳೆ ರೇಣುಕಾ (೪೦). ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗದ ನೆಹರೂ ನಗರದಲ್ಲಿ. ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ಮದುವೆ ಆಗಿದ್ದ ಈ ಜೋಡಿ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದರು.

ಜೆಟ್ ಲ್ಯಾಗ್ ಪಬ್ ಪಾರ್ಟಿ ಪ್ರಕರಣ, ವಿಚಾರಣೆ ಮುಗಿಸಿ ಹೊರಟ ದರ್ಶನ್‌ ಎಂಡ್‌ ಗ್ಯಾಂಗ್‌, ರಾಕ್‌ಲೈನ್‌ ಗರಂ

ಈ ದಂಪತಿಗೆ ವಯಸ್ಸಿಗೆ ಬಂದ ಎರಡು ಹೆಣ್ಣು ಮಕ್ಕಳು ಜನಿಸಿದ್ದರು. ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಮಕ್ಕಳ, ಪೋಷಕರ ಮನೆಗೆ ಆಗಾಗ ಬಂದು ಹೋಗುತ್ತಿದ್ದರು. ಆದ್ರೆ ಕಳೆದು ಎರಡ್ಮೂರು ವರ್ಷಗಳ‌ ಹಿಂದಷ್ಟೇ ಆರೋಪಿ ಮಂಜುನಾಥ್ ಗಾರೆ ಕೆಲಸ ಮಾಡುವಾಗ ಮನೆಯ ಮೇಲಿಂದ ಕೆಳಗೆ ಬಿದ್ದ ಸೊಂಟಕ್ಕೆ ಬಲವಾದ ಪೆಟ್ಟು ಮಾಡಿಕೊಂಡಿದ್ದನಂತೆ. ಆದ್ದರಿಂದಲೇ ಇತ್ತೀಚೆಗೆ ಹೂವಿನ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು. ಆದ್ರೆ ಜೀವನ ಸಾಗಿಸಲು ಕಷ್ಟ ಆದೀತು ಎಂದು ಕಳೆದೊಂದು ವರ್ಷದಿಂದ ಮೃತ ಮಹಿಳೆ ಹೋಟೆಲ್ ಒಂದಕ್ಕೆ ಕೆಲಸಕ್ಕೆಂದು ಹೋಗುತ್ತಿದ್ದರು.

ಆದ್ರೆ ಇದೇ ವಿಚಾರಕ್ಕೆ ಗಂಡ ಹೆಂಡತಿ ಮಧ್ಯೆ ಆಗಾಗ ಜಗಳ ಆಗುತ್ತಿತ್ತು ಎಂದು ಅಕ್ಕ ಪಕ್ಕದ ಮನೆಯವರು ತಿಳಿಸಿದರು. ಇದನ್ನೇ ನೆಪ ಮಾಡಿಕೊಂಡ ಆರೋಪಿ ಮಂಜುನಾಥ್ ತನ್ನ ಹೆಂಡತಿಯ ಶಿಲವನ್ನು ಶಂಕಿಸಿ ರಾತ್ರಿ ವೇಳೆ ಕತ್ತು ಕೊಯ್ದು ಕೊಲೆ ಮಾಡಿ ಮನೆಯ ಬೀಗ‌ ಹಾಕಿ ಪರಾರಿ ಆಗಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ನಾಪತ್ತೆ ಆಗಿರುವ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಲಿ ಎಂದು ಮೃತ ಮಹಿಳೆ ಸಂಬಂಧಿಕರು ಆಗ್ರಹಿಸಿದರು.

ರೇಸ್ ಕೋರ್ಸ್ ಬುಕ್ಕಿಂಗ್‌ ಕೌಂಟರ್‌ಗೆ ಸಿಸಿಬಿ ರೇಡ್, 3 ಕೋಟಿ 47 ಲಕ್ಷ ಹಣ ವಶಕ್ಕೆ!

ಇನ್ನೂ ಘಟನೆ ಸಂಬಂಧ ಎಸ್ಪಿ ಅವರನ್ನೇ ವಿಚಾರಿಸಿದ್ರೆ, ಚಿತ್ರದುರ್ಗದ ನೆಹರೂ ನಗರದಲ್ಲಿ ತಾವು ಇರುವ ಮನೆಯ ಬೀದಿಯಲ್ಲಿಯೇ ಮೃತ ಮಹಿಳೆ ತಾಯಿ ಹಾಗೂ ತಮ್ಮ ವಾಸ ಮಾಡುತ್ತಿದ್ದರು. ಎಂದಿನಂತೆ ಬೆಳಗ್ಗೆ ಹೊರ ಬರ್ತಿದ್ದ ಮಗಳು ಇನ್ನಾದ್ರು ಬರಲಿಲ್ಲ ಎಂದು ಅನುಮಾನಗೊಂಡಾಗ, ಮನೆಯ ಬೀಗ ಹಾಕಿರುವುದು ಕಂಡು ತಮ್ಮ ಬಳಿ ಇದ್ದ ಇನ್ನೊಂದು ಕೀ ಮೂಲಕ ಬಾಗಿಲು ತೆಗೆದಾಗ ಕೊಲೆ ಮಾಡಿರುವುದು ತಿಳಿದು ಬಂದಿದೆ.

ಕೂಡಲೇ ಕೋಟೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿ ದೂರು ಸಲ್ಲಿಸಲಾಗಿದ್ದು. ಮೃತ ಮಹಿಳೆಯ ಪತಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ.‌ ಸದ್ಯ ಪ್ರಕರಣ ತನಿಖೆ ಹಂತದಲ್ಲಿದ್ದು, ಕೂಡಲೇ ಆರೋಪಿ ಬಂಧಿಸಿ ಕೇಸ್ ಗೆ ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಒಟ್ಟಾರೆ ತನ್ನ ಗಂಡ ಕಷ್ಟ ಪಡೋದನ್ನ ಸಹಿಸಲಾಗದ ಪತ್ನಿ ಕೆಲಸಕ್ಕೆ ಹೋಗಿದ್ದೇ ಗಂಡನ ವಿಕೋಪಕ್ಕೆ ಕಾರಣವಾಯ್ತ ಎನ್ನುವ ಪ್ರಶ್ನೆ ಎಲ್ಲರಲ್ಲಿ ಕಾಡ್ತಿದೆ. ಅದೇನೆ ಇರ್ಲಿ ಈ ರೀತಿ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿರೋ ಪಾಪಿ ಪತಿರಾಯನ್ನು ಪೊಲೀಸರು ಕೂಡಲೇ ಬಂಧಿಸಿ ಉಗ್ರ ಶಿಕ್ಷೆ ವಿಧಿಸಬೇಕಿದೆ.

click me!