ಗಂಗಾವತಿ: ಅಮಾಯಕ ಜನರಿಗೆ ಕೋಟಿ ಕೋಟಿ ಪಂಗನಾಮ ಹಾಕಿದ್ರಾ ಶಾಸಕರ ಪತ್ನಿ?

By Kannadaprabha NewsFirst Published Sep 29, 2021, 3:15 PM IST
Highlights

*  ಶಾಸಕರ ಪತ್ನಿ ಚಿಟ್ಸ್‌ ಕಂಪನಿ ನಿರ್ದೇಶಕಿ
*  200 ಸದಸ್ಯರಿಗೆ 3.5 ಕೋಟಿ ನೀಡಬೇಕಿದೆ: ಸೈಯದ ಅಲಿ ಆರೋಪ
*  ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ 
 

ಕೊಪ್ಪಳ(ಸೆ.29):  ಜಿಲ್ಲೆಯ ಗಂಗಾವತಿಯ(Gangavati) ಶ್ರೀ ಗವಿಸಿದ್ಧೇಶ್ವರ ಚಿಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯಲ್ಲಿ ಗೋಲ್‌ಮಾಲ್‌ ನಡೆದಿದ್ದು, ಸದಸ್ಯರಿಗೆ ಶಾಸಕ ಪರಣ್ಣ ಮುನವಳ್ಳಿ ಅವರ ಪತ್ನಿ ಸೇರಿದಂತೆ ನಿರ್ದೇಶಕ ಮಂಡಳಿಯವರು 3.5 ಕೋಟಿ ಪಂಗನಾಮ ಹಾಕಿದ್ದಾರೆ ಎಂದು ಹೈದ್ರಾಬಾದ್‌ ಕರ್ನಾಟಕ ಭ್ರಷ್ಟಾಚಾರ ಅವ್ಯವಹಾರ ತಡೆ ಹೋರಾಟ ಸಮಿತಿ ಅಧ್ಯಕ್ಷ ಸೈಯದ್‌ ಅಲಿ ಆರೋಪಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿದ ಅವರು, ಗಂಗಾವತಿಯಲ್ಲಿಯೂ ಐಎಂಎ ಮಾದರಿ ಹಗರಣ ನಡೆದಿದೆ. ಶಾಸಕ ಮುನವಳ್ಳಿ(Paranna Munavalli) ಅವರ ಪತ್ನಿ ಶೋಭಾ ಅವರು ನಿರ್ದೇಶಕರಾಗಿರುವ ಈ ಚಿಟ್ಸ್‌ 2018 ರಲ್ಲಿಯೇ ಬಂದ್‌ ಆಗಿದೆ. ಆದರೆ, ಸದಸ್ಯರಿಗೆ ಕೊಡಬೇಕಾಗಿರುವ 3.5 ಕೋಟಿ ಇದುವರೆಗೂ ಕೊಟ್ಟಿಲ್ಲ ಎಂದು ದೂರಿದರು.

ಗಂಗಾವತಿ: ರೈತರ ಹೊಲದಲ್ಲಿ ಬಿತ್ತನೆ ಮಾಡಿದ ಶಾಸಕ ಮುನವಳ್ಳಿ

ಈ ಕುರಿತು ಸದಸ್ಯರು ಪರಿಪರಿಯಾಗಿ ಶಾಸಕರ ಬಳಿ ಬೇಡಿಕೊಂಡಾಗ ನೀಡುವ ಭರವಸೆ ನೀಡಿದ್ದರು. ಆದರೆ ಈಗ ನಿರಾಕರಿಸುತ್ತಿದ್ದಾರೆ. ಸದಸ್ಯರು ತಮ್ಮ ಕಷ್ಟ ಕಾಲಕ್ಕೆ ನೆರವಿಗೆ ಬರಲಿದೆ ಎಂದು ಹಣ ತುಂಬಿರುತ್ತಾರೆ. ಸುಮಾರು 200 ಸದಸ್ಯರಿಗೆ 3.5 ಕೋಟಿ ಕೊಡಬೇಕಾಗಿದೆ. ನಿರ್ದೇಶಕ ಮಂಡಳಿ ಈ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ ಎಂದರು. ಈ ಕುರಿತು ದೂರು ದಾಖಲಾಗಿದ್ದರೂ ಅದು ಕಾರ್ಯಗತವಾಗುತ್ತಿಲ್ಲ. ಎಫ್‌ಐಆರ್‌(FIR) ಆದ ಮೇಲೆ ಚಾರ್ಜ್‌ಶೀಟ್‌ ಸಹ ಸಲ್ಲಿಕೆ ಮಾಡಿಲ್ಲ ಎಂದರು.

ತನಿಖೆಗೆ ಆಗ್ರಹ:

ಇಡೀ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು. ಇದರಲ್ಲಿ ಭಾಗಿಯಾಗಿರುವ ಚಿಟ್ಸ್‌ ಕಂಪನಿಯ ನಿರ್ದೇಶಕರ ಮೇಲೆ ಕ್ರಮಕೈಗೊಂಡು, ಅವರಿಂದ ಹಣ ವಸೂಲಿ ಮಾಡಿ, ಸದಸ್ಯರಿಗೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು. ಈ  ವೇಳೆ ಎನ್‌. ಆನಂದ ಸಾರಂಗಮಠ, ಜಂಬಣ್ಣ ದಂಡಿನ್‌, ಗುರುಸಿದ್ದಪ್ಪ ಭೋವಿ, ಮಂಜುನಾಥ ಕಿನ್ನಾಳ ಇದ್ದರು.
 

click me!