Bengaluru: ಆರ್‌ಬಿಐ ಹೆಸರಿನಲ್ಲಿ ವಂಚಿಸುತ್ತಿದ್ದ 11 ಮಂದಿಯ ಖತರ್ನಾಕ್‌ ಗ್ಯಾಂಗ್‌ ಬಂಧನ

By Kannadaprabha NewsFirst Published Mar 24, 2023, 6:21 AM IST
Highlights

‘ಆಟೋಮಿಕ್‌ ಎನರ್ಜಿ’ ಯೋಜನೆಗೆ ಸರ್ಕಾರ ಬಿಡುಗಡೆ ಮಾಡಿದ 75 ಸಾವಿರ ಕೋಟಿ ರು.ಗಳನ್ನು ಠೇವಣಿಯಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ನಲ್ಲಿ ಇಡಲಾಗಿದ್ದು, ಈ ಹಣದ ಬಿಡುಗಡೆಗೆ ಶುಲ್ಕ ಭರಿಸಿದರೆ ಅಧಿಕ ಬಡ್ಡಿ ಕೊಡುವುದಾಗಿ ಜನರಿಗೆ ವಂಚಿಸುತ್ತಿದ್ದ 11 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು (ಮಾ.24): ‘ಆಟೋಮಿಕ್‌ ಎನರ್ಜಿ’ ಯೋಜನೆಗೆ ಸರ್ಕಾರ ಬಿಡುಗಡೆ ಮಾಡಿದ 75 ಸಾವಿರ ಕೋಟಿ ರು.ಗಳನ್ನು ಠೇವಣಿಯಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ನಲ್ಲಿ ಇಡಲಾಗಿದ್ದು, ಈ ಹಣದ ಬಿಡುಗಡೆಗೆ ಶುಲ್ಕ ಭರಿಸಿದರೆ ಅಧಿಕ ಬಡ್ಡಿ ಕೊಡುವುದಾಗಿ ಜನರಿಗೆ ವಂಚಿಸುತ್ತಿದ್ದ 11 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಚಿಕ್ಕಮಗಳೂರು ಜಿಲ್ಲೆ ಎನ್‌.ಆರ್‌.ಪುರ ತಾಲೂಕಿನ ಅಶೋಕ್‌ ಕುಮಾರ್‌, ರಾಮನಗರ ತಾಲೂಕಿನ ಬಿಡದಿ ಸಮೀಪದ ಅವರೆಗೆರೆ ಗ್ರಾಮದ ಎ.ಎನ್‌.ರಮೇಶ್‌ಕುಮಾರ್‌, ಕುರುಬರ ಕರೇನಹಳ್ಳಿಯ ಗಂಗರಾಜು, ಕೆಂಗೇರಿಯ ಗಾಣಕಲ್ಲು ಜಿ.ಸಿ. ಮಂಜುನಾಥ್‌, ವಲಗೇರಹಳ್ಳಿಯ ರಾಜ್‌ಕುಮಾರ್‌, ಮೈಸೂರು ವಿಜಯನಗರದ ಕುಮರೇಶ್‌, ಬಳ್ಳಾರಿ ಜಿಲ್ಲೆ ಬಸಪುರ ತಾಂಡಾದ ವಿ.ಸಿ.ಮೂರ್ತಿ ನಾಯ್ಕ್‌ ಹಾಗೂ ರಾಮನಗರ ಜಿಲ್ಲೆ ಕನಕ ಪುರ ತಾಲೂಕಿನ ಸಿದ್ದರಾಜು ನಾಯ್ಕ್‌ ಬಂಧಿತರಾಗಿದ್ದು, ಆರೋಪಿಗಳಿಂದ 11.5 ಲಕ್ಷ ರು. ನಗದು, ಬ್ಯಾಂಕ್‌ ಖಾತೆಗಳಲ್ಲಿ 16.35 ಲಕ್ಷ ರು.ಮುಟ್ಟುಗೋಲು ಹಾಗೂ ಆರ್‌ಬಿಐ ಲಾಂಛನವುಳ್ಳ ನಕಲಿ ಕಾಗದ ಪತ್ರಗಳು ಮತ್ತು ಕಾರು ಜಪ್ತಿ ಮಾಡಲಾಗಿದೆ.

