ಕುಡಿಯಬೇಡ ಎಂದು ಬೈದಿದ್ದಕ್ಕೆ ಮಗನನ್ನೇ ಕೊಂದ ಪಾಪಿ ದೊಡ್ಡಪ್ಪ

By Sathish Kumar KHFirst Published Jun 5, 2023, 8:12 PM IST
Highlights

ಪ್ರತಿನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ ದೊಡ್ಡಪ್ಪನಿಗೆ ನೀನು ಕುಡಿಯಬೇಡ ಎಂದು ಬೈದಿದ್ದಕ್ಕೆ ಮಗನನ್ನೇ ಭೀಕರವಾಗಿ ಕೊಲೆ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ (ಜೂ.05): ಪ್ರತಿನಿತ್ಯ ಕುಡಿದು ಬಂದು ಮನೆಯಲ್ಲಿ ಕುಟುಂಬದ ಎಲ್ಲ ಸದಸ್ಯರಿಗೂ ಬೈದು, ಗಲಾಟೆ ಮಾಡುತ್ತಿದ್ದ ದೊಡ್ಡಪ್ಪನಿಗೆ ನೀನು ಕುಡಿಯಬೇಡ ಎಂದು ಬೈದಿದ್ದಕ್ಕೆ ತಮ್ಮನ ಮಗನೆಂದೂ ನೋಡದೇ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ದುರ್ಘಟನೆ ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ದುಮ್ಮೇನಹಳ್ಳಿ ಕಾಲೋನಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ತಮ್ಮನ ಮಗನನ್ನು ಚಾಕುವಿನಿಂದ ಇರಿದು ಕೊಂದ ದೊಡ್ಡಪ್ಪನನ್ನು ಹನುಮಂತಯ್ಯ ಎಂದು ಗುರುತಿಸಲಾಗಿದೆ. ಇನ್ನು ಕೊಲೆಯಾದ ವ್ಯಕ್ತಿಯನ್ನು ಯತೀಶ್ (37) ಎಂದು ಗುರುತಿಸಲಾಗಿದೆ. ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ದುಮ್ಮೇನಹಳ್ಳಿ ಕಾಲೋನಿಯಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದೆ. ಪ್ರತಿದಿನ ಕುಡಿದು ಬಂದು ಮನೆಯ ಎಲ್ಲ ಕುಟುಂಬ ಸದಸ್ಯರೊಂದಿಗೆ ಗಲಾಟೆ ಮಾಡುತ್ತಿದ್ದ ಹನುಮಂತಯ್ಯನಿಗೆ ತಮ್ಮನ ಮಗ ಯತೀಶ್‌ ಕುಡಿದು ಗಲಾಟೆ ಮಾಡದಂತೆ ಬೈದು ಬುದ್ಧಿ ಹೇಳಿದ್ದಾನೆ. ಇದರಿಂದ ಮನೆಯವರ ಎದುರಿಗೆ ತನಗೆ ಅವಮಾನವಾಗಿದೆ ಎಂದು ಸ್ವಂತ ತಮ್ಮನ ಮಗನೆಂದೂ ನೋಡದೇ ಕೊಲೆ ಮಾಡಿದ್ದಾನೆ. 

ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ: ಪಲ್ಟಿಯಾಗಿ 100 ಮೀಟರ್‌ ಉರುಳಿದ ಕಾರು

ಫೋನಿನಲ್ಲಿ ಮಾತನಾಡುತ್ತಿದ್ದಾಗ ಏಕಾಏಕಿ ಚಾಕು ಚುಚ್ಚಿದ: ಭಾನುವಾರ ರಾತ್ರಿ ವೇಳೆ ಮೃತ ದುರ್ದೈವಿ ಯತೀಶ ಮನೆಯ ಹೊರಗೆ ಫೋನ್‌ನಲ್ಲಿ ಮಾತನಾಡುತ್ತಿದ್ದನು. ಈ ವೇಳೆ ತನಗೆ ಬೈದಿದ್ದ ಸೇಡನ್ನು ಮನಸ್ಸಿನಲ್ಲಿಟ್ಟುಕೊಂಡು ಹಗೆ ಸಾಧಿಸುತ್ತಿದ್ದ ಹನುಮಂತಯ್ಯ ಕುಡಿದ ಮತ್ತಿನಲ್ಲಿ ಬಂದು ಪೋನಿನಲ್ಲಿ ಮಾತನಾಡುತ್ತಿದ್ದ ಯತೀಶನ ಎದೆಗೆ ಏಕಾಏಕಿ ಚಾಕುವಿನಿಂದ ಚುಚ್ಚಿದ್ದಾನೆ. ನನಗೆ ಬೈಯುತ್ತಿದ್ದೀಯಾ ಮಗನೇ ಎಂದವನೇ ಪದೇ ಪದೆ ಚಾಕುವಿನಿಂದ ಚುಚ್ಚಿದ್ದಾನೆ. ಇದರಿಂದ ಚೀರಾಡುತ್ತಾ ಸ್ಥಳದಲ್ಲಿಯೇ ಕುಸಿದುಬಿದ್ದ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಯತೀಶನನ್ನು ಮನೆಯ ಇತರೆ ಸದಸ್ಯರು ಕೂಡಲೇ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮುನ್ನವೇ ಯತೀಶನ ಪ್ರಾಣಪಕ್ಷಿ ಹಾರಿಹೋಗಿತ್ತು.

ಏನೇ ನಡೆದಿಲ್ಲವೆಂಬಂತೆ ಇದ್ದ ಕ್ರೂರಿ ದೊಡ್ಡಪ್ಪ: ಘಟನೆಯ ನಂತರ ಯತೀಶ ಸಾವನ್ನಪ್ಪಿರುವುದು ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಶವವನ್ನು ಸಾಗಣೆ ಮಾಡಲಾಗಿದೆ. ವೈದ್ಯರು ಕೂಡ ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡು, ಘಟನೆ ನಡೆದ ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಇಷ್ಟೆಲ್ಲಾ ಘಟನೆ ನಡೆದರೂ ಏನೂ ಆಗಿಲ್ಲವೆಂಬಂತೆ ಮನೆಯಲ್ಲಿಯೇ ಆರಾಮವಾಗಿದ್ದ ಪಾಪಿ ದೊಡ್ಡಪ್ಪ ಹನುಮಂತಯ್ಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.

ಬಳ್ಳಾರಿ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಕೋಲಾರದಲ್ಲಿ ಆತ್ಮಹತ್ಯೆ

ಟಾಯ್ಲೆಟ್‌ ಕ್ಲೀನ್‌ ಮಾಡುವವನ ಕತ್ತು ಸೀಳಿದ ದುಷ್ಕರ್ಮಿಗಳು:  ತುಮಕೂರು: ತುಮಕೂರಿನ ಅಂತಸರನಹಳ್ಳಿ ತರಕಾರಿ ಮಾರುಕಟ್ಟೆಯಲ್ಲಿ ಕತ್ತು ಕುಯ್ದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತನನ್ನು ಬಿಹಾರ ಮೂಲದ ಲಖನ್ ಮಾಂಜಿ (36) ಎಂದು ಗುರುತಿಸಲಾಗಿದೆ. ಮಾರುಕಟ್ಟೆಯ ಸಾರ್ವಜನಿಕ ಟಾಯ್ಲೆಟ್ ನಲ್ಲಿ ಶವ ಪತ್ತೆಯಾಗಿದೆ. ಕಳೆದ 6 ತಿಂಗಳಿಂದ ಮಾರುಕಟ್ಟೆಯಲ್ಲಿ ಟಾಯ್ಲೆಟ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದನು. ತುಮಕೂರು ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ತುಮಕೂರು ನಗರ ಠಾಣೆ ಇನ್ಸೆಪೆಕ್ಟರ್ ದಿನೇಶ್ ಕುಮಾರ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ, ಪರಿಶೀಲನೆ ಮಾಡಿದ್ದಾರೆ.

click me!