
ಬೆಂಗಳೂರು (ಜ.17): ಸ್ಯಾಂಡಲ್ವುಡ್ನ ಕೆಲವು ಚಿತ್ರಗಳಲ್ಲಿ ನಟಿಸಿದ್ದ ನಟನೊಬ್ಬ ವೇಶ್ಯಾವಾಟಿಕೆ ನಡೆಸುವ ಮೂಲಕ ಸಮಾಜಕ್ಕೆ ವಿಲನ್ ಆಗಿದ್ದಾನೆ. ಲೋಕ್ಯಾಂಟೋ (locanto apk) ಆ್ಯಪ್ ಮೂಲಕ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಾ ಸಮಾಜಬಾಹಿರ ಕಾರ್ಯದಲ್ಲಿ ತೊಡಗಿದ್ದಾನೆಂದು ಆರೋಪಿಸಿ, ಪೊಲೀಸರು ನಟನನ್ನು ಬಂಧಿಸಿದ್ದಾರೆನ್ನಲಾಗಿದೆ.
ಲೋಕ್ಯಾಂಟೋ ಆ್ಯಪ್ ಮೂಲಕ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿಗಳ ಜೊತೆಗೆ ಈ ನಟನೂ ಪ್ರಮುಖ ಆರೋಪಿಯಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸುದ್ದಗುಂಟೆ ಪಾಳ್ಯ ಪೊಲೀಸರು ಐವರನ್ನು ಬಂಧಿಸಿದ್ದರು. ಈ ಕುರಿತು ತನಿಖೆ ಮುಂದುವರೆಸಿದ ಪೊಲೀಸರಿಗೆ ನಟನೂ ಭಾಗಿಯಾಗಿರೋದು ಪತ್ತೆಯಾಗಿದೆ.
ಇದನ್ನೂ ಓದಿ: ಅಯ್ಯಯ್ಯೋ..! ವೇಶ್ಯಾವಾಟಿಕೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ: ಐಷಾರಾಮಿ ಜೀವನಕ್ಕಾಗಿ ವೃತ್ತಿ ಆಯ್ಕೆ
ಪೋಟೋ ಬಳಸಿ ದಂಧೆ : ಹೆಣ್ಮಕ್ಕಳ ಪೋಟೋ ಬಳಸಿ ದಂಧೆ ನಡೆಸುತ್ತಿದ್ದ ಈ ನಟನನ್ನು ಬಂಧಿಸಲಾಗಿದೆ. ಲೊಕೆಂಟೋ ಆಪ್ ಹಿಂದೆ ಬಿದ್ದು, ಹೆಣ್ಣು ಮಕ್ಕಳ ಫೋಟೋಗಳನ್ನು ಬಳಸಿಕೊಳ್ಳುತ್ತಿದ್ದ ಎನ್ನುವ ಆರೋಪದ ಮೇರೆಗೆ ಈತನನ್ನು ಅರೆಸ್ಟ್ ಮಾಡಲಾಗಿದೆ. ಕಾಮುಕರ ಅಡ್ಡ ಆಗಿರುವ ಲೊಕೆಂಟೋ ಆಪ್ ನಲ್ಲಿ ಹುಡುಗಿಯ ಫೋಟೋ ಬಳಸಿ ಸಲುಗೆ ಮಾಡುತ್ತಿದ್ದ ಎನ್ನಲಾಗಿದೆ. ಈ ನಟ ಸೇರಿ 6 ಮಂದಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ತಿಂಗಳು ಐವರ ಬಂಧನ: ಬಾಂಗ್ಲಾದಿಂದ ಅಕ್ರಮವಾಗಿ ಬಂದು ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರಿಂದ ಕೆಂಗೇರಿ, ಬ್ಯಾಡರಹಳ್ಳಿ ಎರಡು ಠಾಣಾ ವ್ಯಾಪ್ತಿಯಲ್ಲಿ ದಾಳಿ ಮಾಡಿ ಎಂಟು ಮಂದಿ ಪಿಂಪ್ಗಳನ್ನು ಕಳೆದ ತಿಂಗಳು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಾಂಗ್ಲಾ ದೇಶದಿಂದ ಅಕ್ರಮವಾಗಿ ಬಂದಿರುವ ಆರೋಪಿಗಳು ಬೆಂಗಳೂರು ನಗರದ ಕೆಂಗೇರಿ ಡೆಂಟಲ್ ಕಾಲೇಜು ಬಳಿ ಬಾಡಿಗೆ ಮನೆಯೊಂದನ್ನು ಪಡೆದುಕೊಂಡು ವೇಶ್ಯಾವಾಟಿಕೆ ಮಾಡುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿಯನ್ನು ಆಧರಿಸಿ ಬೆಳಗ್ಗೆ 4 ರಿಂದ 5.30ರ ವೇಳೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಕೆಂಗೇರಿಯ ವಿನಾಯಕನಗರ ಹಾಗೂ ಬ್ಯಾಡರಹಳ್ಳಿ ಭಾಗದಲ್ಲಿ ಬಾಡಿಗೆ ಮನೆಮಾಡಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದವರನ್ನು ಬಂಧಿಸಿದ್ದಾರೆ. ಬಾಂಗ್ಲಾದಿಂದ ಅತಿಕ್ರಮವಾಗಿ ಬಂದು ನೆಲೆಸಿದ್ದ ಆರೋಪಿಗಳಾದ ತನ್ವೀರ್ ಮಂಡಲ್, ಅಖ್ತರ್ ಮಂಡಲ್, ಇಲಾಹಿ,ಬಿಸ್ತ್ವಿ ಸೇರಿದಂತೆ ಎಂಟು ಪಿಂಪ್ ಗಳನ್ನು ಜೈಲಿಗಟ್ಟಿದ್ದರು.
ಇದನ್ನೂ ಓದಿ: Mysuru Crime: ವಾಟ್ಸಾಪ್ಗೆ ಬೆತ್ತಲೆ ಫೋಟೋ ಕಳಿಸಿ ಹಣ ಪೀಕುತ್ತಿದ್ದ ಲೇಡಿ: ಪೊಲೀಸರಿಗೆ ಸಿಕ್ಕಿಬಿದ್ದಿದ್ದೇ ರೋಚಕ
2 ಸಾವಿರಕ್ಕೆ ವೇಶ್ಯಾವಾಟಿಕೆ: ಪೊಲೀಸರ ಕೈಗೆ ಸಿಕ್ಕಿಕೊಂಡಿರುವ ಆರೋಪಿಗಳು ಕೇವಲ 2 ರಿಂದ 3 ಸಾವಿರ ರೂ.ಗಳಿಗೆ ಗ್ರಾಹಕರನ್ನು ಸಂಪರ್ಕಿಸಿ ವೇಶ್ಯವಾಟಿಕೆ ನಡೆಸುತ್ತಿದ್ದರು. ದಾಳಿಯ ವೇಳೆ ಆರೋಪಿಗಳು ತಂಗಿದ್ದ ಸ್ಥಳದಲ್ಲಿ ನಾಲ್ಕು ಮೊಬೈಲ್ಗಳು, ಬಾಂಗ್ಲಾದ ಕರೆನ್ಸಿ ನೋಟುಗಳು, ಭಾರತೀಯ ನಗದು ಹಣ ಲಭ್ಯವಾಗಿದ್ದ, ಅದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು ಘಟನೆ ಕುರಿತು ಕೆಂಗೇರಿ ಮತ್ತು ಬ್ಯಾಡರಹಳ್ಳಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಂಟು ಆರೋಪಿಗಳ ಪೂರ್ವಾಪರವನ್ನು ಕಲೆಹಾಕುತ್ತಿದ್ದಾರೆ. ಕೆಲಸ ಕೊಡಿಸುವುದಾಗಿ ಬಾಂಗ್ಲಾದೇಶದಿಂದಲೇ ಯುವತಿಯರನ್ನ ಅಕ್ರಮವಾಗಿ ಬೆಂಗಳೂರಿಗೆ ಕರೆಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಕೆಲಸಕ್ಕೆಂದು ಬಂದ ಯುವತಿಯರನ್ನು ಇಲ್ಲಿ ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು. ದೇಶವನ್ನು ಬಿಟ್ಟುಬಂದ ನಂತರ ಹೊಟ್ಟೆ ಬಟ್ಟೆ ಹಾಗೂ ಹಣದ ಆಸೆಯಿಂದ ಯುವತಿಯರು ಅನಿವಾರ್ಯವಾಗಿ ದಂಧೆಗೆ ಇಳಿಯುತ್ತಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