ನಮ್ಮ ಆಟೋಮಿಕ್‌ ಎನರ್ಜಿ ಯೋಜನೆ ಸಂಬಂಧ ಸರ್ಕಾರವು 75 ಸಾವಿರ ಕೋಟಿ ರು. ಹಣ ಬಿಡುಗಡೆಗೊಳಿಸಿದೆ. ಈ ಹಣವು ಭಾರತೀಯ ರಿಸವ್‌ರ್‍ ಬ್ಯಾಂಕ್‌ನಲ್ಲಿ ಠೇವಣಿಯಾಗಿರುತ್ತದೆ. ಆ ಹಣ ಬಿಡುಗಡೆ ಸಂಬಂಧ 150 ಕೋಟಿ ರು ಶುಲ್ಕವನ್ನು ಪಾವತಿಸಬೇಕಿದೆ. ಅಷ್ಟುಪ್ರಮಾಣದ ಶುಲ್ಕವನ್ನು ಪಾವತಿಸಲು ನಮ್ಮ ಬಳಿ ಹಣ ಇರುವುದಿಲ್ಲ. ಆದ ಕಾರಣ ಶುಲ್ಕ ಪಾವತಿಸಲು 20 ಲಕ್ಷ ರು. ಹಣವನ್ನು ಹೂಡಿಕೆ ಮಾಡಿದರೆ 7.5 ರು ಕೋಟಿ ಹಣ ನೀಡುವುದಾಗಿ ಜನರಿಗೆ ಆರೋಪಿಗಳು ನಂಬಿಸಿ ವಂಚಿಸಿದ್ದರು. ಈ ಬಗ್ಗೆ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಸಂತ್ರಸ್ತರು ದೂರು ನೀಡಿದ್ದರು ಎಂದು ನಗರ ಜಂಟಿ ಆಯುಕ್ತ (ಅಪರಾಧ) ಡಾ.ಎಸ್‌.ಡಿ. ಶರಣಪ್ಪ ತಿಳಿಸಿದ್ದಾರೆ.

100 ಅಡಿ ಏಕಶಿಲಾ ಕೆಂಪೇಗೌಡರ ಕಲ್ಲಿನ ಪ್ರತಿಮೆ: ಸಚಿವ ಮುನಿರತ್ನ

ಆರ್‌ಬಿಐ ಹೆಸರಿನಲ್ಲಿ ವಂಚನೆ, ಜನರ ಜಾಗ್ರತೆಗೆ ಆಯುಕ್ತ ಕರೆ: ಈ ಆರೋಪಿಗಳೆಲ್ಲ ಸ್ನೇಹಿತರು. ಸುಲಭವಾಗಿ ಹಣ ಸಂಪಾದನೆ ಸಂಬಂಧ ವಂಚನೆ ಕೃತ್ಯಕ್ಕಿಳಿದಿದ್ದರು. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ತನಿಖೆ ನಡೆದಿದೆ. ಠೇವಣಿ ನೆಪದಲ್ಲಿ ಕೋಟ್ಯಂತರ ರು. ವಂಚನೆಗೆ ಆರೋಪಿಗಳು ಸಂಚು ರೂಪಿಸಿದ್ದರು. ಇಂಟರ್‌ ನೆಟ್‌ ಸೇರಿದಂತೆ ಇತರೆಡೆ ಲಭ್ಯವಿರುವ ಆರ್‌ಬಿಐ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಲಾಂಛನವನ್ನು ದುರ್ಬಳಕೆ ಮಾಡಿಕೊಂಡು ಕೆಲವು ಕಿಡಿಗೇಡಿಗಳ ವಂಚನೆ ಕೃತ್ಯಗಳ ಬಗ್ಗೆ ಜನರು ಜಾಗ್ರತೆ ವಹಿಸಬೇಕು ಎಂದು ಜಂಟಿ ಆಯುಕ್ತ ಶರಣಪ್ಪ ಮನವಿ ಮಾಡಿದ್ದಾರೆ.

click me!